ನವದೆಹಲಿ: ಸಂಸತ್ ಭವನದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಆರ್ಪಿಎಫ್ನ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಳಿಕ ಈತನನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸುವ ಸಂದರ್ಭದಲ್ಲಿ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತನ ಬಂಧನದ ಬಳಿಕ ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ ಕೆಲವು ಕೋಡ್ವರ್ಡ್ಸ್ ಸೇರಿದಂತೆ ಇನ್ನಿತರ ಮಾಹಿತಿಗಳೂ ದೊರೆತಿರುವುದಾಗಿ ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಈತನಿಂದ ವಶಕ್ಕೆ ತೆಗೆದುಕೊಳ್ಳಲಾದ ಬ್ಯಾಗ್ನಲ್ಲಿ ಎರಡು ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಗಳಿದ್ದವು. ಈ ಗುರುತಿನ ಚೀಟಿಗಳಲ್ಲಿ ಬೇರೆ ಬೇರೆಯ ಹೆಸರುಗಳಿರುವುದಾಗಿಯೂ ತಿಳಿದು ಬಂದಿದೆ. ಡ್ರೈವಿಂಗ್ ಲೈಸೆನ್ಸ್ನಲ್ಲಿ ಪಿರ್ದೋಸ್ ಎಂಬುದಾಗಿ ಹೆಸರಿದ್ದು, ಆಧಾರ್ ಕಾರ್ಡ್ನಲ್ಲಿ ಮನ್ಸೂರ್ ಎಂಬ ಹೆಸರಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ. ಬಂಧಿತ ವ್ಯಕ್ತಿ ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯ ಬಿರ್ವಾದ ನಿವಾಸಿ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಈ ವ್ಯಕ್ತಿ 2016 ರಲ್ಲಿಯೂ ತಾನು ದೆಹಲಿಗೆ ಬಂದಿದ್ದಾಗಿ ತಿಳಿಸಿದ್ದಾನೆ. ಅಲ್ಲದೆ ಈ ಬಾರಿ ಕೋವಿಡ್ ಸಂದರ್ಭದಲ್ಲಿ ದೆಹಲಿಗೆ ಬಂದಿದ್ದು , ಕೊರೋನಾ ಲಾಕ್ಡೌನ್ ಕಾರಣದಿಂದ ಇಲ್ಲೇ ಇರುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾನೆ. ಆದರೆ ಈತ ಯಾರು, ಈತನ ಕಥೆ ಏನು ಎಂಬುದರ ಸತ್ಯಾಂಶ ಇನ್ನಷ್ಟೇ ಬಯಲಾಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಬಳಿಕ ಬಂಧಿತ ಸಂಶಯಾಸ್ಪದ ವ್ಯಕ್ತಿಯನ್ನು ದೆಹಲಿ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ. ಜೊತೆಗೆ ವಿಚಾರಣೆಯ ವೇಳೆಯಲ್ಲಿ ತಿಳಿದುಬಂದ ಮಾಹಿತಿಯನ್ನು ಇತರ ಭದ್ರತಾ ಏಜೆನ್ಸಿಗಳ ಜೊತೆಗೂ ಹಂಚಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.