ಮಂಗಳೂರು : ತುಳು ಚಲನಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ `ನಮ್ಮ ಕುಡ್ಲ’ ತುಳು ಸಿನೆಮಾದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮ ನಗರದ ಪಾಂಡೇಶ್ವರದಲ್ಲಿರುವ ಫೋರಂ ಮಾಲ್ನಲ್ಲಿ ಫೆಬ್ರವರಿ 26 ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಖುಷಿ ಫಿಲಂಸ್ನ ಲಾಂಚನದಲ್ಲಿ ಅಮಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ `ನಮ್ಮ ಕುಡ್ಲ’ ತುಳು ಚಲನಚಿತ್ರದಲ್ಲಿ ವಿಭಿನ್ನ ಶೈಲಿಯ ಆರು ಹಾಡುಗಳಿವೆ. ಮಂಗಳೂರಿನವರೇ ಆದ ಗುರುರಾಜ್ ಎಂ.ಬಿ. ಸಂಗೀತ ನಿರ್ದೇಶಿಸಿರುವ ಆರು ಹಾಡುಗಳಲ್ಲಿ ಒಂದು ವಾದ್ಯಸಂಗೀತದ್ದಾಗಿದೆ(ಇನ್ಸ್ಟ್ರುಮೆಂಟಲ್). ಈಗಾಗಲೇ ಚಿತ್ರದ ಟ್ರೈಲರ್ ಮೂಲಕ ಜನರ ಮೆಚ್ಚುಗೆಗಳಿಸಿರುವ `ಯಧಾ ಯಧಾ ಹಿ ಧರ್ಮಸ್ಯ’ ಹಾಡು ಖ್ಯಾತ ಗಾಯಕ ರವೀಂದ್ರ ಪ್ರಭು, ಗುರುರಾಜ್ ಎಂ. ಬಿ ಮತ್ತು ನಿಶ್ಚಲ್ರಾಜ್ ಅವರ ಕಂಠದಲ್ಲಿ ಮೂಡಿಬಂದಿದೆ.
ಈ ಹಾಡಿಗೆ ಯುವ ಪ್ರತಿಭೆ ಸಂದೀಪ್ ಮಧ್ಯ ಸಾಹಿತ್ಯ ನೀಡಿದ್ದಾರೆ. ತುಳು ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಧೀಮಂತ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ಬೈಲ್ ಬರೆದಿರುವ ರೊಮ್ಯಾಂಟಿಕ್ ಹಾಡು `ಉತ್ತರ ಕೊರ್ಪಾನಾ….’ ಪ್ರತಿಭಾವಂತ ಗಾಯಕರಾದ ನಿಶ್ಚಲ್ರಾಜ್ ಮತ್ತು ಮಧುರ ಕಂಠದ ಗಾಯಕಿ ಸಂಗೀತಾ ಬಾಲಚಂದ್ರ ಅವರ ಧ್ವನಿಗಳಲ್ಲಿ ಅದ್ಭುತವಾಗಿದ್ದು, ಜನಮಾನಸದಲ್ಲಿ ನೆನಪುಳಿಯುವಂತಿದೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವ `ವಿಧಿತ ಮಹಿಮೆನಾ….’ ಹಾಡು ಪತ್ರಕರ್ತರೂ ಆಗಿರುವ ಸುರೇಶ್ ಕೊಟ್ಟಾರಿ ಅವರ ಸಾಹಿತ್ಯದೊಂದಿಗೆ `ನಮ್ಮ ಕುಡ್ಲ’ ಸಿನೆಮಾಗೆ ವಿಶೇಷ ಮೆರುಗು ನೀಡಿದೆ.
