ಬೆಂಗಳೂರು: ಹಿಂದೂ ದೇವಾಲಯ, ಧಾರ್ಮಿಕ ಸಂಸ್ಥೆಗಳಿಗೆ ಕಾಂಗ್ರೆಸ್ ಸರ್ಕಾರ ಬಹಳ ಅನ್ಯಾಯ ಮಾಡಿದೆ. ಹಾಗೆಯೇ ಪ್ರತಿ ಇಲಾಖೆಗಳಲ್ಲಿ ಅಭಿವೃದ್ಧಿಗಾಗಿ ಹಣ ಖರ್ಚಾಗದೆ ಬಾಕಿ ಉಳಿದಿದೆ. ಸಿಎಂ ಸಿದ್ದರಾಮಯ್ಯನವರ 15 ನೇ ಬಜೆಟ್ ಒಡೆದ ಕನ್ನಡಿಯಂತಿದೆ, ಬಡವರ ವಿರೋಧಿಯಾಗಿದೆ, ಹಿಂದೂಗಳಿಗೆ ದ್ರೋಹ ಬಗೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದಿಂದ ದೇವಾಲಯಗಳಿಗೂ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜೊತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಕೇವಲ 17 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು 90% ಅನುದಾನ ಕಡಿತವಾಗಿದೆ. ಇದೇ ಕಾಂಗ್ರೆಸ್ ನಾಯಕರು ತೋರುವ ಪ್ರೀತಿ. ಅದೇ ವಕ್ಫ್ ಮಂಡಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಒಬ್ಬರು ರಾಮ ನನ್ನ ಹೆಸರಿನಲ್ಲಿದೆ ಎಂದರೆ, ಮತ್ತೊಬ್ಬರು ಶಿವ ನನ್ನ ಹೆಸರಲ್ಲಿದೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 24.7 ಕೋಟಿ ರೂ. ಖರ್ಚು ಮಾಡಿದ್ದು, ಈಗಿನ ಸರ್ಕಾರ 10 ಕೋಟಿ ರೂ. ಮೀಸಲಿಟ್ಟಿದೆ ಎಂದು ದೂರಿದರು.
ದೇವಸ್ಥಾನಗಳ ಆಸ್ತಿ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಅದನ್ನು ನಿರ್ವಹಿಸಲು ಹೆಚ್ಚು ಅನುದಾನ ಬೇಕಾಗುತ್ತದೆ. ನಾನು ಸಾರಿಗೆ ಸಚಿವನಾಗಿದ್ದಾಗ 1,200 ಎಕರೆ ಸರ್ಕಾರಿ ಜಮೀನನ್ನು ಹರಾಜು ಹಾಕುವುದನ್ನು ತಪ್ಪಿಸಿ ಸಾರಿಗೆ ಇಲಾಖೆಗೆ ಕೊಡಲು ಕ್ರಮ ವಹಿಸಿ ಯಶಸ್ವಿಯಾಗಿದ್ದೆ. ಈ ರೀತಿ ಸರ್ಕಾರಿ ಜಮೀನನ್ನು ಉಳಿಸಲು ಕ್ರಮ ವಹಿಸಿ ಎಂದು ಕಿವಿಮಾತು ಹೇಳಿದರು.
