ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಶಕ್ತಿಗಳಿಗೆ ದಿಟ್ಟ ಪ್ರತಿಕ್ರಿಯೆಯನ್ನು ನೀಡಲು ಮತ್ತು ವೇಗದ ಆರ್ಥಿಕ ಅಭಿವೃದ್ಧಿಗೆ ಎದುರಾಗುವ ಸವಾಲಗಳನ್ನು ಸದೃಢವಾಗಿ ಎದುರಿಸಲು ನರೇಂದ್ರ ಮೋದಿ ನೇತೃತ್ವದ ಸ್ಪಷ್ಟ ಬಹುಮತವುಳ್ಳ ಸರ್ಕಾರ ಅತ್ಯಗತ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಮೊದಲ ಸಂದರ್ಶನವನ್ನು ನೀಡಿರುವ ಅವರು, ‘ಮೋದಿಯವರ ಮೂಲಕ ನಾವು ದೇಶಕ್ಕೆ ಅತ್ಯಂತ ಬಲಿಷ್ಠ ನಾಯಕನನ್ನು ನೀಡಿದ್ದೇವೆ, ಅವರ ನಾಯಕತ್ವದಲ್ಲಿ ದೇಶ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿ ಹೊರಹೊಮ್ಮಿದೆ. ದೇಶವನ್ನು ಸುಭದ್ರವಾಗಿಡುವ ಸಾಮರ್ಥ್ಯ ಅವರಿಗಿದೆ’ ಎಂದಿದ್ದಾರೆ.
ನರೇಂದ್ರ ಮೋದಿಯವರ ಪ್ರಭಾವಶಾಲಿ ನಾಯಕತ್ವಕ್ಕೆ ಪರ್ಯಾಯವಾಗಿ ನಿಲ್ಲಬಲ್ಲ ನಾಯಕ ಪ್ರತಿಪಕ್ಷಗಳಲ್ಲಿ ಇಲ್ಲ. ಮೋದಿಗೆ ಆತ್ಮವಿಶ್ವಾಸವಿದೆ ಮತ್ತು ಎಲ್ಲಿ ಗಮನ ಹರಿಸಬೇಕು ಎಂಬ ಸ್ಪಷ್ಟ ಕಲ್ಪನೆಯಿದೆ. ಆದರೆ ಪ್ರತಿಪಕ್ಷಕ್ಕೆ ಸ್ಪಷ್ಟ ದಿಕ್ಸೂಚಿಯಿಲ್ಲ, ಅವುಗಳು ಮಾಡುತ್ತಿರುವ ಕಪೋಲಕಲ್ಪಿತ ಆರೋಪಗಳಿಂದ ಏನೂ ಆಗುವುದಿಲ್ಲ’ ಎಂದಿದ್ದಾರೆ.
ಬಿಜೆಪಿ ಈ ಬಾರಿಯ ಚುನಾವಣೆಯಲ್ಲೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಈಶಾನ್ಯ ಭಾರತ, ಪಶ್ಚಿಮಬಂಗಾಳ, ಒರಿಸ್ಸಾ ಮತ್ತು ದಕ್ಷಿಣ ಭಾರತದಲ್ಲಿ ಈ ಬಾರಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದಿದ್ದಾರೆ.
ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಅವರು, ಮೂಲಸೌಕರ್ಯಗಳು ಅತ್ಯಧಿಕ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿರುವ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಯಾವುದೇ ಹುರುಳಿರುವುದಿಲ್ಲ ಎಂದಿದ್ದಾರೆ.
ನಮ್ಮ ಸರ್ಕಾರ 50 ಕೋಟಿ ದಲಿತರ, ಬುಡಕಟ್ಟು ಜನರ, ಬಡವರ ಬದುಕನ್ನು ಸುಧಾರಣೆ ಮಾಡುತ್ತಿದೆ ಎಂದ ಅವರು, ರೈತರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ತಂದಿದ್ದೇವೆ, ವಾರ್ಷಿಕ 6 ಸಾವಿರ ರೂಪಾಯಿಗಳ ಸಹಾಯಧನವನ್ನು ಒದಗಿಸಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.