ಇಸ್ಲಾಮಾಬಾದ್: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಈಗ ಬಹಿರಂಗವಾಗಿದೆ. ಭಾರತ ತನ್ನ ಮೇಲೆ ಯುದ್ಧವನ್ನು ಸಾರುತ್ತದೆ ಎಂಬ ಭಯದಿಂದಲೇ ಪಾಕಿಸ್ಥಾನ ಅವರನ್ನು ಬಿಡುಗಡೆ ಮಾಡಿದೆ ಎಂಬುದು ತಿಳಿದು ಬಂದಿದೆ.
ಒಂದು ವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಇದ್ದರೆ ಭಾರತ ಪಾಕಿಸ್ಥಾನದ ಮೇಲೆ ದಾಳಿ ನಡೆಸುತ್ತದೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಶಿ ಅವರು ಸಭೆಯಲ್ಲಿ ಹೇಳಿದ್ದರು ಎಂದು ಪಾಕಿಸ್ಥಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ನಿನ್ನೆ ಭಾಷಣ ಮಾಡಿದ ಸಂದರ್ಭದಲ್ಲಿ ಪಾಕಿಸ್ಥಾನ ಮುಸ್ಲಿಂ ಲೀಗ್ ನಾಯಕ ಅಯಾಝ್ ಸಾದಿಕ್ ಅವರು ಹೇಳಿದ್ದಾರೆ. ಸಂಸತ್ತಿನ ಅಧಿವೇಶನದ ವೇಳೆ ಅವರು ಈ ಭಾಷಣ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಖುರೇಶಿ ಅವರು ಸಂಸತ್ತಿನ ಸದಸ್ಯರೊಂದಿಗೆ ಸಭೆ ನಡೆಸಿದ್ದರು, ಸೇನಾ ಮುಖ್ಯಸ್ಥರೊಂದಿಗೆ ಕೂಡ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಅಭಿನಂದನ್ ಅವರನ್ನು ಬಿಡುಗಡೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಅವರು ಹೇಳಿದ್ದಾರೆ.
“ನನಗೆ ನೆನಪಿದೆ ಷಾ ಮೊಹಮ್ಮದ್ ಖುರೇಷಿ ಅವರು ಸಭೆ ನಡೆಸಿದ್ದರು. ಈ ಸಭೆಗೆ ಹಾಜರಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಸಭೆಯ ಕೊಠಡಿಗೆ ಆಗಮಿಸಿದರು. ಅವರ ಕಾಲುಗಳು ನಡುಗುತ್ತಿದ್ದವು, ಆತಂಕಿತರಾಗಿದ್ದರು. ಈ ವೇಳೆ ವಿದೇಶಾಂಗ ಸಚಿವರು, ದೇವರ ಸಲುವಾಗಿ ಅಭಿನಂದನ್ ಅವರನ್ನು ಬಿಟ್ಟು ಬಿಡಿ, ರಾತ್ರಿ 9 ಗಂಟೆಗೆ ಭಾರತ ದಾಳಿ ನಡೆಸುವುದರಲ್ಲಿದೆ ಎಂದು ಹೇಳಿದರು” ಎಂದು ಅವರು ಹೇಳಿದ್ದಾರೆ.
ಅಭಿನಂದನ್ ವಿಷಯದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಬೆಂಬಲಿಸಿವೆ, ಆದರೆ ಅದರಾಚೆಗೆ ಬೆಂಬಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.