ತೆರಿಗೆ ಸಂಗ್ರಹ ಇಳಿಕೆ
2023-24 ರಲ್ಲಿ ತೆರಿಗೆ ಸಂಗ್ರಹದ ಗುರಿ 1,75,653 ಕೋಟಿ ರೂ. ಇದ್ದು, 1,61,494 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಗುರಿಗಿಂತ 14,159 ಕೋಟಿ ರೂ. ಸಂಗ್ರಹ ಕಡಿಮೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯ. 2024-25 ರಲ್ಲಿ ತೆರಿಗೆ ಸಂಗ್ರಹದ ಗುರಿ 1,89,893 ಕೋಟಿ ರೂ. ಇದ್ದು, ಕಳೆದ ಬಾರಿಗಿಂತ 28,399 ಕೋಟಿ ರೂ. ಅಧಿಕ ಗುರಿ ನೀಡಲಾಗಿದೆ. ಕಳೆದ ವರ್ಷದ್ದೇ ಗುರಿ ಈಡೇರಿಸಲಾಗದೆ ಈ ಬಾರಿ ಹೆಚ್ಚು ಗುರಿ ನೀಡಲಾಗಿದೆ. ಕೋವಿಡ್ ಬಂದಾಗ ಬಿಜೆಪಿ ಸರ್ಕಾರ ಆಸ್ತಿ ನೋಂದಣಿ ದರವನ್ನು ಶೇ.10 ರಷ್ಟು ಇಳಿಕೆ ಮಾಡಲಾಯಿತು. ಇದರಿಂದಾಗಿ ಗುರಿಗಿಂತ ಹೆಚ್ಚು ತೆರಿಗೆ ಸಂಗ್ರಹ ಸಾಧ್ಯವಾಯಿತು. ಈ ರೀತಿ ಸರ್ಕಾರ ತೆರಿಗೆ ಹೆಚ್ಚು ಬರಲು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ಈ ಬಾರಿಯೂ 10-12 ಸಾವಿರ ಕೋಟಿ ರೂ. ಕಡಿಮೆಯಾಗಲಿದ್ದು, ಮತ್ತೆ ಸಾಲ ಮಾಡುವ ಸಂಭವವಿದೆ ಎಂದು ದೂರಿದರು.
2022-23 ರಲ್ಲಿ ಬಜೆಟ್ ಗಾತ್ರ 2,89,653 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 57,348 ಕೋಟಿ ರೂ. ಇತ್ತು. 2023-24 ರಲ್ಲಿ ಬಜೆಟ್ ಗಾತ್ರ 3,27,747 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 51,231 ಕೋಟಿ ರೂ. ಆಗಿತ್ತು. 2024-25 ರಲ್ಲಿ ಬಜೆಟ್ ಗಾತ್ರ 3,71,383 ಕೋಟಿ ರೂ. ಆಗಿದ್ದು, ಬಂಡವಾಳ ವೆಚ್ಚ 52,903 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ ಶೇ.6 ರಷ್ಟು ಕಡಿಮೆಯಾಗಿದೆ. ಇದು ಒಂದು ರೀತಿಯಲ್ಲಿ ಪ್ರಪಾತಕ್ಕೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ 15 ನೇ ಬಜೆಟ್ಗೆ ಸಾಲದ ಮೊತ್ತವನ್ನು 1 ಲಕ್ಷ ಕೋಟಿ ರೂ. ತಲುಪಿಸಿದ್ದಾರೆ. ಈವರೆಗೆ 6,65,095 ಕೋಟಿ ರೂ. ಗೆ ಸಾಲ ತಲುಪಿದೆ. ಅಂದರೆ ಒಬ್ಬ ಪ್ರಜೆಯ ಮೇಲೆ 95,013 ರೂ. ಸಾಲ ಬೀಳಲಿದೆ. ಇನ್ನು