ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣ ವ್ಯವಸ್ಥಿತವಾಗಿ ನಡೆದಿದೆ. 9 ಸುಳ್ಳುಗಳನ್ನು ಹೇಳಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರ ನೀಡಿದರು. ಸಚಿವರು ಮತ್ತು ಇಲಾಖಾ ಉನ್ನತಾಧಿಕಾರಿಗಳು ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಟೀಕಿಸಿದರು.
ಮಾರ್ಚ್ 26ರಂದು ಪತ್ರಿಕಾಗೋಷ್ಠಿ ನಡೆಸಿದ ಇಂಧನ ಸಚಿವರು ಭಾರತ ಸರಕಾರದ ನಿಗದಿತ ನಿಯಮಗಳ ಪ್ರಕಾರ, ಟೆಂಡರ್ ಮಾಡಿದ್ದಾಗಿ ಹೇಳಿದ್ದಾರೆ. ಪ್ರಿಬಿಡ್ ಟೆಂಡರ್ನಲ್ಲಿ ಯಾರೂ ಬಂದಿರಲಿಲ್ಲ ಎಂದಿದ್ದಾರೆ. ಆದರೆ, 10 ಜನರು ಭಾಗವಹಿಸಿದ್ದರು. 117 ಜನರು ಮಾಹಿತಿ ಕೇಳಿದ್ದರು ಎಂದು ವಿವರಿಸಿದರು.
ಕೇಂದ್ರದ ನಿಯಮಾವಳಿಯಂತೆ ಐಎಸ್ 16444 ಸ್ಟಾಂಡರ್ಡ್ ಇರುವ ಹತ್ತಾರು ಜನರಿದ್ದಾರೆ. ಅವರನ್ನೇ ರಾಜ್ಯವು ಪರಿಗಣಿಸಬೇಕಿತ್ತು. 1 ಲಕ್ಷ ಸ್ಮಾರ್ಟ್ ಮೀಟರ್ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಟೆಂಡರ್ 200 ಕೋಟಿಗಿಂತ ಹೆಚ್ಚು ಮೊತ್ತದ್ದಾದರೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಪ್ರಿಬಿಡ್ ವೇಳೆ ಇದನ್ನು ಹೇಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು. ಇಂಧನ ಮೀಟರ್ಗೆ ಸಂಬಂಧಿಸಿ ಕರ್ನಾಟಕದಲ್ಲಿ ರಿಟೇಲ್ ಔಟ್ಲೆಟ್ನಲ್ಲಿ 5 ವರ್ಷ ಅನುಭವ ಇರಬೇಕೆಂಬ ನಿಯಮವನ್ನೂ ಪರಿಗಣಿಸಿಲ್ಲ ಎಂದು ತಿಳಿಸಿದರು.
ಮೀಟರ್ ಡಾಟಾ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಅನ್ನು ಗ್ಲೋಬಲ್ ಆಗಿ ತೆಗೆದುಕೊಂಡಿಲ್ಲ. ಡಿಬಾರ್- ಬ್ಲ್ಯಾಕ್ಲಿಸ್ಟ್ ಆದವರನ್ನು ಪರಿಗಣಿಸಬಾರದು ಎಂಬ ನಿಯಮವೂ ಇದೆ. ಗ್ಲೋಬಲ್ ಎಂಬುದನ್ನು ಪರಿಗಣಿಸಿಯೇ ಇಲ್ಲ ಎಂದು ಟೀಕಿಸಿದರು. ಕೇಂದ್ರದ ನಿಯಮಾವಳಿಯಂತೆ ಟೆಂಡರ್ ಕರೆದಿದ್ದೇವೆ ಎಂಬುದೇ ಸುಳ್ಳು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರದ ಪ್ರಮುಖ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಸಚಿವರು, ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಹಾಗೂ ಹೊಸ ಗ್ರಾಹಕರಿಗೆ ಕಡ್ಡಾಯ ಎಂದಿದ್ದಾರೆ. ಆದರೆ, ಇದು ಕಡ್ಡಾಯವಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೇ ತಬ್ಬಿಬ್ಬಾಗಿದ್ದಾರೆ ಎಂದು ವಿವರಿಸಿದರು. ಎಲ್ಲ ಗ್ರಾಹಕರಿಗೆ, ಫೀಡರ್, ಟ್ರಾನ್ಸ್ಫಾರ್ಮರ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಕೇಂದ್ರ ವಿದ್ಯುತ್ ಪ್ರಾಧಿಕಾರವು (ಸಿಇಸಿ) ತಿಳಿಸಿದೆ ಎಂದು ಪ್ರಕಟಿತ ಗಜೆಟ್ ದಾಖಲೆ ನೀಡಿದರು.
ಸರಕಾರವು ಗ್ರಾಹಕರ ಜೇಬಿನಿಂದ ಹಣ ಲೂಟಿ ಮಾಡಲು ಮುಂದಾಗಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಲೂಟಿ, ಕಳ್ಳತನ ಮಾಡುತ್ತಿದ್ದಾರೆ ಎಂದು ದಾಖಲೆ ಆಧಾರದಿಂದ ತಿಳಿಸುವುದಾಗಿ ಹೇಳಿದರು. ಗ್ರಾಹಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಇವರಿಗೆ ಶಿಕ್ಷೆ ಆಗಲೇಬೇಕು; ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಪ್ರಕಟಿಸಿದರು.
ತಪ್ಪೆಲ್ಲವನ್ನೂ ತಿಳಿಸಿದ್ದೇವೆ. ದಾಖಲೆ ಸಹಿತವಾಗಿ ತಪ್ಪಿನ ಮಾಹಿತಿ ನೀಡಿದ್ದೇವೆ ಎಂದು ಪ್ರಶ್ನೆಗೆ ಅವರು ಉತ್ತರ ನೀಡಿದರು. ನಾಗರಿಕರು, ಗ್ರಾಹಕರ ಹಿತ ಕಾಪಾಡುವ ದೃಷ್ಟಿಯಿಂದ ಸಚಿವರಿಗೆ ಪತ್ರವನ್ನೂ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಇದು ಹಿಟ್ ಆಂಡ್ ರನ್ ಅಲ್ಲ; ಮುಂದಿನ ಕ್ರಮಗಳ ಕುರಿತು ಈಗಾಗಲೇ ಚರ್ಚಿಸಿದ್ದೇವೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.