ನವದೆಹಲಿ: ಶೈಕ್ಷಣಿಕ ಶುಲ್ಕದಲ್ಲಿ ಇಳಿಕೆ, ಎಲೆಕ್ಟ್ರಾನಿಕ್ ವಸ್ತುಗಳ ದರಗಳಲ್ಲಿ ಇಳಿತ ಹಾಗೂ ಮುಖ್ಯವಾಗಿ ಉದ್ಯೋಗಾವಕಾಶಗಳ ಮೇಲೆ 2017-18 ರ ಸಾಮಾನ್ಯ ಬಜೆಟ್ ಬೆಳಕು ಚೆಲ್ಲಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಬಜೆಟ್ ಮಂಡಿಸಲಿದ್ದು, ಮೋದಿ ಸರ್ಕಾರದ ಬಹುಮಹತ್ವದ ಆಕಾಂಕ್ಷೆಯಲ್ಲೊಂದಾದ ಡಿಜಿಟಲ್ ಇಂಡಿಯಾಕ್ಕೆ ಪೂರಕವಾಗಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಸ್ವಾಗತಾರ್ಹ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಸಹಜವಾಗಿದೆ.
ನೋಟು ಅಮಾನ್ಯೀಕರಣದಿಂದ ಆರ್ಥಿಕ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮವಾಗಿದ್ದು, ಗ್ರಾಹಕ ವಸ್ತುಗಳ ಬೇಡಿಕೆ ಹಾಗೂ ಹೂಡಿಕೆ ಪ್ರಮಾಣವೂ ತೀರಾ ಕೆಳ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಅರುಣ್ ಜೇಟ್ಲಿ ಅವರು ಮಂಡಿಸುವ ಬಜೆಟ್ ಹೇಗೆ ಎಲ್ಲವನ್ನೂ ಸರಿದೂಗಿಸಬಲ್ಲದು ಎಂಬ ಕುತೂಹಲ ಎಲ್ಲರದು.
ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಹೇರಿ ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸದೇ, ಕೆಲವು ಸೇವಾ ತೆರಿಗೆಗಳನ್ನು ಮಾತ್ರ ಏರಿಕೆ ಮಾಡಿ ಸಚಿವರು ಸಮತೋಲನಕ್ಕೆ ಮಣೆ ಹಾಕಬಹುದು ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ಸಾಮಾನ್ಯ ಬಜೆಟ್ನೊಳಗೇ ರೈಲ್ವೆ ಬಜೆಟ್ ಒಳಗೊಂಡಿರುವುದು ವಿಶೇಷ. ರೈಲ್ವೆಯ ಕೂಲಿಗಳಿಗೆ ಸಾಮಾಜಿಕ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ, ಪ್ರತಿ ಟಿಕೆಟ್ ಮೇಲೆ ಸೆಸ್ ವಿಧಿಸುವ ಚಿಂತನೆ ಇರಬಹುದು. ಹಾಗೇ ಜನರ ಆದಾಯ ತೆರಿಗೆ ಮಿತಿಯೂ ಹೆಚ್ಚಳವಾಗಬಹುದು ಎಂಬ ಆಶಾಭಾವನೆಯೂ ಅನೇಕರಲ್ಲಿದೆ. ಉದ್ಯಮ ತೆರಿಗೆ ದರ ಇಳಿಕೆ, ಡಿಜಿಟಲ್ ವ್ಯವಹಾರ ಹೆಚ್ಚಳಕ್ಕೆ ಪ್ರಾಶಸ್ತ್ಯ. ಅಗ್ಗದ ದರದಲ್ಲಿ ಮನೆ ನಿರ್ಮಾಣಕ್ಕೆ ಪ್ರೋತ್ಸಾಹ,ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೂ ಉತ್ತೇಜನ ನೀಡುವ ಸಂಭವ ಹೆಚ್ಚು.
ಜಾಗತಿಕ ಮಟ್ಟದಲ್ಲಿಯೂ ಈ ಬಜೆಟ್ ತುಂಬ ಮಹತ್ವದ್ದಾಗಿದ್ದು, ದೇಶದ ಆರ್ಥಿಕ ಸ್ಥಿತಿಯ ಮಟ್ಟ ಕಾಯ್ದುಕೊಳ್ಳುವಲ್ಲಿಯೂ ಎಚ್ಚರವಹಿಸಲಾಗುವುದು ಎನ್ನಲಾಗಿದೆ. ಏನೇ ಆಗಲಿ ದೇಶದ ಪ್ರಗತಿಯ ದೃಷ್ಟಿಯಿಂದ ಯುವಶಕ್ತಿಗೆ ಜೇಟ್ಲಿ ಬಜೆಟ್ ಟಾನಿಕ್ ಆಗಲಿ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.