ನವದೆಹಲಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೆಸರು ಹೇಳಿ ಹಣ ಸುಲಿಗೆ ಮಾಡಲೆತ್ನಿಸಿದ ಮಾಜಿ ಪತ್ರಕರ್ತ ಸಂಜಯ್ ತಿವಾರಿ ಹಾಗೂ ಅವನ ಸಂಗಡಿಗ ಗುರವ್ ಶರ್ಮಾ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ನ ಕಂದಾಯ ಇಲಾಖೆ ಸಚಿವ ಅಮರ್ ಕುಮಾರ್ ಬೌರಿ ಅವರಿಗೆ ದೂರವಾಣಿ ಕರೆ ಮಾಡಿ, ತಾನು ಬಿಜೆಪಿ ಮುಖಂಡನೆಂದು ಹೇಳಿಕೊಂಡ ತಿವಾರಿ, ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಗಾಗಿ 5 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾನೆ.
ಉತ್ತರ ಪ್ರದೇಶದ ಫೈಜಾಬಾದ್ ನಿವಾಸಿ ತಿವಾರಿ, ಸೋಮವಾರ ತನ್ನ ಗುಂಪಿನ ಒಬ್ಬನನ್ನು ಮಂತ್ರಿಯೊಂದಿಗೆ ವ್ಯವಹಾರ ಕುದುರಿಸಲು ದೆಹಲಿಗೆ ಕಳಿಸಿದ್ದ. ಆದರೆ ಅಲ್ಲಿ ಅವನ ಸಂಚಿಗೆ ಯಶಸ್ಸು ಸಿಕ್ಕಿಲ್ಲ . ಆದರೆ ಈ ಕುರಿತು ಮಂತ್ರಿಗಳ ಸಹಾಯಕನಿಗೆ ಸಂಶಯ ಬಂದು, ಬಿಜೆಪಿ ಪ್ರಮುಖ ರಾಮ್ ಮಾಧವ್ ಅವರ ಕಚೇರಿಗೆ ದೂರವಾಣಿ ಕರೆ ಮಾಡಿ, ಬೇಡಿಕೆ ಇಟ್ಟ ಕುರಿತು ವಿಚಾರಿಸುತ್ತಾನೆ. ಆದರೆ, ಮಾಧವ್ ಅವರ ಕಚೇರಿಯಿಂದ ಬೌರಿ ಅವರಿಗೆ ಯಾರೂ ಕರೆ ಮಾಡಿಲ್ಲವೆಂದು ಖಚಿತಪಡಿಸುತ್ತಾರೆ. ಆಗ ಪೊಲೀಸರನ್ನು ಸಂಪರ್ಕಿಸಿದ ಮಂತ್ರಿಗಳ ಕಚೇರಿ ಸಹಾಯಕ ಈ ಕುರಿತು ದೂರು ದಾಖಲಿಸಿಕೊಳ್ಳುವಂತೆ ಹೇಳಿದರು. ನಂತರ ಕರೆಯ ಜಾಡನ್ನು ಬೆನ್ನಟ್ಟಿ ತಿವಾರಿ ಹಾಗೂ ಶರ್ಮಾ ಅವರನ್ನು ದೆಹಲಿಯಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಮುಖ ರಾಜಕಾರಣಿಗಳ ಹೆಸರು ಹೇಳಿ ಅನೇಕ ಮಂತ್ರಿಗಳು ಹಾಗೂ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
2007, 2008, 2010 ಹಾಗೂ 2016 ರಲ್ಲಿಯೂ ಕೂಡಾ ಇದೇ ರೀತಿ ಸುಳ್ಳು ಹೇಳಿ ಹಣ ಸುಲಿಗೆ ಮಾಡಿರುವುದಾಗಿ ಹೇಳಿದ್ದು, ಬಿಜೆಪಿ ಮಾಜಿ ಶಾಸಕ ಅನಿಲ್ ಶರ್ಮಾ, ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್ ಗೋಹೇನ್ ಮುಂತಾದವರಿಗೂ ಮೋಸ ಮಾಡಿದ್ದಾನೆ.
ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಅವರ ಆಪ್ತನಂತೆ ನಟಿಸಿ, ಕಾಂಗ್ರೆಸ್ನ ಮಾಜಿ ಶಾಸಕನಿಂದಲೂ ಹಣ ಸುಲಿಗೆ ಮಾಡಿರುವುದಾಗಿ ತಿವಾರಿ ಒಪ್ಪಿಕೊಂಡಿದ್ದಾನೆ ಎಂದು ಯಾದವ್ ತಿಳಿಸಿದ್ದಾರೆ.
ನಕಲಿ ಗುರುತಿನ ಚೀಟಿಯನ್ನಿಟ್ಟುಕೊಂಡಿರುವ ಇವನು, ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರೊಂದಿಗೆ ಕೆಲಸ ಮಾಡುವಾಗ ಅನೇಕ ಕುಟುಕು ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದ ಎಂದು ಯಾದವ್ ತಿಳಿಸಿದ್ದಾರೆ.
ಆರ್ಎಸ್ಎಸ್, ಬಿಜೆಪಿ ಹಾಗೂ ಕಾಂಗ್ರೆಸ್ನ ಪ್ರಮುಖರ ಹೆಸರು ಹೇಳಿ ಹಣ ಸುಲಿಗೆ ಮಾಡುತ್ತಿದ್ದ ತಿವಾರಿ ಹಾಗೂ ಶರ್ಮಾ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.