ಬೆಳಗಾವಿ: ಕಾಂಗ್ರೆಸ್ಸಿನ ಭ್ರಷ್ಟಾಚಾರದ ಪರಿಪಾಠವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಮೇಲೆ ಮುಂದುವರೆಸಿಕೊಂಡು ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಇಲ್ಲಿ ಇಂದು ನಡೆದ ಜನಾಕ್ರೋಶ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ ಹಾಗೂ ಭ್ರಷ್ಟಾಚಾರಕ್ಕೋಸ್ಕರ ಬದುಕಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ಮನಮೋಹನ್ ಸಿಂಗ್ ಅವರು ಈ ದೇಶದ ಪ್ರಧಾನಿ ಆದಾಗ 2 ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, 4 ಜಿ ಹಗರಣ ಸೇರಿ 10-12 ಲಕ್ಷ ಕೋಟಿಯ ಹಗರಣಗಳು ನಡೆದಿದ್ದನ್ನು ಯಾರೂ ಮರೆತಿಲ್ಲ ಎಂದು ವಿವರಿಸಿದರು.
ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಭಾಷಣ ಮಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಬಳಿಕ ‘ಏಕ್ ತರಫ್ ಆಲೂ ಡಾಲೇ ತೋ ದೂಸ್ರಿ ತರಫ್ ಸೋನಾ ನಿಕಲೇಗಾ’- ಈ ಬ್ಯುಸಿನೆಸ್ ಮಾದರಿಯನ್ನು ದೇಶದಲ್ಲಿ ತಂದು ಅಭಿವೃದ್ಧಿ ಕೆಲಸ ಮಾಡುವುದಾಗಿ ಈ ದೇಶದ ಯುವರಾಜ ಎಂದು ಬಿಂಬಿಸಿಕೊಂಡ ರಾಹುಲ್ ಗಾಂಧಿಯವರು ಹೇಳಿದ್ದು, ಅದು ದೇಶಾದ್ಯಂತ ಚರ್ಚೆಯಾಗಿತ್ತು ಎಂದು ವಿವರಿಸಿದರು.
ಸ್ವಾತಂತ್ರ್ಯ ಬಂದ ಬಳಿಕ 65 ವರ್ಷಗಳ ಕಾಲ ಈ ದೇಶ, ರಾಜ್ಯದಲ್ಲಿ ಆಡಳಿತ ನಡೆಸಿದವರು ಕಾಂಗ್ರೆಸ್ ಪಕ್ಷದವರು. ಜವಾಹರ ಲಾಲ್ ನೆಹರೂ ಕೈಯಲ್ಲಿ ಮಾಡಲಾಗಲಿಲ್ಲ. ಗರೀಬಿ ಹಠಾವೋ ಎಂದ ಇಂದಿರಾ ಗಾಂಧಿಯವರ ಕೈಯಲ್ಲೂ ಮಾಡಲಾಗಲಿಲ್ಲ. ರಾಜೀವ್ ಗಾಂಧಿ ಕೈಯಲ್ಲೂ ಮಾಡಲಾಗಲಿಲ್ಲ; ಅಂಥ ಮಾದರಿ ಯಾವುದೆಂದು ದೇಶದಲ್ಲಿ ಚರ್ಚೆ ಆಗಿತ್ತು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಆ ಪುಣ್ಯಾತ್ಮ ರಾಹುಲ್ ಗಾಂಧಿ ಪ್ರಧಾನಿ ಆಗಲಿಲ್ಲ; ಹಾಗಾಗಿ ಆ ಬ್ಯುಸಿನೆಸ್ ಮಾದರಿ, ಅಭಿವೃದ್ಧಿಯ ಮಾದರಿ ಏನು ಎಂಬುದನ್ನು ಯಾರಿಗೂ ಚರ್ಚೆ ಮಾಡಲಾಗಲಿಲ್ಲ ಎಂದು ನುಡಿದರು. ಆದರೆ, ಇವತ್ತು ಸತ್ಯ ಬಹಿರಂಗವಾಗಿದೆ ಎಂದು ತಿಳಿಸಿದರು.
