ಮಧ್ಯಪ್ರದೇಶ: 43 ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿ, ಇನ್ಯಾರದೋ ಮನೆಯಲ್ಲಿ ಆಶ್ರಯ ಪಡೆದಿದ್ದ 90 ವರ್ಷದ ಅಜ್ಜಿ ಪಂಚುಬಾಯಿ ಎಂಬವರು ಮರಳಿ ತಮ್ಮ ಮನೆ, ಕುಟುಂಬವನ್ನು ಸೇರಿಕೊಂಡಿದ್ದಾರೆ. ಗೂಗಲ್ ಮತ್ತು ವಾಟ್ಸಾಪ್ ಸಹಾಯದಿಂದ ಕುಟುಂಬದ ಮಾಹಿತಿ ತಿಳಿದುಕೊಂಡು ಈ ಅಜ್ಜಿಯನ್ನು ಅವರ ಸಂಬಂಧಿಕರೊಂದಿಗೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ ದಾಮೋಹ್ ಜಿಲ್ಲೆಯ ಇಸಾರ್ ಖಾನ್ ಅವರ ಕುಟುಂಬ.
ಸುಮಾರು ನಾಲ್ಕು ದಶಕಗಳ ಹಿಂದೆ ಮಧ್ಯಪ್ರದೇಶದ ಇಸಾರ್ ಖಾನ್ ಅವರ ತಂದೆ ನೂರ್ ಖಾನ್ ಎಂಬವರು ರಸ್ತೆ ಬದಿಯಲ್ಲಿ ಜೇನುನೊಣಗಳ ದಾಳಿಯಿಂದ ಗಾಯಗೊಂಡು ನರಳುತ್ತಿದ್ದ ಪಂಚುಬಾಯಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ನೀಡಿದ್ದರು. ಆದರೆ ಆಕೆ ಯಾರು, ಯಾವ ಊರು ಆಕೆಯ ಕಥೆ ಏನೆಂಬುದಕ್ಕೆ ಸರಿಯಾದ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಅವರನ್ನು ತಮ್ಮ ಮನೆಯ ಸದಸ್ಯಳೆಂದೇ ಭಾವಿಸಿ ಅವರಿಗೆ ಆಶ್ರಯ ನೀಡಿದರು. ನಂತರದ ದಿನಗಳಲ್ಲಿ ಪಂಚುಬಾಯಿ ಅವರು ಆ ಮನೆಯ ಅಚ್ಚಾನ್ (ಚಿಕ್ಕಮ್ಮ) ನಾಗಿ, ಆ ಮನೆಯ ಸದಸ್ಯಳೆಂದೇ ಇಡೀ ಊರಿನ ಜನರಿಗೂ ಪರಿಚಿತರಾಗಿದ್ದರು. ನೂರ್ ಖಾನ್ ಅವರ ಕುಟುಂಬವೂ ಅವರನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸಿ ಅವರನ್ನು ಪೋಷಿಸುತ್ತಿತ್ತು ಎಂದು ವರದಿಯಾಗಿದೆ.
ಪಂಚುಬಾಯಿ ಅವರು ಮರಾಠಿ ಮಾತನಾಡುತ್ತಿದ್ದು, ಅವರಿಂದ ಅವರ ಕುಟುಂಬ ವರ್ಗದ ಮಾಹಿತಿ ಪಡೆದುಕೊಳ್ಳಲು ನೂರ್ ಖಾನ್ ಅವರ ಪುತ್ರ ಇಸಾರ್ ಖಾನ್ ಅವರು ಅನೇಕ ಪ್ರಯತ್ನಗಳನ್ನು ನಡೆಸಿದ್ದರು. ಸದ್ಯ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಅಚ್ಚಾನ್ ಜೊತೆಗೆ ಮಾತುಕತೆ ನಡೆಸುವಾಗ ಆಕೆ ಖಂಜಮ್ ನಗರವನ್ನು ಗುರುತಿಸಿದ್ದು, ಅಲ್ಲಿ ಆಕೆಯ ಮನೆ ಇದ್ದುದಾಗಿ ತಿಳಿಸಿದ್ದಾಳೆ. ಇವನ್ನೆಲ್ಲಾ ವಾಟ್ಸಾಪ್ ಮೂಲಕ ದಾಖಲಿಸಿಕೊಂಡ ಇಸಾರ್ ಮತ್ತು ಅವರ ಗೆಳೆಯರು ಅಮರಾವತಿ ಜಿಲ್ಲೆಯ ಖಂಜಮ್ನ ನಗರ ಪಂಚಾಯತ್ ಅನ್ನು ಸಂಪರ್ಕಿಸಿ ಅಜ್ಜಿಯ ಕುಟುಂಬದ ಬಗ್ಗೆ ಮಾಹಿತಿ ಪಡೆಯಲು ಪ್ರಾರಂಭಿಸುತ್ತಾರೆ. ಅದರಂತೆ ಅವರಿಗೆ ನಗರ ಪಂಚಾಯತ್ನಿಂದ ಖಂಜಾಮ್ನ ಕೀಯೋಸ್ಕ್ ಸಂಸ್ಥೆಯ ಮಾಲೀಕ ಅಭಿಷೇಕ್ ಅವರ ಸಂಪರ್ಕವಾಗುತ್ತದೆ. ಅವರ ಸಹಕಾರದೊಂದಿಗೆ ಇಡೀ ಹಳ್ಳಿಯಲ್ಲಿ ವಾಟ್ಸಾಪ್ ಮೂಲಕ ಪಂಚುಬಾಯಿ ಅವರ ಚಿತ್ರ, ಆಕೆಯ ಹೇಳಿಕೆಗಳನ್ನು ಎಲ್ಲರಿಗೂ ಶೇರ್ ಮಾಡಲಾಯಿತು.
