ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಗಳಲ್ಲೊಂದಾದ ಕೊಲ್ಲೂರು ದೇವಸ್ಥಾನ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿನ ಸಮಸ್ಯೆಗಳು ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಸಲಾದ ವಿವಿಧ ಇಲಾಖೆಗಳ ಚರ್ಚೆಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಭಾಗಿಯಾದರು.
ಈ ವೇಳೆ ಮಾತನಾಡಿದ ಅವರು, ಕೊಲ್ಲೂರು ದೇವಸ್ಥಾನ ಹಾಗೂ ಅದರ ಸುತ್ತ ಮುತ್ತಲಿನಲ್ಲಿ ಅರಣ್ಯ ಹಾಗೂ ಕಂದಾಯ ಸಮಸ್ಯೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಗಳೂ ಒಳಗೊಂಡಂತೆ ಕೊಲ್ಲೂರಿನ ಸಮಗ್ರ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಸಮಸ್ಯೆಗಳಿಗೆ ನಿವಾರಣೋಪಾಯ ಕಂಡು ಕೊಳ್ಳಲು ಅಸಡ್ಡೆ ತೋರಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬೀಳುವಂತೆ ಮಾಡುವ ಇಲಾಖಾ ಅಧಿಕಾರಿಗಳ ಮನ: ಸ್ಥಿತಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.
ಇದರಿಂದ ಕೊಲ್ಲೂರಿನ ಸಮಸ್ಯೆ ಉಲ್ಬಣವಾಗುವುದರ ಜೊತೆಗೆ ಶ್ರೀ ಕ್ಷೇತ್ರಕ್ಕೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಬೇಕು, ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಗೋಶಾಲೆ ಅಭಿವೃದ್ಧಿ ಕಾಮಗಾರಿ ಸಹಿತವಾಗಿ ಕೊಲ್ಲೂರಿನ ಅಭಿವೃದ್ಧಿ ಗೆ ವೇಗ ನೀಡಬೇಕು ಎಂದು ಹೇಳಿದರು.
ಕೊಲ್ಲೂರು ದೇವಳದ ಸುತ್ತ ಇರುವ ಒಳ ಚರಂಡಿಗೆ ಬಗ್ಗೆ ಇತ್ತೀಚಿಗೆ ಸಾಮಾಜಿಕ ಜಾಲ ತಾಣ ಗಳಲ್ಲಿ ನಿರಂತರವಾಗಿ ಸುದ್ದಿ ಬಿತ್ತರವಾಗುತ್ತಿದೆ. ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು.ಒಳ ಚರಂಡಿ ವ್ಯವಸ್ಥೆಯು ಕೊಲ್ಲೂರು ದೇವಸ್ಥಾನದ ಮೂಲಕ ಅನುಷ್ಠಾನವಾಗುತ್ತಿರುವ ಕಾರಣ ಅಲ್ಲಿನ ಅಧಿಕಾರಿಗಳು ಹಾಗೂ ಒಳ ಚರಂಡಿಗೆ ಮಂಡಳಿ ಇದಕ್ಕೆ ಉತ್ತರದಾಯಿ ಗಳಾಗಬೇಕು.ಈ ವಿಚಾರದಲ್ಲಿ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಘನತೆಗೆ ಕುಂದುಂಟಾದಲ್ಲಿ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಅಲ್ಲಿನ ಅಧಿಕಾರಿಗಳೇ ಇದಕ್ಕೆಲ್ಲಾ ಉತ್ತರ ನೀಡಬೇಕು ಹಾಗೂ ಒಳ ಚರಂಡಿ ವ್ಯವಸ್ಥೆ ಯಲ್ಲಿ ನ್ಯೂನ್ಯತೆ ಇದ್ದಲ್ಲಿ ಸರಿ ಪಡಿಸಲು ಕ್ರಮ ವಹಿಸಬೇಕು ಎಂದರು.
ಕೊಲ್ಲೂರು ಮಾರ್ಗವಾಗಿ ಹಾದು ಹೋಗುವ ರಾಷ್ಟೀಯ ಹೆದ್ದಾರಿ ಕಾಮಗಾರಿ ಗಳ ಬಗ್ಗೆ ರಾಷ್ಟೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಹೆದ್ದಾರಿ ವಿಸ್ತರಣೆ ಕಾಮಗಾರಿ ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಇಲಾಖೆಗಳು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆ ಕೈ ತೋರಿಸದೇ ಎರಡೂ ಇಲಾಖೆ ಅಧಿಕಾರಿಗಳು ಪರಸ್ಪರ ಕೂತು ಕಾಮಗಾರಿ ಮುಂದುವರಿಸಲು ಬೇಕಾದ ಅಗತ್ಯ ಅನುಮತಿ ಪಡೆದು ಶೀಘ್ರ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು ಮತ್ತು ಇದಕ್ಕೆ ಬೇಕಾದ ಅಗತ್ಯ ಪತ್ರ ವ್ಯವಹಾರವನ್ನು ಈ ಕೂಡಲೇ ಮಾಡಲು ತಿಳಿಸಿದರು ಹಾಗೂ ಕೊಲ್ಲೂರು ದೇವಸ್ಥಾನದ ಆಸುಪಾಸಿನಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳಲ್ಲಿನ ನ್ಯೂನ್ಯತೆ ಕೂಡಲೇ ಸರಿ ಪಡಿಸಲು ಹೆದ್ದಾರಿ ಅಧಿಕಾರಿಗಳಿಗೆ ತಾಕಿತು ಮಾಡಿದರು
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿ ಕುಮಾರ್ ಹುಕ್ಕೇರಿ, ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ಕೊಲ್ಲೂರು ದೇವಸ್ಥಾದ ಕಾರ್ಯನಿರ್ವಾಹಣಾಧಿಕಾರಿಗಳು, ಮುಕಾಂಬಿಕಾ ವನ್ಯ ಜೀವಿ ವಲಯ ಅರಣ್ಯ ಅಧಿಕಾರಿ, ಬೈಂದೂರು ಹಾಗೂ ಕುಂದಾಪುರ ಸಹಾಯಕ ವಲಯ ಅರಣ್ಯ ಅಧಿಕಾರಿಗಳು, ಹೆದ್ದಾರಿ ಇಲಾಖೆ ಇಂಜಿನಿಯರ್ ಗಳು, ನಿರ್ಮಿತಿ ಕೇಂದ್ರದ ಇಂಜಿನಿಯರ್, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್, ಬೈಂದೂರು ತಾಲೂಕು ಉಪ ತಹಸೀಲ್ದಾರರು, ಕೊಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.