
ನವದೆಹಲಿ: ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II (ಸುವರನ್ ಮಾರನ್) ಅವರ ಗೌರವಾರ್ಥ ಅಂಚೆಚೀಟಿ ಬಿಡುಗಡೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ ಮೋದಿ, ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II ಅವರು ಗಮನಾರ್ಹ ದೂರದೃಷ್ಟಿ ಮತ್ತು ಕಾರ್ಯತಂತ್ರದ ಪ್ರತಿಭೆಯಿಂದ ಆಶೀರ್ವದಿಸಲ್ಪಟ್ಟ ಅಸಾಧಾರಣ ಆಡಳಿತಗಾರ. ನ್ಯಾಯಕ್ಕಾಗಿ ಮಾಡಿದ ಸಮರ್ಪಣೆಗೆ ಅವರು ಹೆಸರುವಾಸಿಯಾಗಿದ್ದರು ಮತ್ತು ತಮಿಳು ಸಂಸ್ಕೃತಿಯ ಪೋಷಕರಾಗಿದ್ದರು ಎಂದಿದ್ದಾರೆ.
ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II ಅವರ ಅಸಾಧಾರಣ ಜೀವನದ ಬಗ್ಗೆ ಓದಿ ತಿಳಿದುಕೊಳ್ಳುವಂತೆ ಮೋದಿ ಯುವಜನರಿಗೆ ಕರೆ ನೀಡಿದ್ದಾರೆ.
ಚಕ್ರವರ್ತಿ ಪೆರುಂಬಿಡುಗು ಮುತ್ತರೈಯರ್ II ಪ್ರಾಚೀನ ತಮಿಳುನಾಡಿನ ಮುತ್ತರೈಯರ್ ವಂಶದ ಪ್ರಮುಖ ಚಕ್ರವರ್ತಿಯಾಗಿದ್ದರು. ಇವರು ಸುವರನ್ ಮಾರನ್ ಎಂದೂ ಕರೆಯಲ್ಪಡುತ್ತಾರೆ. ಇವರು ಸುಮಾರು ಕ್ರಿ.ಶ. 705 ರಿಂದ 745ರವರೆಗೆ ಆಳ್ವಿಕೆ ಮಾಡಿದರು. ತಂಜಾವೂರು (ತಂಜೈ), ತಿರುಚಿರಾಪಳ್ಳಿ (ತ್ರಿಚಿ), ಪುದುಕ್ಕೋಟ್ಟೈ, ಪೆರಂಬಲೂರು ಮತ್ತು ತಿರುವಾರೂರು ಸೇರಿದಂತೆ ಕಾವೇರಿ ಡೆಲ್ಟಾ ಪ್ರದೇಶಗಳನ್ನು ಆಳಿದರು.
ಇವರು ಪಲ್ಲವ ಸಾಮ್ರಾಜ್ಯದ ಒಡೆಯರಾಗಿ ಆಳ್ವಿಕೆ ನಡೆಸಿದರು ಮತ್ತು ಪಲ್ಲವ ಅರಸು ನಂದಿವರ್ಮನ್ II ಅವರ ಪಟ್ಟಾಭಿಷೇಕದಲ್ಲಿ ಭಾಗವಹಿಸಿದ್ದರು. ಇವರು ಪಾಂಡ್ಯ ಮತ್ತು ಚೇರ ರಾಜವಂಶಗಳ ವಿರುದ್ಧ ಕನಿಷ್ಠ 12-16 ಯುದ್ಧಗಳಲ್ಲಿ ಹೋರಾಡಿ ಗೆಲುವು ಸಾಧಿಸಿದ ಧೀರ ಯೋಧರಾಗಿ ಪ್ರಸಿದ್ಧರಾದರು. ಪಲ್ಲವರ ಸೇನಾಪತಿ ಉದಯಚಂದ್ರನೊಂದಿಗೆ ಸೇರಿ ಪಾಂಡ್ಯ-ಚೇರರನ್ನು ಸೋಲಿಸಿದರು. ಇವರನ್ನು ಉತ್ತಮ ಆಡಳಿತಗಾರ, ದೂರದೃಷ್ಟಿಯುಳ್ಳವರು ಮತ್ತು ತಮಿಳು ಸಂಸ್ಕೃತಿಯ ರಕ್ಷಕರೆಂದು ಕೊಂಡಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



