ನವದೆಹಲಿ: ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಗಳವಾರ ತಮ್ಮ ಎರಡನೇ ರೈಲ್ವೇ ಬಜೆಟ್ನ್ನು ಮಂಡಿಸಿದ್ದಾರೆ. ರೈಲ್ವೇ ಪ್ರಯಾಣ ದರವನ್ನು ಏರಿಸದೆ ಪ್ರಯಾಣಿಕರಿಗೆ ಅನುಕೂಲಕರವಾಗುವ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಕೋಟಾ ಅರ್ಹತೆ ಹೊಂದಿರುವ ಮಹಿಳೆಯರಿಗೆ ರೈಲ್ವೇಯಲ್ಲಿ ಶೇ. 33 ರಷ್ಟು ಮೀಸಲಾತಿ ನೀಡಲು ಯೋಜಿಸಿದ್ದಾರೆ, ಮಹಿಳಾ ಪ್ರಯಾಣಿಕರಿಗೆ 24/7 ಹೆಲ್ಪ್ ಲೈನ್. ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲು ಮತ್ತು ಜಾಹೀರಾತಿನಿಂದ ಆದಾಯ ಪಡೆಯಲು 2 ಸಾವಿರ ಸ್ಟೇಶನ್ಗಳಲ್ಲಿ 20 ಸಾವಿರ ಸ್ಕ್ರೀನ್ಗಳನ್ನು ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಘೋಷಿಸಿದ್ದಾರೆ.
2020 ರೊಳಗೆ ಮಾನವರಹಿತ ಕ್ರಾಸಿಂಗ್ ತೆಗೆದುಹಾಕಲಾಗುವುದು. ಈ ವರ್ಷ 1600 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ. ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ 8.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ. ಪ್ರಸಕ್ತ ಸಾಲಿನಲ್ಲಿ ರೈಲ್ವೆಯಿಂದ 184,820 ಸಾವಿರ ಕೋಟಿ ರೂಪಾಯಿ ಆದಾಯದ ಗುರಿ ಹೊಂದಲಾಗಿದೆ.
ಮೇಕ್ ಇಂಡಿಯಾ ಯೋಜನೆಯಡಿ 2 ಕಾರ್ಖಾನೆಗಳ ನಿರ್ಮಾಣ. 2,800 ಹೊಸ ಮಾರ್ಗಗಳ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದ್ದು, 65 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಗುರಿ . ಎಂಬಿಎ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2 ತಿಂಗಳ ಇಂಟರ್ನ್ ಶಿಪ್ ವ್ಯವಸ್ಥೆ. ರೈಲ್ವೇ ಎಲ್ಲಾ ಹುದ್ದೆಗಳಿಗೆ ಆನ್ಲೈನ್ ಮೂಲಕವೇ ನೇಮಕಾತಿ ಮಾಡಲಾಗುವುದು.
ಪ್ರಯಾಣಿಕ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸರಕು ಸಾಗಣೆ ದರದ ಏರಿಕೆಯೂ ಇಲ್ಲ.
ವಾಣಿಜ್ಯ ಮಾರ್ಗಗಳಲ್ಲಿ ಡಬ್ಬಲ್ ಡೆಕ್ಕರ್ ರೈಲುಗಳು. ಧಾರ್ಮಿಕ ಕ್ಷೇತ್ರಗಳ ನಿಲ್ದಾಣಗಳ ಆಧುನೀಕರಣ, ಮೊಬೈಲ್ ಆಪ್ ಮೂಲಕ ಟಿಕೆಟ್ ಸಮಸ್ಯೆ ಪರಿಹರಿಸಲು ಯತ್ನ. ಈಗಾಗಲೇ 100 ಸ್ಟೇಷನ್ಗಳಲ್ಲಿ ಉಚಿತ ವೈಫೈ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ವೈಫೈ 400 ಸ್ಟೇಷನ್ಗಳಲ್ಲಿ ಸೌಲಭ್ಯ ದೊರಕುವಂತೆ ಮಾಡಲಾಗುವುದು.
ಬಿಸಿ ಹಾಲು, ಬಿಸಿ ನೀರು ಪೂರೈಕೆ. ರೈಲು ಮತ್ತು ನಿಲ್ದಾಣಗಳಲ್ಲಿ ಮಕ್ಕಳು, ತಾಯಂದಿರಿಗೆ ವಿಶೇಷ ವ್ಯವಸ್ಥೆ. ಮಕ್ಕಳಿಗಾಗಿಯೇ ಬೇಬಿ ಫುಡ್, ಬೇಬಿ ಬೋರ್ಡ್ ವ್ಯವಸ್ಥೆ. ತಾಯಂದಿರಿಗಾಗಿ ಜನನಿ ಸೇವಾ ವ್ಯವಸ್ಥೆ ಮಾಡಲಾಗುವುದು.