ಸಾಲ ಮಾಡಲು ಆಗಲ್ಲ, ತೆರಿಗೆ ಹಾಕಲೂ ಆಗಲ್ಲ ಎನ್ನುವ ಸ್ಥಿತಿ ಉಂಟಾಗಿದೆ. ವಿತ್ತೀಯ ಕೊರತೆ 2022-23 ರಲ್ಲಿ 2.14%, 2023-24 ರಲ್ಲಿ 2.67% ಆಗಿದ್ದು, 2024-25 ರಲ್ಲಿ 2.9 ಗೆ ಹೋಗುವ ಸಾಧ್ಯತೆ ಇದೆ. ಕೇವಲ ಎರಡು ವರ್ಷದಲ್ಲಿ ಸಾಲದ ಪ್ರಮಾಣ 13.6% ಗೆ ಏರಿಕೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಡ್ಡಿ ಪ್ರಮಾಣ 73,000 ಕೋಟಿ ರೂ. ತಲುಪುವ ಅಂದಾಜಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅನುದಾನ
ಕೇಂದ್ರ ಸರ್ಕಾರವು ಮೈಸೂರು-ಬೆಂಗಳೂರು ಹೆದ್ದಾರಿಗೆ ಸುಮಾರು 8,408 ಕೋಟಿ ರೂ., ಆವಾಸ್ ಯೋಜನೆಗೆ 6,679 ಕೋಟಿ ರೂ., ಬುಡಕಟ್ಟು ವಿದ್ಯಾರ್ಥಿವೇತನಕ್ಕೆ 875 ಕೋಟಿ ರೂ., ಪಿಎಂ ಸ್ವನಿಧಿಗೆ 648 ಕೋಟಿ ರೂ., ಕಿಸಾನ್ ಸಮ್ಮಾನ್ ಯೋಜನೆಗೆ 13,669 ಕೋಟಿ ರೂ. ನೀಡಿದೆ. ರಾಜ್ಯದಲ್ಲಿ 6,005 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿದ್ದು, 97,246 ಕೋಟಿ ರೂ. ವೆಚ್ಚವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ -2 ಗೆ 5,000 ಕೋಟಿ ರೂ ಹಾಗೂ ರನ್ವೇ ಕಾಮಗಾರಿಗೆ 2,708 ಕೋಟಿ ರೂ. ನೀಡಲಾಗಿದೆ. ನೈಋತ್ಯ ರೈಲ್ವೆಗೆ 3,424 ಕೋಟಿ ರೂ., ಸ್ಮಾರ್ಟ್ ಸಿಟಿ ಯೋಜನೆಗೆ 3,305 ಕೋಟಿ ರೂ., ಅಮೃತ ಯೋಜನೆಗೆ 2,319 ಕೋಟಿ ರೂ. ನೀಡಲಾಗಿದೆ. ಒಟ್ಟು 2 ಲಕ್ಷ ಕೋಟಿ ರೂ. ಅಧಿಕ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಎಂಟು ವರ್ಷದಲ್ಲಿ 3,233 ಕೋಟಿ ರೂ. ನೀಡಿದ್ದು, ಮೋದಿ ಸರ್ಕಾರ ಎಂಟು ವರ್ಷದಲ್ಲಿ 11,630 ಕೋಟಿ ರೂ. ನೀಡಿದ್ದು, ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.
ಹಣ ಬಳಕೆಯಾಗಿಲ್ಲ
