ಮೈಸೂರು: ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ಕಡು ಬಡತನದಲ್ಲಿ ಬದುಕು ನಡೆಸುತ್ತಿದ್ದ ಬಾಲಕಿಯರಿಬ್ಬರ ಬದುಕಿಗೆ ನೆರಳಾಗುವ ಮೂಲಕ ಎಎಸ್ಐ ಎಸ್ ದೊರೆಸ್ವಾಮಿ ಅವರು ಮಾದರಿಯಾಗಿದ್ದಾರೆ.
ಎಂಟು ವರ್ಷಗಳ ಹಿಂದೆ ಈ ಮಕ್ಕಳಿಬ್ಬರ ಹೆತ್ತವರು ಮೃತಪಟ್ಟಿದ್ದರು. ಇವರನ್ನು ಇವರ ಅಜ್ಜಿ ನೋಡಿಕೊಳ್ಳುತ್ತಿದ್ದರು. ಆದರೆ ವಯೋ ಸಹಜ ಸಮಸ್ಯೆಗಳಿಂದ ಅಜ್ಜಿ ಸಹ ಮೃತರಾಗಿದ್ದರು ಆ ಬಳಿಕ 17 ವರ್ಷದ ದೀಪಾ (ಹೆಸರು ಬದಲಿಸಲಾಗಿದೆ), 14 ವರ್ಷದ ರಾಣಿ (ಹೆಸರು ಬದಲಿಸಲಾಗಿದೆ) ಮುರುಕಲು ಮನೆಯಲ್ಲಿ, ನಿತ್ಯದ ಕೂಳಿಗೂ ಸಂಕಷ್ಟ ಅನುಭವಿಸುವಂತಾಗಿತ್ತು. ಪ್ರತಿ ವರ್ಷವೂ ಈ ಬಡ ಕುಟುಂಬಕ್ಕೆ ನೆರೆಹೊರೆಯ ಜನರು ಸಹಾಯ ನೀಡುತ್ತಿದ್ದರು. ಆದರೆ ಈ ಬಾರಿಯ ಕೊರೋನಾ ಸಂಕಷ್ಟದ ಕಾರಣದಿಂದ ಈ ಇಬ್ಬರೂ ಮಕ್ಕಳು ಸಂಕಟ ಅನುಭವಿಸುವಂತಾಗಿತ್ತು.
ಈ ಮಕ್ಕಳ ಸಮಸ್ಯೆಯನ್ನು ತಿಳಿದ ದೊರೆಸ್ವಾಮಿ ಅವರು ಈ ಮಕ್ಕಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇವರ ಪತ್ನಿ ಚಂದ್ರಿಕಾ ಅವರು ಮಕ್ಕಳ ಪೋಷಣೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದಾದ ಬಳಿಕ ಇವರ ಮನೆಯನ್ನು ಸುಮಾರು ಮೂರು ಲಕ್ಷ ರೂ. ಗಳನ್ನು ವೆಚ್ಚ ಮಾಡಿ ಪುನರ್ ನಿರ್ಮಾಣ ಮಾಡಿದ್ದಾರೆ. ಈ ಮೊದಲು ಶೌಚಾಲಯ, ಸ್ನಾನಗೃಹ ಇಲ್ಲದ ಮನೆಗೆ ಈ ವ್ಯವಸ್ಥೆ ಕಲ್ಪಿಸಿದ್ದಾರೆ.
ಹಾಗೆಯೇ ಮಕ್ಕಳ ವಿದ್ಯಾಭ್ಯಾಸದ ನಿಟ್ಟಿನಲ್ಲಿಯೂ ಕ್ರಮ ಕೈಗೊಂಡಿರುವ ಪೊಲೀಸ್ ಅಧಿಕಾರಿ, ಈ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕ ಅನುಕೂಲ ಕಲ್ಪಿಸಿದ್ದಾರೆ. ಹಾಗೆಯೇ ಆನ್ಲೈನ್ ತರಗತಿಗಳಿಗಾಗಿ ಸ್ಮಾರ್ಟ್ಫೋನ್ ಕೊಡಿಸಿದ್ದಾರೆ. ಆ ಮೂಲಕ ಈ ಇಬ್ಬರು ಅನಾಥರ ಬಾಳಿಗೆ ಬೆಳಕು ನೀಡುವ ಕೆಲಸವನ್ನು ಪೊಲೀಸ್ ಅಧಿಕಾರಿ ದೊರೆಸ್ವಾಮಿ ಅವರ ಕುಟುಂಬ ಮಾಡಿದೆ. ಹಾಗೆಯೇ ಈ ಮಕ್ಕಳ ವಿದ್ಯಾಭ್ಯಾಸ ಮತ್ತು ಬದುಕಿನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವ ಧರ್ಮ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಕ್ಕಳು, ಪೊಲೀಸ್ ಅಧಿಕಾರಿ ದೊರೆಸ್ವಾಮಿ ಅವರು ತಂದೆಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರಿಗೆ ತಾವು ಅಭಾರಿಗಳಾಗಿದ್ದೇವೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.