ಕೋಝಿಕೋಡ್ : ಭಾರತವು ಸಾಫ್ಟ್ವೇರ್ ತಂತ್ರಜ್ಞಾನವನ್ನು ರಫ್ತು ಮಾಡುತ್ತಿದ್ದರೆ, ಪಾಕಿಸ್ಥಾನವು ಭಯೋತ್ಪಾದಕರನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಎಂದು ಪಾಕಿಸ್ಥಾನದ ಮೇಲೆ ಮೋದಿ ವಾಗ್ದಾಳಿ ನಡೆಸಿದರು.
ಕೇರಳದ ಕೋಝಿಕೋಡ್ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಮಾನವೀಯತೆಗೆ ಶತ್ರು. ಏಷ್ಯಾದ ಒಂದು ರಾಷ್ಟ್ರ ಭಯೋತ್ಪಾದಕತೆಯನ್ನು ಪೋಷಿಸುತ್ತಿದೆ. ಆ ರಾಷ್ಟ್ರ ಇಡೀ ಜಗತ್ತಿಗೆ ಭಯೋತ್ಪಾದಕರನ್ನು ರಫ್ತು ಮಾಡುತ್ತಿದೆ. ಬಿನ್ ಲಾಡೆನ್ನಂತಹ ಉಗ್ರರಿಗೆ ಆಶ್ರಯತಾಣವಾಗಿದ್ದು, ಭಯೋತ್ಪಾದಕರಿಗೆ ನೆರವು ನೀಡುತ್ತಿದೆ. ಭಾರತವು ಪಾಕಿಸ್ಥಾನವನ್ನು ಎಲ್ಲಾ ರೀತಿಯಲ್ಲಿ ಏಕಾಂಗಿಯಾಗಿರಿಸಲಿದೆ.
ಉರಿ ದಾಳಿಯಲ್ಲಿ ಭಾರತದ 18 ವೀರಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಯೋಧರ ಬಲಿದಾನವನ್ನು ನಮ್ಮ ದೇಶ ಎಂದೂ ಮರೆಯುವುದಿಲ್ಲ. ಉರಿ ಸೆಕ್ಟರ್ ದಾಳಿಯನ್ನು ಭಾರತ ಎಂದೂ ಮರೆಯುವುದಿಲ್ಲ. ಇದಕ್ಕೆ ತಕ್ಕ ಉತ್ತರ ಕೊಡಲು ನಾವು ಮರೆಯುವುದಿಲ್ಲ. ಪ್ರತಿ ಉಗ್ರ ದಾಳಿಯ ಲೆಕ್ಕವನ್ನು ಚುಕ್ತಾ ಮಾಡಲಿದ್ದೇವೆ. ಯಾವ ಕಾರಣಕ್ಕೂ ಉಗ್ರ ದಾಳಿಯನ್ನು ನಾವು ಕ್ಷಮಿಸುವುದಿಲ್ಲ.
ಭಯೋತ್ಪಾದನೆಗೆ ಭಾರತ ಎಂದಿಗೂ ಹೆದರುವುದಿಲ್ಲ. ಪದೇ ಪದೇ ಗಡಿಯೊಳಗೆ ಬಂದ ಉಗ್ರರನ್ನು ಹೊಡೆದುರುಳಿಸಿದ್ದಾರೆ. 17 ಬಾರಿ ಉಗ್ರರ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದೇವೆ. ವೀರಯೋಧರು ತಕ್ಕ ಉತ್ತರ ಈಗಾಗಲೇ ಕೊಟ್ಟಿದ್ದಾರೆ. ಎಷ್ಟೇ ಕುತಂತ್ರ ನಡೆಸಿದರೂ ನಾವು ಸಮರ್ಥವಾಗಿ ಎದುರಿಸಲಿದ್ದೇವೆ. ಬಡತನ, ಅನಕ್ಷರತೆ ಇವುಗಳನ್ನು ಮೊದಲು ನಿರ್ಮೂಲನ ಮಾಡಲಿ, ಇದನ್ನು ಯಾರು ಸಮರ್ಥವಾಗಿ ನಿಭಾಯಿಸುತ್ತಾರೆ ನೋಡೋಣ. ಪಾಕಿಸ್ಥಾನದ ಜನತೆಯೇ ಉಗ್ರರ ವಿರುದ್ಧ ಹೋರಾಡುವ ದಿನ ದೂರವಿಲ್ಲ ಎಂದು ಪಾಕ್ ಮೇಲೆ ಗುಡುಗಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಕೇರಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿಯವರು ಉರಿ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದರು.
ಮೊದಲು ಮಲಯಾಳಂನಲ್ಲಿ ಪ್ರಿಯ ಸಹೋದರ, ಸಹೋದರಿಯರೇ ಎಂದು ಭಾಷಣ ಆರಂಭಿಸಿ, ಬಳಿಕ ಹಿಂದಿಯಲ್ಲಿ ಮುಂದುವರೆಸಿದ ಅವರು, ಭಾರತವು ಶಾಂತಿ, ಏಕತೆ, ಸದ್ಭಾವನೆಯಿಂದ ಬಾಳುತ್ತಿದೆ. ದೇಶದ ಕಲ್ಯಾಣಕ್ಕಾಗಿ ದೇವರ ನಾಡು ನಮಗೆ ಆಶೀರ್ವದಿಸಲಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.