ನವದೆಹಲಿ: ಕೋವಿಡ್-19 ವಿರುದ್ಧ ಬೂಸ್ಟರ್ ಲಸಿಕೆ ಡೋಸ್ನ ಅಗತ್ಯವನ್ನು ಬೆಂಬಲಿಸಲು ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ಅವರು ಹೇಳಿದ್ದಾರೆ.
ಭಾರತದ ವಯಸ್ಕ ಜನಸಂಖ್ಯೆಗೆ ಎರಡನೇ ಡೋಸ್ ಪೂರ್ಣಗೊಳಿಸುವುದು ಸದ್ಯ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.
ಮೂಲಗಳ ಪ್ರಕಾರ, ಬೂಸ್ಟರ್ ಡೋಸ್ ಸಮಸ್ಯೆಯನ್ನು ಭಾರತದಲ್ಲಿನ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್ಟಿಎಜಿಐ) ಮುಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
“ಎಲ್ಲಾ ವಯಸ್ಕ ಜನಸಂಖ್ಯೆಗೆ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಅನ್ನು ನೀಡುವುದು ಮತ್ತು ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವು ಲಸಿಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸದ್ಯಕ್ಕೆ ಸರ್ಕಾರದ ಆದ್ಯತೆಯಾಗಿದೆ” ಎಂದಿದ್ದಾರೆ.
ಇತ್ತೀಚೆಗೆ ಬೂಸ್ಟರ್ ಡೋಸ್ ನೀಡುವ ಸಂಭವನೀಯತೆಯ ಕುರಿತು ಮಾತನಾಡಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ನಮ್ಮ ಬಳಿ ಸಾಕಷ್ಟು ದಾಸ್ತಾನುಗಳು ಲಭ್ಯವಿವೆ ಮತ್ತು ಎರಡು ಡೋಸ್ಗಳನ್ನು ಅರ್ಹ ಸಂಪೂರ್ಣ ಜನಸಂಖ್ಯೆಗೆ ನೀಡುವುದು ನಮ್ಮ ಗುರಿಯಾಗಿದೆ. ನಂತರ, ತಜ್ಞರ ಶಿಫಾರಸಿನ ಆಧಾರದ ಮೇಲೆ ಬೂಸ್ಟರ್ ಡೋಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದರು
ಇಂತಹ ವಿಚಾರದಲ್ಲಿ ಸರ್ಕಾರ ನೇರ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ತಜ್ಞರ ತಂಡ ಬೂಸ್ಟರ್ ಡೋಸ್ ನೀಡಬೇಕು ಎಂದು ಹೇಳಿದಾಗ ಅದನ್ನು ಪರಿಗಣಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ತಜ್ಞರ ಅಭಿಪ್ರಾಯವನ್ನು ಅವಲಂಬಿಸಿದೆ ಎಂದಿದ್ದಾರೆ.
ಅಧಿಕಾರಿಗಳ ಪ್ರಕಾರ, ಭಾರತದಲ್ಲಿ ಅರ್ಹ ಜನಸಂಖ್ಯೆಯ ಸುಮಾರು 82 ಪ್ರತಿಶತದಷ್ಟು ಜನರು ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಸುಮಾರು 43 ಪ್ರತಿಶತದಷ್ಟು ಜನರಿಗೆ ಸಂಪೂರ್ಣ ವಸಿಕೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.