ನವದೆಹಲಿ: ಬಜೆಟ್ ಅಧಿವೇಶನದ ಕೊನೆಯ ದಿನ ಮತ್ತು 16ನೇ ಲೋಕಸಭಾದ ಕೊನೆಯ ಅಧಿವೇಶನದ ಕೊನೆಯ ದಿನ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, 2014ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಗಳಿಗೆಯನ್ನು ಸ್ಮರಿಸಿಕೊಂಡು, ಮೂರು ದಶಕಗಳ ಬಳಿಕ ಸಂಪೂರ್ಣ ಬಹುಮತವನ್ನು ಪಡೆದ ಪಕ್ಷವೊಂದು ಸರ್ಕಾರ ರಚನೆ ಮಾಡಿದೆ ಎಂದರು.
ಶೇ.100ರಷ್ಟು ಹಾಜರಾತಿಯನ್ನು ಕಂಡ ಕನಿಷ್ಠ 8 ಕಲಾಪಗಳನ್ನು ನಡೆಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಾಹಜನ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
16ನೇ ಲೋಕಸಭೆ ಸದಾ ನೆನಪಿನಲ್ಲಿರುವಂತಹುದು, ಯಾಕೆಂದರೆ ಈ ವೇಳೆ ಸಾಕಷ್ಟು ಸಂಖ್ಯೆಯ ಮಹಿಳಾ ಸಚಿವರನ್ನು ಸಂಪುಟ ಕಂಡಿದೆ. ಈ ಲೋಕಸಭೆ ಇದುವರೆಗೆ 44 ಸಚಿವರುಗಳನ್ನು ಕಂಡಿದೆ. ಇದು ಇದುವರೆಗಿನ ಅಧಿಕ ಸಂಖ್ಯೆಯಾಗಿದೆ. ಮಹಿಳಾ ಭಾಗವಹಿಸುವಿಕೆ ಮತ್ತು ವಿಶ್ವಾಸದ ಮಟ್ಟವೂ ಗಣನೀಯವಾಗಿ ಏರಿದೆ ಎಂದರು.
ಭಾರತದ ಪ್ರಜಾತಾಂತ್ರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಮಹಿಳೆ ಹೊತ್ತಿದ್ದಾರೆ. ವಿದೇಶಾಂಗ ಸಚಿವಾಲಯದ ಉಸ್ತುವಾರಿಯನ್ನು ಮಹಿಳೆ ನೆರವೇರಿಸಿದ್ದಾರೆ, ಲೋಕಸಭಾ ಸ್ಪೀಕರ್ ಮತ್ತು ಲೋಕಸಭಾ ಸೆಕ್ಯೂರಿಟಿ ಜನರಲ್ ಇಬ್ಬರೂ ಮಹಿಳೆಯರಾಗಿದ್ದಾರೆ. ಇದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದರು.
ಕಳೆದ ಐದು ವರ್ಷಗಳಲ್ಲಿ ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ, ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮುವ ಹಾದಿಯಲ್ಲಿದೆ ಎಂದರು. ಅಲ್ಲದೇ, ಸರ್ಕಾರದ ಸಾಧನೆಗಾಗಿ ಅವಿರತ ದುಡಿದ ಸಚಿವರುಗಳನ್ನು, ಸಹೋದ್ಯೋಗಿಗಳನ್ನು ಅವರು ಅಭಿನಂದಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನ, ಆಯುಷ್ಮಾನ್ ಯೋಜನೆ, ಆಧಾರ ಮಸೂದೆ ಮಂಡನೆ, ಸಾಮಾನ್ಯವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಇತ್ಯಾದಿ ಮಹತ್ವದ ಯೋಜನೆಗಳ ಅನುಷ್ಠಾನದ ಮೂಲಕ ಸರ್ಕಾರ ಮಹತ್ವದ ಸಾಧನೆಯನ್ನು ಮಾಡಿದೆ ಎಂದರು.
ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಮರ್ಪಿಸಿದ ಮೋದಿ, ಅವರೊಂದಿಗಿನ ಚರ್ಚೆ, ಸಂವಾದಗಳು ನನ್ನ ಚಿಂತನಾ ಮಟ್ಟವನ್ನು ವೃದ್ಧಿಸಿದೆ ಎಂದರು. ಅಲ್ಲದೇ, ಅಧಿವೇಶನದ ವೇಳೆ ಏರ್ಪಟ್ಟ ಸಣ್ಣ ಪುಟ್ಟ ವಾಗ್ ಸಮರಗಳಿಗೆ ಕ್ಷಮೆ ಇರಲಿ ಎಂದರು.
ತಮ್ಮ ಭಾಷಣವನ್ನು ಸಮಾಪನಗೊಳಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಮೋದಿ, ‘ಈ ಲೋಕಸಭೆಯಲ್ಲಿ ಮೊದಲ ಬಾರಿಗೆ ನಾನು ಅಪ್ಪಿಕೊಳ್ಳುವಿಕೆ ಮತ್ತು ಅಪ್ಪಿ ಹಿಡಿಯುವಿಕೆಯ ನಡುವಣ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡೆ. ಮಾತ್ರವಲ್ಲ ಮೊದಲ ಬಾರಿ ಸಂಸತ್ತಿನಲ್ಲಿ ಒಬ್ಬರು ಕಣ್ಣು ಮಿಟುಕಿಸಿದ್ದನ್ನು ನೋಡಿದೆ, ಇದು ವಿದೇಶಿ ಮಾಧ್ಯಮಗಳನ್ನೂ ಅಚ್ಚರಿಗೊಳಿಸಿತ್ತು’ ಎಂದಿದ್ದಾರೆ.
ಅಲ್ಲದೇ ರಾಹುಲ್, ಒಪ್ಪಂದದ ಬಗ್ಗೆ ನಾನು ಬಾಯಿಬಿಟ್ಟರೆ ಭೂಕಂಪವಾಗುತ್ತದೆ ಎಂದು ರಾಹುಲ್ ಹೇಳಿದ್ದರು, ಅಂತಹುದ್ದೇನೂ ಆದ ಅನುಭವ ನನಗಾಗಲಿಲ್ಲ ಎಂದು ಕಿಚಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.