ಬೆಂಗಳೂರು: ಕೇಂದ್ರದ ಬಿಜೆಪಿ ಸರಕಾರವು ತಮ್ಮ ಸಾಧನೆಯನ್ನು ಅಂಕಿಅಂಶಗಳ ಶ್ವೇತಪತ್ರದ ಮೂಲಕ ತಿಳಿಸಿದೆ. ಯುಪಿಎ ಅವಧಿಯ ‘ಆಡಳಿತ ರೋಡ್ ಟು ನೋವೇರ್’ ಆಗಿತ್ತು. ರಾಜಕೀಯ ಪ್ರೇರಿತ ಆಡಳಿತ ಅದಾಗಿತ್ತು. ಯುಪಿಎ ಬಿಟ್ಟು ಹೋದ ಆರ್ಥಿಕ ಗೊಂದಲ, ದಿಕ್ಕು ದೆಸೆ ಇಲ್ಲದ ಆಡಳಿತ, ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಒಯ್ದವರು ನರೇಂದ್ರ ಮೋದಿಜೀ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿಶ್ಲೇಷಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಎನ್ಡಿಎ ಸರಕಾರದ ಸಾಧನೆ ಮತ್ತು ಯುಪಿಎ ಸರಕಾರದ ವೈಫಲ್ಯಗಳ ಕುರಿತು ವಿವರಿಸಿದರು.
ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ವಾಜಪೇಯಿ ಅವರ ಆಡಳಿತ ಇದ್ದಾಗ ಹಣದುಬ್ಬರ- ಬೆಲೆ ಏರಿಕೆ ಶೇ 3.9ರಷ್ಟಿತ್ತು. ಕಾಂಗ್ರೆಸ್ನ 10 ವರ್ಷಗಳ ಅವಧಿಯಲ್ಲಿ ಅದು ಸರಾಸರಿ ಶೇ 8.2 ಆಗಿತ್ತು. ಕೋವಿಡ್ ಇದ್ದರೂ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಯುದ್ಧಗಳಿದ್ದರೂ ಮೋದಿಜೀ ಅವರ ಆಡಳಿತದಲ್ಲಿ ಬೆಲೆ ಏರಿಕೆ ಸರಾಸರಿ ಶೇ 5ರಷ್ಟಿದೆ. ವಿಶ್ವದ ಎಲ್ಲೆಡೆ ಬೆಲೆ ಏರಿಕೆ ಇದೆ. ವಾಸ್ತವವಾಗಿ ಯುಪಿಎ ಅವಧಿಯಲ್ಲಿ ಬೆಲೆ ಏರಿಕೆ ಇದ್ದುದು ಎದ್ದು ಕಾಣುವಂತಿತ್ತು ಎಂದು ವಿವರಿಸಿದರು.
ವಾಜಪೇಯಿ ಅವರ ಕಾಲದಲ್ಲಿ ಶೇ 8ರಷ್ಟು ಜಿಡಿಪಿ ಮೂಲಕ ಅಭಿವೃದ್ಧಿ ಇತ್ತು. ಆದರೆ, ಯುಪಿಎ ಕಾಲದಲ್ಲಿ ಬೆಲೆ ಏರಿಕೆ ಇದ್ದರೂ ಬೆಳವಣಿಗೆ ಕಡಿಮೆ ಇತ್ತು. ಕಾಂಗ್ರೆಸ್ ಅವಧಿಯದು ಶೇ 5ಷ್ಟು ಅಭಿವೃದ್ದಿ ಮಾತ್ರ ಎಂದು ಅವರು ಆರೋಪಿಸಿದರು. ಮೋದಿಯವರ ಅವಧಿಯಲ್ಲಿ ಶೇ 8ರಿಂದ 9ರಷ್ಟು ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ ಎಂದು ನುಡಿದರು. ಯುಪಿಎ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್ಗಳಿಂದ ಅತಿ ಹೆಚ್ಚು ಸಾಲ ಕೊಡಿಸಿದ್ದರು. ವಾಜಪೇಯಿಯವರ ಕಾಲದಲ್ಲಿ ಲೋನ್ ಎಕ್ಸ್ಪೋಜರ್ 6 ಲಕ್ಷ 60 ಸಾವಿರ ಕೋಟಿ ಇದ್ದರೆ ಯುಪಿಎ ಕಾಲದಲ್ಲಿ ಅದು 39 ಲಕ್ಷ ಕೋಟಿಗೆ ಏರಿತ್ತು ಎಂದು ತಿಳಿಸಿದರು.