ಸಿನೆಮಾ ನಟರೂ, ಸಾಹಿತಿಯೂ ಆಗಿರುವ ದಿನೇಶ್ ಅತ್ತಾವರ ಬರೆದಿರುವ `ನಮ್ಮ ಪನ್ಪಿನಾ….’ ಹಾಡಿಗೆ ಯುವ ಪ್ರತಿಭೆ ನೇಹಾ ಮಂಗಳೂರು ಧ್ವನಿ ಸೇರಿಸಿದ್ದಾರೆ. ಈ ಸಿನೆಮಾದ ಪ್ರಮುಖ ಹಾಡನ್ನೂ ದಿನೇಶ್ ಅತ್ತಾವರ ಬರೆದಿದ್ದು, ದೀಪಕ್ ಕೋಡಿಕಲ್ ಮತ್ತು ಗುರುರಾಜ್ ಎಂ.ಬಿ. ಸುಂದರವಾಗಿ ಹಾಡಿದ್ದಾರೆ. ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವ ಗುರುರಾಜ್ ಎಂ.ಬಿ. ತನ್ನ ವಿಭಿನ್ನ ಶೈಲಿಯಲ್ಲಿ `ಉತ್ತರ ಕೊರ್ಪಾನಾ….’ ಹಾಡನ್ನು ವಿಶೇಷ ವಾದ್ಯಗಳ ಮೂಲಕ ವಾದ್ಯಸಂಗೀತದ ಹಾಡನ್ನು ಸೃಷ್ಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಂಡಾರಿ ಬಿಲ್ಡರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಲಕ್ಮೀಶ್ ಭಂಡಾರಿಯವರು ಹಾಡುಗಳ ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಲಿದ್ದು, ತುಳು ಚಲನಚಿತ್ರ ಮತ್ತು ರಂಗ ನಿರ್ದೇಶಕರೂ ಆಗಿರುವ ವಿಜಯಕುಮಾರ್ ಕೊಡಿಯಾಲ್ಬೈಲ್, ಮಂಗಳಾ ಹೈಜೀನ್ ಪ್ರೊಡಕ್ಟ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಎಂ. ಶೇಖರ್ ಶೆಟ್ಟಿ, ಮಂಗಳೂರು ಲೈಮ್ ಆಂಡ್ ಮೆರೈನ್ ಇಂಡಸ್ಟ್ರೀಸ್ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಬಿ.ಎಂ. ಮಮ್ತಾಜ್ ಆಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೋಹನ್ ಕೊಪ್ಪಳ ಮತ್ತಿತರರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಳು ಚಿತ್ರರಂಗದಲ್ಲಿ ಮೊದಲನೇ ಬಾರಿಗೆ ಮಹಿಳಾ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಅಶ್ವಿನಿ ಹರೀಶ್ ನಾಯಕ್ `ನಮ್ಮ ಕುಡ್ಲ’ ಚಲನಚಿತ್ರ- ವಾರ್ ಫಾರ್ ಪೀಸ್ ಎಂಬ ಸಂದೇಶದೊಂದಿಗೆ ಚಿತ್ರಿಸಿದ್ದಾರೆ. ಅಸ್ಲಂ ಪಾಷಾ ಅವರು ಸಹ-ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಬಸವರಾಜ್ ಹಾಸನ್ ಅವರು ಕ್ಯಾಮರಾಮನ್ ಆಗಿ ದುಡಿದಿದ್ದಾರೆ. ಹರೀಶ್ ನಾಯಕ್ ಸಂಕಲನ ಕಾರ್ಯನಿರ್ವಹಿಸಿದ್ದಾರೆ.
ಯುವ ಪ್ರತಿಭೆ ಮತ್ತು ರಂಗನಟ ಪ್ರಕಾಶ್ ಶೆಟ್ಟಿ ಧರ್ಮನಗರ `ನಮ್ಮ ಕುಡ್ಲ’ದ ಕಥೆ,ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಚಿತ್ರದ ನಾಯಕನಟರಾಗಿ ಅಭಿನಯಿಸಿದ್ದಾರೆ. ಅಶ್ವಿನಿ ಹರೀಶ್ ನಾಯಕ್ ನಾಯಕನಟಿಯಾಗಿದ್ದು, ಪ್ರಸಿದ್ಧ ಕಲಾವಿದರಾದ ಸತೀಶ್ ಬಂದಲೆ, ಗೋಪಿನಾಥ್ ಭಟ್, ಲಕ್ಷ್ಮಣ್ ಮಲ್ಲೂರು, ಸಂತೋಷ್ ಶೆಟ್ಟಿ, ದಿನೇಶ್ ಅತ್ತಾವರ, ಜೆ.ಪಿ. ತೂಂಬಿನಾಡು, ಸ್ಕೈಲಾರ್ಕ್ ರಾಜ್, ಸುಜಾತಾ ಶಕ್ತಿನಗರ, ಬಾಚು ಆದ್ಯಪಾಡಿ, ಸುನಿಲ್ ನೆಲ್ಲಿಗುಡ್ಡೆ, ಪ್ರಸನ್ನ ಶೆಟ್ಟಿ ಬೈಲೂರು, ಚೇತನ್ ಪಿಲಾರ್, ದಯಾನಂದ್ ಬುಡ್ರಿಯಾ ಮತ್ತು ಇನ್ನಿತರರು ತಾರಾಗಣದಲ್ಲಿದ್ದಾರೆ. `ನಮ್ಮ ಕುಡ್ಲ’ ಚಲನಚಿತ್ರದ ವಿಶೇಷತೆಯೆಂದರೆ ತುಳುನಾಡಿನ ನೂರಕ್ಕೂ ಅಧಿಕ ಯುವಪ್ರತಿಭೆಗಳನ್ನು ಒಳಗೊಂಡು ಪ್ರೇಕ್ಷಕರ ಮನಗೆಲ್ಲುವತ್ತ ಮುಂದಡಿಯಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.