ಬೆಂಗಳೂರು: ಮದ್ದೂರಿನ ಇಂದಿನ ಘಟನೆಗೆ ಸಿಎಂ ನಿರ್ವಹಿಸುವ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಿ ಷಡ್ಯಂತ್ರ ನಡೆಯುತ್ತಿದೆ? ಯಾರು ಕಲ್ಲೆಸೆಯಬಹುದೆಂದು ಮುಖ್ಯಮಂತ್ರಿಗಳ ಅಧೀನದಲ್ಲಿ ಬರುವ ಗುಪ್ತಚರ ಇಲಾಖೆ ಮಾಹಿತಿ ಕೊಡಬೇಕಿತ್ತು. ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿದೆ ಎಂದು ತಿಳಿಸಿದರು. ತನಿಖೆ ಮಾಡುವ ತಂಡವನ್ನು ಒಯ್ದು ಮಣ್ಣು ಅಗೆಯಲು ಬಿಡುತ್ತಾರೆ ಎಂದು ಟೀಕಿಸಿದರು.
ಕಲ್ಲು ಹೊಡೆಯುವವರಿಗೆ ರಕ್ಷಣೆ ಕೊಡಲಾಗುತ್ತದೆ. ಕಲ್ಲು ಹೊಡೆದುದನ್ನು ಪ್ರಶ್ನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡುತ್ತೀರಿ. ಇದೇನು ಪೊಲೀಸ್ ರಾಜ್ಯವೇ? ಪ್ರಜಾಪ್ರಭುತ್ವದ ರಾಜ್ಯವೇ ಎಂದು ಪ್ರಶ್ನಿಸಿದರು. ಹೆಣ್ಮಕ್ಕಳನ್ನು ಲಾಠಿಯಿಂದ ಥಳಿಸಲಾಗಿದೆ. ಇದು ಯಾವ ರೀತಿಯ ಮಾನವೀಯತೆ ಇರುವ ಸರಕಾರ ಎಂದು ಹೇಳಲು ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಪೊಲೀಸರ ಟೋಪಿಯ ಕಲರ್ ಬದಲಿಸುವ ಕುರಿತು ಗೃಹ ಸಚಿವರು ಮೊನ್ನೆ ಹೇಳಿದ್ದಾರೆ. ಇವರು ಪೊಲೀಸರ ಟೋಪಿಗೆ ಯಾವ ಕಲರ್ ಹಾಕುವವರಿದ್ದಾರೆ ಎಂಬ ಸಂಶಯ ಶುರುವಾಗಿದೆ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಇದರ ಹೊಣೆಯನ್ನು ಮುಖ್ಯಮಂತ್ರಿಗಳು ಹೊತ್ತುಕೊಳ್ಳಬೇಕು. ಧಾರ್ಮಿಕ ಆಚರಣೆಯಲ್ಲಿ ಬಂದೋಬಸ್ತ್ ಏರ್ಪಡಿಸಲು ಯೋಗ್ಯತೆ ಇಲ್ಲವೆಂದಾದರೆ ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ನಾನು ಮುಖ್ಯಸ್ಥ ಎನ್ನುತ್ತಾರೆ ಎಂದು ಕೇಳಿದರು.
ಈ ಸರಕಾರ ಪೊಲೀಸರ ಕೈಯನ್ನು ಕಟ್ಟಿ ಹಾಕುತ್ತಿದೆ. ಪೊಲೀಸರಿಗೆ ಸರಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಈ ಸರಕಾರ ಬಿಡುತ್ತಿಲ್ಲ. ಸ್ವತಂತ್ರವಾಗಿ ತನಿಖೆ ಮಾಡಲು ಈ ಸರಕಾರ ಬಿಡುತ್ತಿದೆಯೇ ಎಂಬ ಸಂಶಯವಿದೆ ಎಂದು ರಾಜೀವ್ ಅವರು ತಿಳಿಸಿದರು.
ಸಿಪಿಸಿ, ಭಾರತ ನ್ಯಾಯ ಸಂಹಿತೆ ಮೂಲಕ ಈ ರಾಜ್ಯದಲ್ಲಿ ತನಿಖೆಗಳು ನಡೆಯುತ್ತಿಲ್ಲ; ಪೊಲೀಸ್ ಮ್ಯಾನುವಲ್ ಮೂಲಕ ಬಂದೋಬಸ್ತ್ ಕರ್ತವ್ಯದ ಯೋಜನೆ ಆಗುತ್ತಿಲ್ಲ. ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿ, ಹಿಂದೂ ಧಾರ್ಮಿಕ ಸಂಸ್ಥೆಗಳು, ಹಿಂದೂ ಧಾರ್ಮಿಕ ಆಚರಣೆಗಳನ್ನು, ಹಿಂದೂ ಭಾವನೆಗಳನ್ನು ಕೆದಕುವ ಯಾವುದೇ ಶಕ್ತಿ ಇರಲಿ; ಅಲ್ಲಿ ನೀವು ಕಣ್ಮುಚ್ಚಿಕೊಂಡು ಕೂರಬೇಕೆಂದು ಪೊಲೀಸರಿಗೆ ಕಾಂಗ್ರೆಸ್ ಸರಕಾರ, ಸಚಿವರು ನಿರ್ದೇಶನ ನೀಡುತ್ತಿದ್ದಾರೆ. ಅದರ ಪರಿಣಾಮವಾಗಿ ಮದ್ದೂರಿನಲ್ಲಿ ಕಲ್ಲು ತೂರಾಟ, ಅದನ್ನು ಪ್ರಶ್ನಿಸದವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಆಕ್ಷೇಪಿಸಿದರು. ಈ ಸರಕಾರ ಗೋಲಿಬಾರ್ಗೂ ಹಿಂಜರಿಯುವುದಿಲ್ಲ; ಇದು ಹಿಂದೂವಿರೋಧಿ ಸರಕಾರ; ಕಾನೂನು ಸುವ್ಯವಸ್ಥೆ ಕುಸಿದು ಹೋಗಿರುವ ಸರಕಾರ, ರಾಜಾರೋಷವಾಗಿ ಕಾನೂನಿನ ದುರ್ಬಳಕೆ ನಡೆಸುವ ಸರಕಾರ ಎಂದು ದೂರಿದರು.
ರಾಜ್ಯದಲ್ಲಿ ಗೃಹ ಇಲಾಖೆ ಹಳಿ ತಪ್ಪಿ ವರ್ಷಗಳೇ ಕಳೆದಿವೆ. ಪೊಲೀಸರು ತಮ್ಮ ಕರ್ತವ್ಯ ಮಾಡುವುದನ್ನು ಮರೆತು ರಾಜಕೀಯ ಅಣತಿಯಂತೆ ಕುಣಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸ್ವತಃ ಪೊಲೀಸರೇ ಮಾತನಾಡಲು ಆರಂಭಿಸಿದ್ದಾರೆ ಎಂದು ಗಮನ ಸೆಳೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.