ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದು ಇಂದಿಗೆ 4 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಟ್ವಿಟರ್ ಮೂಲಕ ತಮ್ಮ ಮನದ ಮಾತನ್ನು ವ್ಯಕ್ತಪಡಿಸಿರುವ ಮೋದಿ, 2014ರ ಮೇ26ರ ನಂತರ ತಮ್ಮ ಸರ್ಕಾರ ಹೇಗೆ ಭಾರತದ ಪರಿವರ್ತನೆಯತ್ತ ಕಾರ್ಯೋನ್ಮುಖವಾಯಿತು ಎಂಬುದನ್ನು ವಿವರಿಸಿದ್ದಾರೆ.
‘2014ರ ಈ ದಿನ, ಭಾರತದ ಪರಿವರ್ತನೆಯ ಕಾರ್ಯದತ್ತ ನಾವು ಪ್ರಯಾಣ ಆರಂಭಿಸಿದೆವು. ಕಳೆದ ನಾಲ್ಕು ವರ್ಷದಲ್ಲಿ ಅಭಿವೃದ್ಧಿ ಒಂದು ರೋಮಾಂಚಕ ಜನ ಚಳುವಳಿಯಾಗಿದೆ, ಭಾರತದ ಪ್ರಗತಿ ಪಥದಲ್ಲಿ ತಾವು ಪಾಲ್ಗೊಂಡ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದೆ. 125 ಕೋಟಿ ಭಾರತೀಯರು ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಟ್ವಿಟರ್ನಲ್ಲಿ ಮೋದಿ ಹೇಳಿದ್ದಾರೆ.
ನಮ್ಮ ಸರ್ಕಾರ ದೇಶದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದ ಅವರು, ನಮಗೆ ಪ್ರತಿ ಬಾರಿಯೂ ಭಾರತವೇ ಮೊದಲು, ಸಂಪೂರ್ಣ ಏಕೀಕರಣಕ್ಕಾಗಿ ನಾವು ಹಲವಾರು ದೂರದೃಷ್ಟಿತ್ವದ, ಜನಸ್ನೇಹಿ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಈ ನಿರ್ಧಾರ ನವಭಾರತದ ಬುನಾದಿಯೂ ಆಗಲಿದೆ ಎಂದಿದ್ದಾರೆ.
ಕೇಂದ್ರವನ್ನು ಬೆಂಬಲಿಸುತ್ತಿರುವ ಜನರಿಗೆ ನನ್ನ ಧನ್ಯವಾದ, ಅವರೇ ನಮ್ಮ ಸಾಮರ್ಥ್ಯ ಎಂದ ಅವರು, ‘ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಾರತೀಯರಿಗೆ ನಾನು ತಲೆ ಬಾಗುತ್ತೇನೆ, ನಿಮ್ಮ ಬೆಂಬಲ ಮತ್ತು ಪ್ರೀತಿ ನಮಗೆ ಸ್ಫೂರ್ತಿ ಮತ್ತು ಸಾಮರ್ಥ್ಯವನ್ನು ನೀಡುತ್ತದೆ, ಇದೇ ಶ್ರದ್ಧೆ ಮತ್ತು ಸ್ಫೂರ್ತಿಯೊಂದಿಗೆ ಭಾರತೀಯರ ಸೇವೆಯನ್ನು ಮುಂದುವರೆಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.