ಚೆನ್ನೈನಲ್ಲಿ ದೇಶದ ಮೊದಲ ರೈಲ್ವೇ ಆಟೊ ಹಬ್ ನಿರ್ಮಾಣ, ಬೆಂಗಳೂರು ಮತ್ತು ತಿರುವನಂತಪುರಂನಲ್ಲಿ ಸಮಗ್ರ ಸಬ್ ಅರ್ಬನ್ ರೈಲು, ಅಹಮದಾಬಾದ್ ಮುಂಬೈ ಹೈಸ್ಪೀಡ್ ಪ್ಯಾಸೆಂಜರ್ ಕಾರಿಡಾರ್, ವಾರಣಾಸಿ ಮತ್ತು ದೆಹಲಿ ನಡುವೆ ಹೊಸ ರೈಲು.
ಎಸಿ ರಹಿತ ರೈಲ್ವೆ ಬೋಗಿಗಳಲ್ಲಿ ಡಸ್ಟ್ ಬಿನ್ ಇಡುವ ಯೋಜನೆಯಿದ್ದು, ಎಸ್ಎಂಎಸ್ ಮೂಲಕ’ಕ್ಲೀನ್ ಮೈ ಕೋಚ್ ’ ಯೋಜನೆ ಪ್ರಾರಂಭಿಸಲಾಗುವುದು. ನಿಲ್ದಾಣಗಳನ್ನು ಸ್ವಚ್ಚವಾಗಿಡುವಂತೆ ಕಾಪಾಡಲು ವಿವಿಧ ಸಂಘಟನೆಗಳಿಗೆ ಮನವಿ ಮಾಡಲಾಗುವುದು.
ವಿಶ್ವದ ಮೊದಲ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಭಾರತೀಯ ರೈಲ್ವೆನಲ್ಲಿ ಪರಿಚಯಿಸಲಾಗಿದೆ. ಈ ವರ್ಷದಲ್ಲಿ 17 ಸಾವಿರ ಬಯೋ ಟಾಯ್ಲೆಟ್ ಸ್ಥಾಪನೆ ಮಾಡಲಾಗುವುದು.
ದಿವ್ಯಾಂಗ ಪ್ರಯಾಣಿಕರಿಗಾಗಿ ವ್ಹೀಲ್ ಚೇರ್ ಸೇವೆ, ಅಂಗವಿಕಲ ಪ್ರಯಾಣಿಕರಿಗಾಗಿ ಸಾರಥಿ ಸೇವಾ ವ್ಯವಸ್ಥೆ, ಸಾಮಾನ್ಯ ಪ್ರಯಾಣಿಕರಿಗಾಗಿ ಅಂತ್ಯೋದಯ ಎಕ್ಸ್ ಪ್ರೆಸ್, ದೀನ್ ದಯಾಳ್ ಎಕ್ಸ್ ಪ್ರೆಸ್ ಈ ರೈಲುಗಳಲ್ಲಿ ಕುಡಿಯುವ ನೀರಿನ ಮತ್ತು ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ.
ರೈಲ್ವೇ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿಗಳಿಗಾಗಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ. ವಿಶ್ರಾಂತಿ ಕೊಠಡಿಗಳಿಗೆ ಗಂಟೆಗಳ ಆಧಾರದಲ್ಲಿ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ರೈಲು ಬೋಗಿಗಳ ಒಳಗೆ ಎಲ್ ಇಡಿ ಮಾಹಿತಿ ಬೋರ್ಡ್ ಗಳ ಅಳವಡಿಕೆ ಮಾಡಲಾಗುವುದು ಹಾಗೂ ಜನರಲ್ ಬೋಗಿಗಳಲ್ಲಿ ದುಡ್ಡು ನೀಡಿ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರ ಸುರಕ್ಷತೆಗಾಗಿ ಹೆಲ್ಫ್ ಲೈನ್ ನಂಬರ್ 182 ಸ್ಥಾಪನೆ ಮಾಡಲಾಗುವುದು.
ಪಾರದರ್ಶಕತೆ ಕಾಪಾಡಲು ಕಾಮಗಾರಿಗಳಿಗೆ ಆನ್ ಲೈನ್ ಬಿಡ್ಡಿಂಗ್ ನಡೆಸಲಾಗುತ್ತದೆ. ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಹಣ ಬಳಕೆ ಮಾಡುವ ಯೋಜನೆಯಿದ್ದು, ಈಗಾಗಲೇ 124 ಸಂಸದರು ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಜೆಟ್ ರೈಲ್ವೇಗೆ ಭವಿಷ್ಯದ ಡೈರೆಕ್ಷನ್ ನೀಡಿದೆ ಎಂದು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಶಾವಾದದ ಬಜೆಟ್, ಭಾರತದ ಪ್ರಗತಿಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.