ಗುವಾಹಟಿ: ಈಶಾನ್ಯ ಪ್ರದೇಶದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಒಂದು ಕಾಲದಲ್ಲಿ ಬಂಡುಕೋರರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದ ಈ ಪ್ರದೇಶದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಬಂಡುಕೋರತನ ಅಲ್ಲಿಂದ ಸಂಪೂರ್ಣ ನಿರ್ಮೂಲನೆಯಾಗುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂನಲ್ಲಿ ನಿಷೇಧಕ್ಕೆ ಒಳಗಾದ ಉಗ್ರ ಸಂಘಟನೆಗಳ ಒಟ್ಟು 644 ಸದಸ್ಯರು ಸರ್ಕಾರಕ್ಕೆ ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಬರುವ ನಿರ್ಧಾರ ಕೈಗೊಂಡಿದ್ದಾರೆ.
ದೇಶದಲ್ಲಿ ಸಮಾಜಘಾತುಕ ಶಕ್ತಿಗಳು ಅಶಾಂತಿಯನ್ನು ಸೃಷ್ಟಿಸಲು ಹವಣಿಸುತ್ತಿರುವ ಸಂದರ್ಭದಲ್ಲಿ ಅಸ್ಸಾಂನಲ್ಲಿ 644 ಭಯೋತ್ಪಾದಕರು ಶರಣಾಗಿರುವುದು ವಿಶೇಷ ಎನಿಸಿದೆ. ಇಷ್ಟು ಪ್ರಮಾಣದ ಉಗ್ರರು ಉಗ್ರವಾದವನ್ನು ತ್ಯಜಿಸಿ ಒಂದೇ ದಿನದಲ್ಲಿ ಶರಣಾಗುವುದು ಇದೆ ಮೊದಲು ಎಂದು ಮೂಲಗಳು ಹೇಳಿವೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ನಿಷೇಧಿತ ಎನ್ಡಿಎಫ್ಡಿ, ಯುಎಲ್ಎಫ್ಎ, ಕೆಎಲ್ಒ, ಸಿಪಿಐ(ನಕ್ಸಲ್), ಎನ್ಎಸ್ಎಲ್ಎ, ಎಡಿಎಫ್ ಹಾಗೂ ಎನ್ಎಲ್ಎಫ್ಬಿ ಬಂಡುಕೋರ ಸಂಘಟನೆಗಳಿಗೆ ಸೇರಿದ 644 ಸದಸ್ಯರು ಸರ್ಕಾರಕ್ಕೆ ಶರಣಾಗತರಾಗಿದ್ದಾರೆ ಮತ್ತು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ.
ಶರಣಾಗತಿಯ ಸಂದರ್ಭದಲ್ಲಿ ಉಗ್ರರು 177 ಶಸ್ತ್ರಾಸ್ತ್ರಗಳು, 58 ಸಿಡಿಮದ್ದುಗಳು, 1.93 ಕೆಜಿ ತೂಕದ ಸ್ಫೋಟಕಗಳು, 52 ಗ್ರೆನೇಡ್ಗಳು, 71 ಬಾಂಬ್ಗಳು, 3 ರಾಕೆಟ್ ಲಾಂಚರ್ ಗಳು 306 ಸ್ಫೋಟಕ ಸಾಧನಗಳು ಹಾಗೂ 15 ಚೂಪಾದ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ.
ಶರಣಾಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಸೋನೊವಾಲ್ ಅವರು, “ಶರಣಾದ ವ್ಯಕ್ತಿಗಳಿಗೆ ಸರ್ಕಾರದಲ್ಲಿರುವ ಯೋಜನೆಗಳಡಿ ಪುನರ್ವಸತಿ ಕ್ರಮ ಕೈಗೊಳ್ಳಲಾಗುವುದು. ಅಸ್ಸಾಂ ಅಭಿವೃದ್ಧಿಗಾಗಿ ಸಮಾಜದ ಮುಖ್ಯವಾಹಿನಿಗೆ ಮರಳಿದ ನಿಮ್ಮ ಬಗ್ಗೆ ಜನ ಹೆಮ್ಮೆ ಪಡುತ್ತಾರೆ. ಇದೇ ರೀತಿಯಾಗಿ ಮತ್ತಷ್ಟು ವ್ಯಕ್ತಿಗಳು ಶರಣಾಗಿ ಭಾರತದ ಅಭಿವೃದ್ಧಿಗೆ ಸಹಕಾರ ನೀಡಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.