ಶಿವಮೊಗ್ಗ: ಪ್ರಧಾನಿ ಮೋದಿ ಅವರ ಲೋಕಲ್ ಫಾರ್ ವೋಕಲ್ ಕರೆಯಿಂದ ಪ್ರೇರಣೆ ಪಡೆದಿರುವ ಶಿವಮೊಗ್ಗ ಜಿಲ್ಲೆಯ ನಿವೇದನ್ ನೆಂಪೆ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಈ ಹಿಂದೆ ಚಹಾ, ಜ್ಯೂಸ್, ವಾಹನಗಳಲ್ಲಿ ಬಳಕೆ ಮಾಡುವ ಫರ್ಫ್ಯೂಮ್ ಮೊದಲಾದವುಗಳನ್ನು ಮಲೆನಾಡಿನ ಜನರ ಜೀವನಾಡಿ ಅಡಿಕೆಯಿಂದಲೇ ತಯಾರು ಮಾಡುವ ಮೂಲಕ ಹೆಚ್ಚಿನವರಿಗೆ ಪರಿಚಿತರಾಗಿದ್ದ ನಿವೇದನ್, ಸದ್ಯ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಅರೆಕಾ ಸ್ಯಾನಿಟೈಸರ್ ತಯಾರಿಸುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚು ಬೆಳೆಯುವ ರೈತರ ಜೀವನಾಧಾರವಾದ ಅಡಿಕೆಯನ್ನೇ ಬಳಸಿಕೊಂಡು ಅದರಿಂದಲೇ ವಿವಿಧ ಸಂಶೋಧನೆ ಮಾಡುತ್ತಿರುವ ನಿವೇದನ್, ಸ್ಯಾನಿಟೈಸರ್ ತಯಾರಿಕೆಯನ್ನು ಮಾಡುವುದು ಹೇಗೆ ಎಂಬುದನ್ನು ಇತರರಿಗೂ ತಿಳಿಸಲು ಉತ್ಸುಕರಾಗಿದ್ದಾರೆ. ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಕೆಲಸವನ್ನು ಹಳ್ಳಿ ಹಳ್ಳಿಗಳಿಂದಲೇ ಆರಂಭ ಮಾಡಬೇಕೆಂಬ ಸದುದ್ದೇಶವನ್ನಿಟ್ಟುಕೊಂಡಿರುವ ಇವರು ಇತರರಿಗೂ ಅಡಿಕೆ ಸ್ಯಾನಿಟೈಸರ್ ತಯಾರಿಸುವಂತೆ ತಿಳಿಸಿದ್ದು, ಸೂಕ್ತ ಮಾರ್ಗದರ್ಶನ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಅಡಿಕೆಯಲ್ಲಿ ಗ್ಯಾಲಿಕ್ ಆಸಿಡ್ ಇದ್ದು, ಇದು ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಾಕ್ಟೀರಿಯಾ ವೈರಸ್ಗಳನ್ನು ನಾಶ ಮಾಡುತ್ತದೆ. ಅಡಿಕೆಯಿಂದ ತಯಾರಿಸಲಾಗುವ ಸ್ಯಾನಿಟೈಸರ್ಗೆ ಕೆಮಿಕಲ್, ಕಲರಿಂಗ್ ಸಹ ಬಳಕೆ ಮಾಡಬೇಕಾಗಿಲ್ಲ. ನೈಸರ್ಗಿಕ ಪ್ರಕ್ರಿಯೆಯಲ್ಲಿಯೇ ಈ ಸ್ಯಾನಿಟೈಸರ್ ಸಿದ್ಧ ಪಡಿಸಬಹುದಾಗಿದೆ ಎಂಬ ಮಾಹಿತಿಯನ್ನು ನಿವೇದನ್ ನೀಡಿದ್ದಾರೆ.
ಈಗಾಗಲೇ ಕೊರೋನಾ ಕಾರಣದಿಂದಾಗಿ ಅದೆಷ್ಟೋ ಜನರು ಕೆಲಸ ಕಳೆದುಕೊಂಡು ಮನೆ ಸೇರುವಂತಾಗಿದೆ. ಅಂತಹ ವ್ಯಕ್ತಿಗಳು ಸ್ವಾವಲಂಬನೆಯ ಹೆಜ್ಜೆ ಇರಿಸಲು ಬಯಸಿದಲ್ಲಿ ಅಡಿಕೆ ಸ್ಯಾನಿಟೈಸರ್ ತಯಾರಿಸುವ ಮೂಲಕವೂ ಬದುಕು ಕಟ್ಟಿಕೊಳ್ಳಬಹುದು. ಅವರಿಗೆ ಬೇಕಾದ ಸಹಕಾರ ನೀಡುವ ಭರವಸೆಯನ್ನೂ ನಿವೇದನ್ ಅವರು ನೀಡಿದ್ದಾರೆ. ಲಿಕ್ವಿಡ್ ಮತ್ತು ಜೆಲ್ ಎರಡು ವಿಧಗಳಲ್ಲಿ ಸ್ಯಾನಿಟೈಸರ್ ತಯಾರಿಕೆ ಸಾಧ್ಯವಿದ್ದು, ಉತ್ಸಾಹಿಗಳಿಗೆ ತಯಾರಿಕಾ ವಿಧಾನ ತಿಳಿಸಿಕೊಡುವುದಾಗಿಯೂ ನಿವೇದನ್ ತಿಳಿಸಿದ್ದಾರೆ.
ಅಡಿಕೆ ಕೇವಲ ತಂಬಾಕು ಪದಾರ್ಥವಲ್ಲ. ಅಡಿಕೆಯನ್ನು ಬೇರೆ ಯಾವೆಲ್ಲಾ ವಿಧದಲ್ಲಿ ಬಳಕೆ ಮಾಡಬಹುದು ಎಂಬುದನ್ನು ನಿವೇದನ್ ಅವರು ತೋರಿಸಿಕೊಟ್ಟಿದ್ದಾರೆ. ಇದು ಅಡಿಕೆ ಬೆಳೆಗಾರರಲ್ಲಿ ಭರವಸೆ ಮೂಡಿಸಿದರೆ, ಕೆಲಸವಿಲ್ಲದೆ ಕೈಚೆಲ್ಲಿ ಕುಳಿತಿರುವವರಿಗೆ ಭರವಸೆಯ ಬೆಳಕಾಗುತ್ತದೆ ಎಂಬುದರಲ್ಲಿಯೂ ಸಂದೇಹವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.