ಶಿವಮೊಗ್ಗ: ಕೊರೋನಾ ಅವಧಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಇತರರಿಗೂ ಮಾದರಿಯಾಗಿರುವ ಶಿವಮೊಗ್ಗದ ಆಶಾ ಕಾರ್ಯಕರ್ತೆ ಅನ್ನಪೂರ್ಣಾ ಅವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂಬ ಬಿರುದು ನೀಡಿ ಗೌರವಿಸಿದೆ.
ಶಿವಮೊಗ್ಗದ ತುಂಗಾ ನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು, 2015ರಿಂದಲೂ ಆಶಾ ಕಾರ್ಯಕರ್ತೆಯಾಗಿ ಸಮಾಜಸೇವೆ ಮಾಡುತ್ತಿದ್ದಾರೆ. ಕೊರೋನಾ ಅವಧಿಯಲ್ಲಿ ಜೀವ ಭಯವನ್ನು ಬಿಟ್ಟು ಕಂಟೈನ್ಮೆಂಟ್ ಝೋನ್, ಸೀಲ್ ಡೌನ್ ಆಗಿರುವ ಪ್ರದೇಶಗಳಲ್ಲಿನ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜನಸಾಮಾನ್ಯರಿಂದ ಎದುರಾಗುವ ಸಮಸ್ಯೆಗಳನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕೆಲಸವನ್ನು ಅನ್ನಪೂರ್ಣಾ ಅವರು ನಿರ್ವಹಿಸುತ್ತಿದ್ದಾರೆ. ಇವರ ಈ ಸೇವೆಯನ್ನು ಗಮನಿಸಿರುವ ಕೇಂದ್ರ ಸಚಿವಾಲಯ ಅವರಿಗೆ ‘ಅತ್ಯುತ್ತಮ ಆಶಾ ಕಾರ್ಯಕರ್ತೆ’ ಎಂಬ ಬಿರುದು ನೀಡಿದೆ.
ಇವರು ಕಾರ್ಯ ನಿರ್ವಹಿಸುವ ಪ್ರದೇಶ ಕೊಳಗೇರಿಯಾಗಿದ್ದು, ಸುಮಾರು 3000 ಜನರು ಈ ಪ್ರದೇಶದಲ್ಲಿ ವಾಸವಿದ್ದಾರೆ. ಹತ್ತು ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಇಲ್ಲಿನ ಜನರಿಗೆ ಕೊರೋನಾ ಕುರಿತ ಎಚ್ಚರಿಕೆಯನ್ನು, ಮಾಹಿತಿಯನ್ನು ಅನ್ನಪೂರ್ಣಾ ಸಮರ್ಥವಾಗಿ ನೀಡುತ್ತಿದ್ದಾರೆ. ಜೊತೆಗೆ ಇಲ್ಲಿಗೆ ಹೊರ ದೇಶ, ಹೊರ ರಾಜ್ಯದವರು ಬಂದ ಪಕ್ಷದಲ್ಲಿ ಅವರ ಮಾಹಿತಿಗಳನ್ನು ಕಲೆಹಾಕಿ, ಅವರು ಕೊರೋನಾ ಲಕ್ಷಣಗಳಿಂದ ಬಳಲುತ್ತಿದ್ದಾರೆಯೋ ಎಂಬುದರ ಸಮೀಕ್ಷೆ ಯನ್ನೂ ನಡೆಸುತ್ತಿದ್ದಾರೆ. ಜೊತೆಗೆ ಅವರನ್ನು ಕ್ವಾರಂಟೈನ್ ಮಾಡುವತ್ತಲೂ ಇವರು ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಕೆಲಸಗಳ ಜೊತೆಗೆ, ಅನ್ನಪೂರ್ಣಾ ಅವರು ಮತ್ತೊಂದು ಸಾಧನೆ ಮೆರೆದಿದ್ದು, ಬಾಲ್ಯ ವಿವಾಹವೊಂದನ್ನು ತಡೆದು, ಎರಡೂ ಕುಟುಂಬಗಳ ಮನವೊಲಿಸುವ ಮೂಲಕ ಅಪ್ರಾಪ್ತ ಬಾಲಕಿನ್ನು ಸಾಮಾಜಿಕ ಪಿಡುಗಿನಿಂದ ರಕ್ಷಿಸಿದ್ದಾರೆ. ಇವರ ಈ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ಪಡೆದಿರುವ ಕೇಂದ್ರ ಸರ್ಕಾರ ಅವರಿಗೆ ಬಿರುದಿನ ಸನ್ಮಾನವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.