ಬೆಂಗಳೂರು: ಕೊರೋನಾ ಲಾಕ್ಡೌನ್ನಿಂದ ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಈ ಬಗ್ಗೆ ಸೂಕ್ತ ಪರಿಹಾರ ಸೂಚಿಸುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಲ್ಲಿ ಈರುಳ್ಳಿ ಬೆಳೆದ ಚಿತ್ರದುರ್ಗದ ವಸಂತಿ ಎಂಬ ಮಹಿಳೆ ತನ್ನ ಸಂಕಷ್ಟವನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದಳು. ಸರಿಯಾದ ಮಾರುಕಟ್ಟೆ, ಬೆಲೆ ಸಿಗುತ್ತಿಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿ ಆಕೆಗೆ ಕರೆ ಮಾಡಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಒಂದು ಚೀಲ ಈರುಳ್ಳಿ ಬೆಳೆಯಲು ರೈತರು 500 ರಿಂದ 600 ರೂ. ವ್ಯಯಿಸುತ್ತಾರೆ. ಆದರೆ ಬೆಲೆ ಮಾತ್ರ 200 -300 ಆಸುಪಾಸಿನಲ್ಲಿದೆ. ಇದರಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಆದ್ದರಿಂದ ಸರ್ಕಾರವೇ ಈರುಳ್ಳಿ ಖರೀದಿಸುವಂತೆ ವಸಂತಿ ಮನವಿ ಮಾಡಿಕೊಂಡಿದ್ದರು. ಇನ್ನು ಅತ್ತ ಮಾರಾಟ ಮಾಡಲೂ ಸಾಧ್ಯವಾಗದೆ, ಇತ್ತ ಅವುಗಳನ್ನು ಕಾಪಿಟ್ಟುಕೊಳ್ಳಲು ಸರಿಯಾದ ಸ್ಟೋರೇಜ್ ವ್ಯವಸ್ಥೆಯೂ ಇಲ್ಲದೆ ರೈತ ದಿಕ್ಕೆಟ್ಟಿರುವುದಾಗಿ ಅವರು ತಿಳಿಸಿದ್ದರು. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಸರ್ಕಾರ ಕೈಗೊಳ್ಳದೇ ಇದ್ದಲ್ಲಿ ರೈತರ ಆತ್ಮಹತ್ಯೆ ತಡೆಯುವುದು ಹೇಗೆ ಸಾಧ್ಯ ಎಂದೂ ವಸಂತಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು.
ಈ ವಿಚಾರ ಗಮನಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಆಕೆಗೆ ಕರೆಮಾಡಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಿಭಿನ್ನ ರೀತಿಯಲ್ಲಿ ಸರ್ಕಾರದ ಗಮನ ಸೆಳೆದ ಆಕೆಯ ಜಾಣತನವನ್ನು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.