ದೇಶದ ಸಾಲ ಮರುಪಾವತಿಗೂ ಸಮಸ್ಯೆ ಇತ್ತು. ಯುಪಿಎ ಸರಕಾರ ನಿರಾಳವಾಗಿ ನಿದ್ರಾಲೋಕದಲ್ಲಿತ್ತು ಎಂದು ಟೀಕಿಸಿದ ಅವರು, ಬ್ಯಾಂಕ್ ಎನ್ಪಿಎ ಶೇ 7 ಇತ್ತು. ಈಗ ಅದು ಶೇ 3.2ರಷ್ಟಿದೆ. ಬ್ಯಾಂಕ್ಗಳು ಹಿಂದೆ ಮುಚ್ಚುವಂಥ ಸ್ಥಿತಿಯಲ್ಲಿದ್ದವು. ಈಗ ಮೋದಿಜೀ ಅವರ ಆಡಳಿತದಲ್ಲಿ ಅವು ಬೆಳವಣಿಗೆ ಕಂಡಿವೆ ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ ಡಾಲರ್ ಬೆಲೆ ಏರಿಕೆಯೂ ಗರಿಷ್ಠ ಪ್ರಮಾಣದಲ್ಲಿತ್ತು. ಕೇವಲ 4 ತಿಂಗಳಿಗೆ ಆಮದಿಗೆ ಸಾಕಾಗುವಷ್ಟು ಮಾತ್ರ ಫಾರಿನ್ ರಿಸರ್ವ್ (290 ಬಿಲಿಯನ್ ಡಾಲರ್) ನಮ್ಮ ದೇಶದಲ್ಲಿತ್ತು. ಈಗ 596 ಬಿಲಿಯನ್ ಡಾಲರ್ ಇದೆ. ಈಗ ಅಭಿವೃದ್ಧಿಯು ಭರವಸೆದಾಯಕವಾಗಿ ನಿರ್ವಹಣೆ ಆಗುತ್ತಿದೆ ಎಂದು ವಿವರ ನೀಡಿದರು. ಹಣಕಾಸು ಕೊರತೆ ಗರಿಷ್ಠ ಇತ್ತು. ತೋರಿಸುತ್ತಿದ್ದುದೇ ಒಂದು; ವಾಸ್ತವವಾಗಿ ಇನ್ನೊಂದು ಎಂಬ ಸ್ಥಿತಿ ಇತ್ತು. 1 ಲಕ್ಷದ 90 ಸಾವಿರ ಕೋಟಿ ಆಯಿಲ್ ಬಾಂಡ್ ಬಿಡುಗಡೆ ಮಾಡಿದರು. ಇದನ್ನೆಲ್ಲ ತೋರಿಸಿರಲಿಲ್ಲ. ಇಂಥ ಸಾಲಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು.
ಅವರ ಕಾಲದಲ್ಲಿ ಆರ್ಥಿಕ ಸುಸ್ಥಿರತೆ ಇಲ್ಲದೆ ಎಲ್ಲವೂ ಭರವಸೆದಾಯಕವಾಗಿರಲಿಲ್ಲ. ಇವತ್ತು ಎಲ್ಲವೂ ಸುಸ್ಥಿರತೆಯಿಂದ ಸಾಗಿದೆ. ಮೂಲಭೂತ ಸೌಕರ್ಯ, ಆಸ್ತಿ ನಿರ್ಮಿಸುವ ನಿಟ್ಟಿನಲ್ಲಿ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಮೊತ್ತವು ವಾಜಪೇಯಿ ಅವರ ಕಾಲದಲ್ಲಿ ಶೇ 31ರಷ್ಟಿತ್ತು. ಕಾಂಗ್ರೆಸ್ ಕಾಲದಲ್ಲಿ ಅದು ಕೇವಲ ಶೇ 16ಕ್ಕೆ ಇಳಿಯಿತು. ಮೋದಿಜೀ ಅವರ ಕಾಲದಲ್ಲಿ ಮತ್ತೆ ಶೇ 28ಕ್ಕೆ ಏರಿಕೆ ಕಂಡಿತು ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಅವಧಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಕಡಿವಾಣ ಹಾಕಿರುವುದು ಎದ್ದು ಕಾಣುವಂತಿದೆ ಎಂದರು. ಈ ಎಲ್ಲ ವಿಚಾರಗಳಿಗೆ ಕಾಂಗ್ರೆಸ್ಸಿನವರಲ್ಲಿ ಉತ್ತರ ಇಲ್ಲ ಎಂದು ಟೀಕಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿ 96 ಸಾವಿರ ಕೋಟಿ ಮೊತ್ತ ಖರ್ಚಾಗದೆ ಉಳಿದಿತ್ತು. ಇದು ಅಸಮರ್ಥ ಆಡಳಿತಕ್ಕೆ ಕೈಗನ್ನಡಿ ಎಂದು ದೂರಿದರು. 60-65 ವರ್ಷಗಳ ಕಾಂಗ್ರೆಸ್- ಯುಪಿಎ ಅವಧಿಯಲ್ಲಿ 14.5 ಕೋಟಿ ಎಲ್ಪಿಜಿ ಸಿಲಿಂಡರ್ ಸಂಪರ್ಕ ಇದ್ದುದು ಈಗ 31 ಕೋಟಿಗೂ ಹೆಚ್ಚಾಗಿದೆ. ವಿದ್ಯುದೀಕರಣ ಅವರ ಕಾಲದಲ್ಲಿ ಶೇ 85 ಇದ್ದುದನ್ನು ಈಗ ಶೇ 100ಕ್ಕೆ ತರಲಾಗಿದೆ. ಅವರ ಕಾಲದಲ್ಲಿ 12 ಗಂಟೆ ಸರಾಸರಿ ವಿದ್ಯುತ್ ಲಭ್ಯವಿದ್ದರೆ, ಈಗ 20 ಗಂಟೆಗೂ ಹೆಚ್ಚು ಕಾಲ ಲಭ್ಯತೆ ಇದೆ ಎಂದು ಅಂಕಿಅಂಶಗಳನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.