
ಮಂಗಳೂರು: ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿರುವ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಕಾರ್ಯಚಟುವಟಿಕೆಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ. ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಸಚಿವರೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಜಿಲ್ಲೆಯ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ ಎಂದು ನ್ಯಾಯವಾದಿ ಮಹಮ್ಮದ್ ಅಸ್ಗರ್ ಹೇಳಿದ್ದಾರೆ.
ಸಂಸದರಾದಾಗಿನಿಂದಲೇ ಕೇಂದ್ರ ಸರ್ಕಾರದ ಸಮಗ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಅವರು ಯೋಜಿತ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆಗಳನ್ನು ನಡೆಸಿ ಕಾಮಗಾರಿಗಳಿಗೆ ವೇಗ ತುಂಬಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಜಿಲ್ಲೆಯ ವಿವಿಧ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿರುವುದು ಅವರ ಬದ್ಧತೆಯ ಸಂಕೇತವಾಗಿದೆ ಎಂದಿದ್ದಾರೆ.
ಶಿರಾಡಿ ಘಾಟ್ ಹಾಗೂ ಸುರತ್ಕಲ್–ಬಿ.ಸಿ.ರೋಡ್ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದ DPR ಕುರಿತು ಸಮಾಲೋಚನೆ ನಡೆಸಲಾಗಿದೆ. ಮಾಣಿ–ಸಂಪಾಜೆ ರಸ್ತೆ NHAI ವ್ಯಾಪ್ತಿಗೆ ಬಂದ ಹಿನ್ನೆಲೆಯಲ್ಲಿ ಅದರ ಅಭಿವೃದ್ಧಿ ಕಾರ್ಯಗಳನ್ನು ಮರುಪರಿಶೀಲಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದ್ದಾರೆ.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ “ಬ್ಯಾಕ್ ಟು ಊರು” ಅಭಿಯಾನ ರೂಪಿಸಿ ಹಲವು ಕಂಪನಿಗಳನ್ನು ಜಿಲ್ಲೆಗೆ ಆಕರ್ಷಿಸಿರುವುದು ಗಮನಾರ್ಹ. ಪ್ರವಾಸೋದ್ಯಮ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಿ ತುಳುನಾಡಿನ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಂಬಳ ಮತ್ತು ಯೋಗ ದಿನಾಚರಣೆಯನ್ನು “ಯೋಧ ವಿತ್ ಯೋಗ” ಎಂಬ ವಿನೂತನ ರೂಪದಲ್ಲಿ ಆಯೋಜಿಸಿರುವುದು ವಿಶಿಷ್ಟ ಪ್ರಯತ್ನವಾಗಿದೆ ಎಂದಿದ್ದಾರೆ.
ಕಾರ್ಮಿಕರಿಗೆ ಆಸ್ಪತ್ರೆ ನಿರ್ಮಾಣ, ಕೇಂದ್ರ ಸಹಕಾರದೊಂದಿಗೆ ಎಲೆಕ್ಟ್ರಿಕ್ ಬಸ್ಗಳ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಮಂಗಳೂರಿಗೆ ₹1.49 ಕೋಟಿ ಅನುದಾನದಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು ಮಾಡಿರುವುದು ಆರೋಗ್ಯ ಕ್ಷೇತ್ರದ ಮಹತ್ವದ ಸಾಧನೆ ಎಂದಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯಲ್ಲಿ ಭಾಗವಹಿಸಿರುವುದು ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ ಎಂದಿದ್ದಾರೆ.
2025ರ ಪ್ರಮುಖ ರೈಲ್ವೆ ಸಾಧನೆಗಳು:
•ಮಂಗಳೂರು ಸೆಂಟ್ರಲ್–ಕಬಕ ಪುತ್ತೂರು ಪ್ಯಾಸೆಂಜರ್ ಸೇವೆ ಸುಬ್ರಹ್ಮಣ್ಯ ರಸ್ತೆಯವರೆಗೆ ವಿಸ್ತರಣೆ
•ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ಪ್ರೆಸ್ ನಿಯಮಿತ ಕಾರ್ಯಾಚರಣೆ
•ಮಂಗಳೂರು–ಹಾಸನ ವಿಭಾಗದ ಸಂಪೂರ್ಣ ವಿದ್ಯುದ್ದೀಕರಣ
ಇವು ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ದೈನಂದಿನ ಸಂಚಾರಕ್ಕೆ ಮಹತ್ವದ ಅನುಕೂಲಗಳನ್ನು ತಂದಿವೆ.
ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಪಚ್ಚಿನಡ್ಕ–ಪೊಳಲಿ ದೇವಸ್ಥಾನ ರಸ್ತೆ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಅನುದಾನ ಒದಗಿಸಿರುವುದು ಸ್ಥಳೀಯ ಅಭಿವೃದ್ಧಿಗೆ ಪೂರಕವಾಗಿದೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಿಕೆಯಲ್ಲಿ ಅವರು ಮಾದರಿಯಾಗಿದ್ದಾರೆ.
2026ರಲ್ಲಿ ಇನ್ನೂ ಹಲವು ದೂರದೃಷ್ಟಿಯ ಯೋಜನೆಗಳು ಕಾರ್ಯಗತವಾಗಲಿವೆ ಎಂಬ ವಿಶ್ವಾಸದೊಂದಿಗೆ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಮಹಮ್ಮದ್ ಅಸ್ಗರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


