ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣ ಮತ್ತು ಹಣಕಾಸು ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬುಧವಾರ ರಾತ್ರಿ ಸಿಬಿಐನಿಂದ ಬಂಧಿಸಲ್ಪಟ್ಟ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗುರುವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಐಪಿಸಿಯ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಐಪಿಸಿಯ 420 (ಮೋಸ), ಮತ್ತು ಸೆಕ್ಷನ್ 8, 13 (2), 13 (1) ಡಿ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಸಿಬಿಐ ಈ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಹಣಕಾಸು ವಂಚನೆ ತಡೆ ಕಾಯ್ದೆ 2002 ರ ಅಡಿಯಲ್ಲಿ ಇಡಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಪಿ.ಚಿದಂಬರಂ ಅವರು ದಕ್ಷಿಣ ದೆಹಲಿಯಲ್ಲಿನ ತಮ್ಮ ಮನೆಯಿಂದ ಬುಧವಾರ ಬಂಧನಕ್ಕೊಳಗಾಗಿದ್ದಾರೆ. ನಂತರ ಕೇಂದ್ರೀಯ ತನಿಖಾ ದಳದ (ಸಿಬಿಐ) ಕೇಂದ್ರ ಕಚೇರಿಯಲ್ಲಿ ಅವರನ್ನು ರಾತ್ರಿ ಇಡಲಾಗಿತ್ತು. ಈ ಕೇಂದ್ರ ಕಛೇರಿಯನ್ನು 2011ರಲ್ಲಿ ಚಿದಂಬರಂ ಅವರೇ ಉದ್ಘಾಟಿಸಿದ್ದರು ಎಂಬುದು ಉಲ್ಲೇಖನೀಯ.
ಅವರ ವಿಚಾರಣೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ ಮತ್ತು ಸಿಬಿಐ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ವಿಚಾರಣೆಗೆ 14 ದಿನಗಳ ಸಮಯಾವಕಾಶ ನೀಡುವಂತೆ ನ್ಯಾಯಾಲಯವನ್ನು ಸಿಬಿಐ ಕೋರುವ ಸಾಧ್ಯತೆ ಇದೆ.
ಚಿದಂಬರಂ ಅವರು 2007 ರಲ್ಲಿ ಹಣಕಾಸು ಸಚಿವರಾಗಿದ್ದಾಗ, ಐಎನ್ಎಕ್ಸ್ ಮೀಡಿಯಾ ಎಂಬ ಟೆಲಿವಿಶನ್ ಕಂಪನಿಗೆ ವಿದೇಶಿ ಹೂಡಿಕೆಗೆ ಅನುಕೂಲ ಮಾಡಿಕೊಟ್ಟರು ಎಂದು ಆರೋಪಿಸಲಾಗಿದೆ, ಅವರ ಮಗ ಕಾರ್ತಿ ಚಿದಂಬರಂ ಅವರು ಕಿಕ್ಬ್ಯಾಕ್ ಪಡೆದಿದ್ದಾರೆ ಎನ್ನಲಾಗಿದೆ.
ಶೀನ ಬೋರಾ ಹತ್ಯೆ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿ ಇರುವ ಐಎನ್ಎಕ್ಸ್ ಸಹ-ಸಂಸ್ಥಾಪಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರು ಚಿದಂಬರಂ ಮತ್ತು ಅವರ ಪುತ್ರನ ಹೆಸರನ್ನು ಹಗರಣದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.