ಬೈಂದೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2025-26ನೇ ಸಾಲಿಗೆ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳನ್ನು ವಿಮೆಗೆ ಒಳಪಡಿಸಲು ಸರಕಾರವು ವರ್ಷಂಪ್ರತಿ ಅವಕಾಶ ಕಲ್ಪಿಸುತ್ತಿದೆ ಆದರೆ ಕಳೆದ ಎರಡು ವರ್ಷಗಳಿಂದ ವಿಮೆ ನೊಂದಾಯಿಸಿಕೊಳ್ಳಲು ಹಾಗೂ ರೈತರಿಗೆ ವಿಮೆ ಯೋಜನೆಯಡಿ ಪಾಲ್ಗೊಳ್ಳಲು ತೀರಾ ಕಡಿಮೆ ಅವಧಿ ಲಭಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆಗೆ ಸಂಬಂಧಿಸಿದಂತೆ ಅಡಿಕೆ ಹಾಗೂ ಕಾಳು ಮೆಣಸು ಬೆಳಗಾರರೇ ಅತ್ಯಧಿಕ ಸಂಖ್ಯೆಯಲ್ಲಿದ್ದು ಈ ಎರಡು ಬೆಳೆಗಳಿಗೆ ವಿಮೆ ನೋಂದಾವಣೆ ಮಾಡಲು ಕೇವಲ 5 ರಿಂದ 6 ದಿನಗಳ ಅವಕಾಶ ನೀಡಲಾಗಿದೆ. ಆದರೆ ಇತರೆ ಬೆಳೆಗಳಿಗೆ ಸಂಬಂಧಿಸಿದಂತೆ ಬೇರೆ ಜಿಲ್ಲೆಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದರಿಂದಾಗಿ ಉಡುಪಿ ಜಿಲ್ಲೆಯ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರಿಗೆ ಅನ್ಯಾಯ ವಾಗುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳೆ ವಿಮೆಗೆ ಒಳಪಡುವ ರೈತರ ಎಲ್ಲಾ ದಾಖಲಾತಿಗಳನ್ನು ಆನ್ ಲೈನ್ ಮುಖಾಂತರ ಸಂರಕ್ಷಣೆ ತಂತ್ರಾಂಶಕ್ಕೆ ಸಂಯೋಜಿಸಿರುವುದರಿಂದ ಆನ್ ಲೈನ್ ದಾಖಲಾತಿಗಳು ಸರಿಯಾಗಿರದಿದ್ದರೆ ಸರಿಪಡಿಸಿಕೊಳ್ಳಲೂ ಕಾಲಾವಕಾಶ ಇರುವುದಿಲ್ಲ ಮತ್ತು ಅಂಥಹಾ ರೈತರು ಆಸಕ್ತರಿದ್ದರೂ ವಿಮೆಯಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಕಳೆದ ವರ್ಷವೂ ಪ್ರಾರಂಭದಲ್ಲಿ ಅವಧಿ ಕೇವಲ 7 ದಿನಗಳಿದ್ದ ಕಾರಣ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿರುವ ರೈತರಿಗೆ ಪ್ರೀಮಿಯಂ ಹಣ ತುಂಬುವುದಕ್ಕಾಗಿ ಹಣದ ವ್ಯವಸ್ಥೆ ಮಾಡಿಕೊಳ್ಳಲು ಕಡಿಮೆ ಕಾಲಾವಕಾಶ ಲಭಿ ಸುತ್ತದೆ. ಇದರಿಂದ ವಿಮೆಗೆ ಒಳಪಡಲು ತೀರಾ ಕಷ್ಟ ಸಾಧ್ಯವಾಗಿರುತ್ತದೆ. ಹಾಗಾಗಿ ವಿಮೆ ನೋಂದಣಿಗೆ ರೈತರಿಗೆ ಹಣ ತುಂಬಲು ಅಧಿಸೂಚನೆ ಹೊರಡಿಸಿದ ನಂತರ ಕನಿಷ್ಠ ಒಂದು ತಿಂಗಳ ಕಾಲಾವಕಾಶವನ್ನು ನೀಡಿದರೆ ಉಪಯೋಗವಾಗಲಿದೆ ಎಂದಿದ್ದಾರೆ.
ಈ ಬಗ್ಗೆ ಸರಕಾರ ಅಗತ್ಯ ಕ್ರಮ ವಹಿಸಿ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರ ಹಿತ ಕಾಪಾಡಬೇಕು ಎಂದು ಗಂಟಿಹೊಳೆಯವರು ರಾಜ್ಯ ತೋಟಗಾರಿಕ ಸಚಿವರಾದ ಎಸ್. ಎಸ್ ಮಲ್ಲಿಕಾರ್ಜುನ ರವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.