
ಕೋಲ್ಕತ್ತಾ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ‘GOAT Tour 2025’ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಮೊದಲು ಕೋಲ್ಕತ್ತಾಗೆ ಭೇಟಿ ನೀಡಿರುವ ಅವರನ್ನು ಕಾಣಲು ದೊಡ್ಡ ಮಟ್ಟದಲ್ಲಿ ಜನ ಸೇರಿದ್ದು ಗದ್ದಲವೇ ಏರ್ಪಟ್ಟಿದೆ.
ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ ಕಳಪೆ ವ್ಯವಸ್ಥೆಯಿಂದಾಗಿ ಮೆಸ್ಸಿ ಅವರನ್ನು ಸರಿಯಾಗಿ ನೋಡಲು ಸಾಧ್ಯವಾಗದೇ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಮೆಸ್ಸಿ ಸ್ಟೇಡಿಯಂಗೆ ಬಂದು ಕೇವಲ 5-15 ನಿಮಿಷಗಳಲ್ಲೇ ಹೊರಹೋಗಿದ್ದಾರೆ. ಇದರಿಂದ ಕುಪಿತಗೊಂಡ ಅಭಿಮಾನಿಗಳು ಬಾಟಲ್, ಕುರ್ಚಿಗಳನ್ನು ಎಸೆದರು, ಬ್ಯಾನರ್ಗಳನ್ನು ಹರಿದು ಹಾಕಿದ್ದಾರೆ ಮತ್ತು ದಾಂಧಲೆ ನಡೆಸಿದ್ದಾರೆ
ಇನ್ನೊಂದೆಡೆ ಟಿಎಂಸಿ ನಾಯಕರು ಮೆಸ್ಸಿಯನ್ನು ಸುತ್ತುವರೆದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದರಿಂದ ಸಾಮಾನ್ಯ ಅಭಿಮಾನಿಗಳಿಗೆ ಅವರನ್ನು ನೋಡಲು ಅವಕಾಶವೇ ಸಿಗಲಿಲ್ಲ ಎಂಬ ಆರೋಪವೂ ಇದೆ.
ಈ ಬಗ್ಗೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮೆಸ್ಸಿ ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
“ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಅವ್ಯವಸ್ಥೆಯಿಂದ ನಾನು ತೀವ್ರ ದುಃಖ ಮತ್ತು ಆಘಾತಕ್ಕೊಳಗಾಗಿದ್ದೇನೆ. ಮೆಸ್ಸಿ ಹಾಗೂ ಕ್ರೀಡಾ ಪ್ರೇಮಿಗಳಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿ, ಟಿಕೆಟ್ ಹಣ ಮರುಪಾವತಿ ಮಾಡುವಂತೆ ಸೂಚಿಸಿದ್ದಾರೆ. ಸಂಘಟಕ ಶತದ್ರು ದತ್ತ ಅವರನ್ನು ಬಂಧಿಸಲಾಗಿದೆ.
ಬಿಜೆಪಿ ಘಟನೆಯನ್ನು “ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ” ಎಂದು ಕರೆದು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರು “ಸಂಪೂರ್ಣ ಅವ್ಯವಸ್ಥೆ, ಯೋಜನೆಯೇ ಇಲ್ಲದ, ಭದ್ರತೆಯ ಕೊರತೆಯಿಂದ ಅಸಹ್ಯಕರ ಘಟನೆ ನಡೆದಿದೆ” ಎಂದು ಟೀಕಿಸಿದ್ದಾರೆ.
ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು, ಕ್ರೀಡಾ ಸಚಿವರು ಮತ್ತು ಸಂಘಟಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. “ಮಮತಾ ಸರ್ಕಾರಕ್ಕೆ ಕಾರ್ಯಕ್ರಮವನ್ನು ನಿರ್ವಹಿಸಲೂ ಸಾಧ್ಯವಾಗಿಲ್ಲ” ಎಂದು ಬಿಜೆಪಿ ಆರೋಪಿಸಿದೆ.
ಈ ಘಟನೆಯ ಮೂಲಕ ಮೆಸ್ಸಿ ಅವರ ಕೋಲ್ಕತ್ತಾ ಪಯಣ ಮುಗಿದಿದು, ಹೈದರಾಬಾದ್ಗೆ ತೆರಳಿದ್ದಾರೆ. ಪ್ರವಾಸದ ಉಳಿದ ಭಾಗಗಳು (ಹೈದರಾಬಾದ್, ಮುಂಬೈ, ದೆಹಲಿ) ಯೋಜನೆಯಂತೆ ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



