ಕೊಚ್ಚಿ: ಭಾರತೀಯ ಎಡಪಂಥೀಯರ ಬೂಟಾಟಿಕೆಯಿಂದಾಗಿ ಭಾರತದಲ್ಲಿ ಹಿಂದುತ್ವದ ಉದಯವಾಯಿತು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.
“ಹಿಂದುತ್ವವು ಇಂದು ಹೆಚ್ಚು ಪ್ರಾಮುಖ್ಯತೆ ಹೊಂದಲು ಭಾರತೀಯ ಎಡಪಂಥೀಯರ ಬೂಟಾಟಿಕೆ ಒಂದು ಕಾರಣವಾಗಿದೆ. ಎಡ ಪಕ್ಷವು ಈಗ ಕೇರಳದಲ್ಲಿ ಮಾತ್ರ ಅಧಿಕಾರದಲ್ಲಿದೆ, ಆದರೆ ಅದು ಪಶ್ಚಿಮ ಬಂಗಾಳದಲ್ಲಿ, ತ್ರಿಪುರಾಗಳಲ್ಲಿ ಕೂಡ ಅಧಿಕಾರದಲ್ಲಿತ್ತು. ವಿಶ್ವವಿದ್ಯಾನಿಲಯಗಳಲ್ಲಿ, ಬುದ್ಧಿಜೀವಿಗಳಲ್ಲಿ, ಕಲಾವಿದರಲ್ಲಿ ಮತ್ತು ಚಲನಚಿತ್ರ ನಿರ್ಮಾಪಕರಲ್ಲಿ ಎಡಪಂಥೀಯ ಪ್ರಭಾವ ಇದೆ. ಭಾರತಕ್ಕಿಂತ ಇತರ ರಾಷ್ಟ್ರಗಳನ್ನು ಹೆಚ್ಚು ಪ್ರೀತಿಸುತ್ತಿರುವುದರಿಂದಲೇ ಎಡ ಪಕ್ಷ ಸೈದ್ಧಾಂತಿಕವಾಗಿ ಕಪಟವಾಗಿದೆ “ಎಂದು ಗುಹಾ ಶುಕ್ರವಾರ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಹೇಳಿದ್ದಾರೆ.
ಹಿಂದುತ್ವ ಉಗಮಕ್ಕೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಎರಡನೇ ಕಾರಣ ಎಂದಿದ್ದಾರೆ. “ರಾಹುಲ್ ಗಾಂಧಿಯನ್ನು ಮಲಯಾಳಿಗಳು ಸಂಸತ್ತಿಗೆ ಕಳುಹಿಸಿದ್ದೇಕೆ? ರಾಹುಲ್ ಗಾಂಧೀ ವಿರುದ್ಧ ನನಗೆ ವೈಯಕ್ತಿಕ ದ್ವೇಷವಿಲ್ಲ. ಅವರು ಸಜ್ಜನ ವ್ಯಕ್ತಿ. ಆದರೆ ಯುವ ಭಾರತಕ್ಕೆ ರಾಜವಂಶದ 5ನೇ ತಲೆಮಾರಿನ ಅಗತ್ಯವಿಲ್ಲ” ಎಂದಿದ್ದಾರೆ.
“2024ರಲ್ಲೂ ನೀವು ರಾಹುಲ್ ಗಾಂಧೀಯನ್ನು ಮರು ಆಯ್ಕೆ ಮಾಡಿದರೆ, ನೀವು ನರೇಂದ್ರ ಮೋದಿಯವರಿಗೆ ಸಹಾಯ ಮಾಡುತ್ತಿದ್ದೀರಿ ಎಂದೇ ಅರ್ಥ” ಎಂದಿದ್ದಾರೆ.
“ಮೋದಿ ಸ್ವ ನಿರ್ಮಿತ ವ್ಯಕ್ತಿ. ಒಂದು ರಾಜ್ಯವನ್ನು ಅವರು 15 ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಆಡಳಿತಾತ್ಮಕ ಅನುಭವ ಅವರಿಗೆ ಇದೆ. ಅದ್ಭುತ ರೀತಿಯಲ್ಲಿ ಪರಿಶ್ರಮಪಡುತ್ತಾರೆ. ಯುರೋಪಿನಲ್ಲಿ ಅವರೆಂದೂ ಹಾಲಿಡೇ ಮಾಡುವುದಿಲ್ಲ. ನನ್ನನ್ನು ನಂಬಿ, ಗಂಭೀರವಾಗಿಯೇ ಈ ಮಾತನ್ನು ನಾನು ಹೇಳುತ್ತೇನೆ” ಎಂದಿದ್ದಾರೆ.
“ನಾನು ಯುವಕನಾಗಿದ್ದಾಗ ಕಾಂಗ್ರೆಸ್ ಕುಟುಂಬ ವ್ಯವಹಾರ ಆಗಿರಲಿಲ್ಲ. ನೆಹರೂವಿಗೆ ಇಂದಿರಾ ಗಾಂಧಿಯನ್ನು ಉತ್ತರಾಧಿಕಾರಿ ಮಾಡುವ ಬಯಕೆ ಇರಲಿಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಪಕ್ಷವೊಂದು ಕುಟುಂಬ ಉದ್ಯಮವಾಗಿ ಮಾರ್ಪಾಟ ಆಗಿದ್ದೇ ಹಿಂದುತ್ವದ ಉಗಮಕ್ಕೆ ಮೂಲ ಕಾರಣ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.