ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ಯಾವುದಾದರೂ ಗುರಿಯೆಡೆಗೆ ನಡೆದರೆ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಉತ್ತರ ಪ್ರದೇಶದ ಚಿಂದಿ ಆಯ್ದು ಬದುಕು ಸಾಗಿಸುತ್ತಿರುವ ಕುಟುಂಬವೊಂದರ ಹುಡುಗ. ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪಾಸ್ ಆಗುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಇವರ ಹೆಸರು ಅರವಿಂದ್ ಕುಮಾರ್. ಉತ್ತರ ಪ್ರದೇಶದ ಇವರು ಬಡ ಕುಟುಂಬದಿಂದ ಬಂದವರು. ಚಿಂದಿ ಆಯ್ದು ಜೀವನ ನಡೆಸುವವರು ಎಂಬ ಕಾರಣಕ್ಕೆ ಅನೇಕರಿಂದ ಅವಮಾನಕ್ಕೂ ಒಳಗಾಗಿದ್ದರು. ಆದರೆ ಇದೀಗ ಯಾವುದೇ ತರಬೇತಿ, ಸೌಲಭ್ಯ, ಅನುಕೂಲತೆಗಳು ಇರದೇ ಹೋದರೂ ಇವರು ತಮ್ಮ ಒಂಬತ್ತನೇ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮೆರೆದಿದ್ದಾರೆ. ಆ ಮೂಲಕ ಅವಮಾನಿಸಿದವರ ಮುಂದೆಯೇ ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ತಾವೊಬ್ಬ ವೈದ್ಯನಾಗಬೇಕು ಎಂಬ ಕನಸನ್ನು ಸಾಕಾರಗೊಳಿಸಲು ಸಿದ್ಧರಾಗಿದ್ದಾರೆ.
ಇವರ ತಂದೆ 5 ನೇ ತರಗತಿ ಕಲಿತವರು. ತಾಯಿ ಅವಿದ್ಯಾವಂತೆ. ತಮ್ಮ ವೃತ್ತಿಯ ಕಾರಣಕ್ಕೆ ಅವಮಾನಕ್ಕೆ ತುತ್ತಾಗಿ ಊರನ್ನೇ ತೊರೆಯುವ ಸಂದರ್ಭ ಸಹ ಎದುರಾಗಿತ್ತು ಎಂದು ಅರವಿಂದ್ ಹೇಳುತ್ತಾರೆ. ತಮ್ಮ ಕಷ್ಟದ ನಡುವೆಯೂ ತಮ್ಮ ಹೆತ್ತವರು ನನಗೆ 10 ನೇ ತರಗತಿ ವರೆಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಆ ಬಳಿಕ ಪಿಯುಸಿಯಲ್ಲಿ 60% ಅಂಕ ಪಡೆದೆ. ನನ್ನೊಳಗೆ ನಾನೊಬ್ಬ ವೈದ್ಯನಾಗಬೇಕು ಎಂಬ ಕನಸಿತ್ತು. ಆದ್ದರಿಂದ ನೀಟ್ ಪರೀಕ್ಷೆ ಬರೆದೆ ಎಂದು ಅರವಿಂದ್ ಮಾಹಿತಿ ನೀಡಿದ್ದಾರೆ.
ನೀಟ್ ಪಾಸ್ ಮಾಡಿರುವ ಅರವಿಂದ್ ಅವರಿಗೆ ತಾನೊಬ್ಬ ಮೂಳೆ ತಜ್ಞನಾಗಬೇಕು ಎಂಬ ಬಯಕೆ. ಆ ಮೂಲಕ ಜನರಿಗೆ ಸೇವೆ ಸಲ್ಲಿಸಬೇಕು ಎಂಬ ಮಹತ್ವದ ಆಕಾಂಕ್ಷೆಯನ್ನು ಸಹ ಅವರು ಇಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ತಮ್ಮನ್ನು ಅವಮಾನ ಮಾಡಿದವರ ನಡುವೆಯೇ ತಾನೇನು ಎಂಬುದನ್ನು ಸಾಧಿಸಿ ತೋರಿಸಿರುವ ಅರವಿಂದ್ ಎಲ್ಲರಿಗೂ ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.