ಪ್ರವಾಸೋದ್ಯಮ ಇಲಾಖೆಗೆ 381 ಕೋಟಿ ರೂ. ನೀಡಿದ್ದು, 253.12 ಕೋಟಿ ರೂ. ಬಳಕೆಯಾಗಿಲ್ಲ. ಅಂದರೆ 66% ಹಣ ಬಳಕೆಯಾಗಿಲ್ಲ. ಇಂತಹ ಇಲಾಖೆಯನ್ನು ಮುಚ್ಚಿ ಹಾಕುವುದೇ ಸೂಕ್ತ. ಆಹಾರ ಇಲಾಖೆಗೆ 10,716 ಕೋಟಿ ರೂ. ನೀಡಿದ್ದು, 5,660.80 ಕೋಟಿ ರೂ. ಬಳಕೆ ಮಾಡಿಲ್ಲ. ಅಂದರೆ 52% ರಷ್ಟು ಹಣ ಬಳಕೆಯಾಗಿಲ್ಲ. ವಸತಿ ಇಲಾಖೆಗೆ 5,849 ಕೋಟಿ ರೂ. ನೀಡಿದ್ದು, 3,019 ಕೋಟಿ ರೂ. ಬಳಕೆಯಾಗದೆ ಉಳಿದಿದೆ. ನಗರಾಭಿವೃದ್ಧಿ ಇಲಾಖೆಗೆ 22,719 ಕೋಟಿ ರೂ. ನೀಡಿದ್ದು, 10,765 ಕೋಟಿ ರೂ. ಉಳಿದಿದೆ, ಇದೇ ರೀತಿ ಎಲ್ಲ ಇಲಾಖೆಗಳಲ್ಲೂ ಅನುದಾನ ಬಳಕೆಯಾಗದೆ ಉಳಿದಿದೆ ಎಂದು ದೂರಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 2022-23 ರಲ್ಲಿ 1,534.9 ಕೋಟಿ ರೂ. ನೀಡಿತ್ತು. ಕಾಂಗ್ರೆಸ್ ಸರ್ಕಾರ 2023-24 ರಲ್ಲಿ 1,038 ಕೋಟಿ ರೂ. ಹಾಗೂ ಈ ಬಜೆಟ್ನಲ್ಲಿ 940 ಕೋಟಿ ರೂ. ಮೀಸಲಿಟ್ಟಿದೆ. ನೇಕಾರರ ಪ್ಯಾಕೇಜ್ ಯೋಜನೆಗೆ ಬಿಜೆಪಿ ಸರ್ಕಾರ 2022-23 ರಲ್ಲಿ 125.77 ಕೋಟಿ ರೂ. ಖರ್ಚು ಮಾಡಿದ್ದು, ಕಾಂಗ್ರೆಸ್ ಸರ್ಕಾರ 2023-24 ರಲ್ಲಿ 103 ಕೋಟಿ ರೂ. ಹಾಗೂ ಈ ಬಜೆಟ್ನಲ್ಲಿ ಕೇವಲ 10 ಕೋಟಿ ರೂ. ನೀಡಿದೆ. ಕೆಎಸ್ಆರ್ಪಿ ಮೂಲಸೌಕರ್ಯಕ್ಕೆ ಬಿಜೆಪಿ ಸರ್ಕಾರ 9.26 ಕೋಟಿ ರೂ. ಖರ್ಚು ಮಾಡಿತ್ತು. ಕಾಂಗ್ರೆಸ್ ಹಿಂದಿನ ಬಜೆಟ್ನಲ್ಲಿ 3.56 ಕೋಟಿ ರೂ. ನೀಡಿದ್ದು, ಈ ಸಲ 1 ಲಕ್ಷ ರೂ. ಮೀಸಲಿಟ್ಟಿದೆ. ಇಷ್ಟು ಹಣದಲ್ಲಿ ಕೋಲು ಖರೀದಿಸಲು ಕೂಡ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಕವನ ವಾಚಿಸಿದ ಆರ್.ಅಶೋಕ
“ಮುಂಗಡದ ಅಂಗಡಿಯಲ್ಲಿ ತಳಿರು ತೋರಣದ ಸದ್ದು,
ಅಂಗಡಿಯಲ್ಲಿ ಏನಿಲ್ಲ ಏನಿಲ್ಲ,
ಖಾಲಿ ಡಬ್ಬ, ಖಾಲಿ ಡಬ್ಬ” ಎಂದು ಆರ್.ಅಶೋಕ್ ಅವರು ಬಜೆಟ್ ಕುರಿತು ಕವನ ವಾಚಿಸಿದರು.
ನಮ್ಮ ತೆರಿಗೆ ವಯನಾಡಿನ ಆನೆಗೆ
ನಮ್ಮ ತೆರಿಗೆ ಈಗ ರಾಹುಲ್ ಗಾಂಧಿಯವರ ವಯನಾಡು ಕ್ಷೇತ್ರಕ್ಕೆ ಹೋಗಿದೆ. ಈ 15 ಲಕ್ಷ ರೂ. ಯಾರ ಹಕ್ಕು? ನಮ್ಮ ಮನೆಯಲ್ಲಿ ಹಣವಿದ್ದು ಹೆಚ್ಚುವರಿಯಾದರೆ ಮಾತ್ರ ಹಾಗೆ ಮಾನವೀಯತೆಯಿಂದ ನೀಡಬೇಕು. ಆದರೆ ಕನಕಪುರ ತಾಲೂಕಿನ ಪುಟ್ಟನಂಜಯ್ಯ ಅವರು ಆನೆಯಿಂದ ಮೃತಪಟ್ಟಿದ್ದು, ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.