ಈ ಕಾರ್ಯದಿಂದಾಗಿ ಅಜ್ಜಿಯ ಗುರುತು ಹಿಡಿದ ಹಳ್ಳಿಗರು ಅವರ ಕುಟುಂಬ ಸದಸ್ಯರು ನಾಗ್ಪುರದಲ್ಲಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲಿಂದ ಇಸಾರ್ ಅವರು ನಾಗ್ಪುರದಲ್ಲಿದ್ದ ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಶಿಂಧೆ ಅವರನ್ನು ಸಂಪರ್ಕಿಸಿ, ಪಂಚುಬಾಯಿ ಅವರ ಮಾಹಿತಿ ನೀಡುತ್ತಾರೆ. 43 ವರ್ಷಗಳಿಂದ ತಮ್ಮ ಅಜ್ಜಿಯ ಹುಡುಕಾಟ ನಡೆಸುತ್ತಿದ್ದ ಕುಟುಂಬ ಮಾಹಿತಿ ಸಿಕ್ಕೊಡನೆ ಇಸಾರ್ ಅವರ ಬಳಿ ಬಂದು ತಮ್ಮ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
43 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಜ್ಜಿಯ ಬಗ್ಗೆ ಪೊಲೀಸರಿಗೆ ಮಿಸ್ಸಿಂಗ್ ಕೇಸ್ ನೀಡಿದ್ದರೂ ಯಾವುದೇ ಸುಳಿವು ದೊರೆತಿರದ ಹಿನ್ನೆಲೆಯಲ್ಲಿ ಪೃಥ್ವಿ ಅವರ ಕುಟುಂಬವೂ ಕೈಚೆಲ್ಲಿ ಕುಳಿತಿತ್ತು. ಆದರೆ ಈಗ ಗೂಗಲ್ ಮತ್ತು ವಾಟ್ಸಾಪ್ ಕಾರಣದಿಂದಾಗಿ ಅಜ್ಜಿ ಮತ್ತೆ ತಮ್ಮವರನ್ನು ಸೇರುವಂತಾಗಿದ್ದು, ಇದಕ್ಕೆ ಆಕೆ ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರನ್ನು ಈವರೆಗೆ ತಮ್ಮ ಮನೆಯ ಸದಸ್ಯೆ ಎಂದೇ ಭಾವಿಸಿ ಕಾಪಾಡಿದ ಇಸಾರ್ ಖಾನ್ ಅವರ ಕುಟುಂಬ ವರ್ಗಕ್ಕೂ ಧನ್ಯವಾದವನ್ನೂ ಸಲ್ಲಿಸಿದ್ದಾರೆ.
ಇನ್ನು ಈವರೆಗೆ ತಮ್ಮ ಮನೆಯ ಅಚ್ಚಾನ್ ಆಗಿದ್ದ ಅಜ್ಜಿಯನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಇಸಾರ್ ಅವರ ಕುಟುಂಬವೂ ಕಣ್ಣೀರು ಹರಿಸಿದ್ದು, ಮಾನವೀಯತೆ ಇನ್ನೂ ಬದುಕಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ 43 ವರ್ಷಗಳ ಹಿಂದೆ ತನ್ನವರನ್ನು ಕಳೆದುಕೊಂಡಿದ್ದ ಅಜ್ಜಿಗೆ ಮತ್ತೆ ತನ್ನವರನ್ನು ಸೇರುವಲ್ಲಿ ಗೂಗಲ್ ಮತ್ತು ವಾಟ್ಸಾಪ್ ಗಳು ಸಹಾಯ ಮಾಡಿವೆ ಎಂಬುದು ಗಮನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.