ಹಿಂದೆ ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಸುಮಾರು 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಹತ್ತಾರು ರೂ. ಜೋಡಿಸಿ ಈ ಪತ್ರಿಕೆ, ಟ್ರಸ್ಟ್ ಪ್ರಾರಂಭವಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಹಾಗೂ ಟ್ರಸ್ಟ್ ಗಾಂಧಿ ಕುಟುಂಬದ ವಶವಾಯಿತು. 150 ಕೋಟಿಗೂ ಹೆಚ್ಚು ಸಾಲ ಇದ್ದ ಟ್ರಸ್ಟ್ ಯಂಗ್ ಇಂಡಿಯಾ ಆಗಿ ಪರಿವರ್ತನೆಗೊಂಡಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಕಪಿಮುಷ್ಟಿಗೆ ಬಂದ ನಂತರದಲ್ಲಿ ಆ ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾದ 150 ಕೋಟಿ ಸಾಲವನ್ನು ಕಾಂಗ್ರೆಸ್ ಪಕ್ಷದ ಕೇಂದ್ರ ಸರಕಾರವು ಮನ್ನಾ ಮಾಡಿತ್ತು ಎಂದರು.
ಕೇವಲ 50 ಲಕ್ಷ ಹೂಡಿಕೆ ಮಾಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಆ ಟ್ರಸ್ಟಿನ ಹಿಡಿತ ಸಾಧಿಸಿದ್ದರು. ನಂತರ 3 ಕೋಟಿ ಬಂಡವಾಳ ಹಾಕಿ ಒಂದೇ ವರ್ಷದಲ್ಲಿ ಆ ಟ್ರಸ್ಟ್ 150 ಕೋಟಿ ಸಂಪಾದನೆ ಮಾಡಿತ್ತು. 3 ಕೋಟಿ ಬಂಡವಾಳ ಹಾಕಿದ ಆಸ್ತಿಗಳು 150 ಕೋಟಿ ಆಗುತ್ತದೆ. ಇದು ರಾಹುಲ್ ಬಾಬಾ ಅವರ ಅಭಿವೃದ್ಧಿಯ ಮಾಡೆಲ್. ಬಹುಶಃ ಅಂಬಾನಿಯವರಿಗೂ ಇದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ವಿಜಯೇಂದ್ರ ಅವರು ತಿಳಿಸಿದರು. ಅಂಥ ಸಾಧನೆ, ಸಂಪಾದನೆಯನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಯಂಗ್ ಇಂಡಿಯ ಟ್ರಸ್ಟ್ ಮೂಲಕ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಇವತ್ತು ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಕಾಂಗ್ರೆಸ್ಸಿನವರು ಬೊಬ್ಬೆ ಹೊಡೆಯುತ್ತಾರೆ. ಮೋದಿ ಸರಕಾರ ಬಂದ ಬಳಿಕ ಇ.ಡಿ., ಕಾಂಗ್ರೆಸ್ ಮೇಲೆ ಗೂಂಡಾಗರ್ದಿ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಇ.ಡಿ. ಪಾರದರ್ಶಕ ತನಿಖೆಯ ಪರಿಣಾಮವಾಗಿ ಸ್ವಾತಂತ್ರ್ಯ ಹೋರಾಟಗಾರರು ಪ್ರಾರಂಭಿಸಿದ ಟ್ರಸ್ಟ್, ದೇಶದ ಯುವರಾಜ ಎಂದು ಭಾವಿಸಿದವರ ಕೈಯಲ್ಲಿ ಬಂದ ಮೇಲೆ ಹಗರಣವು ಬೆಳಕಿಗೆ ಬಂತು. ರಾಹಲ್ ಗಾಂಧಿಯವರು ದೇಶದ ಪ್ರಧಾನಿ ಆಗುವ ಕನಸು ಇವತ್ತು ದೂರವಾಗಿದೆ ಎಂದು ವಿಶ್ಲೇಷಿಸಿದರು.
ಬೆಲೆ ಏರಿಕೆ- ಭ್ರಷ್ಟಾಚಾರದ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ನಾವು ಜನಾಕ್ರೋಶ ಯಾತ್ರೆ ಮೂಲಕ ಹೊರಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಹಿಂದೂಗಳಿಗೆ ಅವಮಾನ ಮಾಡುವ ಕ್ರಮ ಎಂದು ಟೀಕಿಸಿದರು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡ ಕ್ರಮವನ್ನು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.