ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವಿಶ್ವವಿದ್ಯಾಲಯವಾದರೂ ಇರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಣೆ ಮಾಡುತ್ತಿದ್ದು, 2022-23ರ ಬಜೆಟ್ನಲ್ಲಿ ಹೊಸ ಮಾದರಿಯ 7 ನೂತನ ವಿಶ್ವವಿದ್ಯಾಲಯಗಳನ್ನು ಆರಂಭಿಸುವುದಾಗಿ ಘೋಷಿಸಿದೆ.
ಕಡಿಮೆ ಸ್ಥಳಾವಕಾಶ, ಕಡಿಮೆ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಲದೊಂದಿಗೆ ಕೆಲಸ ಮಾಡುವುದು ಈ ನೂತನ ವಿಶ್ವವಿದ್ಯಾಲಯಗಳ ಗುಣಲಕ್ಷಣಗಳಾಗಿವೆ. ಇದರಂತೆ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಮಂಡ್ಯ, ಕೊಪ್ಪಳ ಮತ್ತು ಬಾಗಲಕೋಟೆಗಳಲ್ಲಿ ಹೊಸ ವಿ.ವಿ.ಗಳು ತಲೆಯೆತ್ತಲಿವೆ. ಇವುಗಳ ಜತೆಗೆ, ಇದುವರೆಗೂ ಏಕೀಕೃತ ವಿಶ್ವವಿದ್ಯಾಲಯವನ್ನು ಹೊಂದಿದ್ದ ಮಂಡ್ಯದ ಸರಕಾರಿ ಕಾಲೇಜನ್ನು ಕೂಡ ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಹೊಸ ವಿಶ್ವವಿದ್ಯಾಲಯವಾಗಿ ಮಾಡಲಾಗುತ್ತಿದೆ.
ಈ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ, ವಿದ್ಯಾರ್ಥಿಗಳಿಗೆ ಅವರವರ ಊರುಗಳ ಸಮೀಪದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸಲು ರಾಜ್ಯ ಬಿಜೆಪಿ ಸರಕಾರವು ಕ್ರಾಂತಿಕಾರಕ ಕ್ರಮ ಕೈಗೊಂಡಂತಾಗಿದೆ.
ನೂತನ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಸಂಕ್ಷಿಪ್ತ ವಿವರಗಳು ಕೆಳಕಂಡಂತಿವೆ-
ಚಾಮರಾಜನಗರ ವಿವಿ
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರದ ಕಾಲೇಜುಗಳು ಮೊದಲಿನಿಂದಲೂ ಮೈಸೂರು ವಿವಿ ವ್ಯಾಪ್ತಿಯಲ್ಲೇ ಇದ್ದವು. ಕ್ರಮೇಣ ಇಲ್ಲಿ ಮೈಸೂರು ವಿವಿ ವತಿಯಿಂದ ಸ್ನಾತಕೋತ್ತರ ಕೇಂದ್ರವೊಂದನ್ನು ಸ್ಥಾಪಿಸಲಾಗಿತ್ತು. ಈಗ ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ನೂತನ ವಿಶ್ವವಿದ್ಯಾಲಯವನ್ನೇ ಆರಂಭಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಜಿಲ್ಲೆಯಲ್ಲಿರುವ 18 ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.
ಹಾಸನ ವಿವಿ
ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಹಾಸನದಲ್ಲಿ ಮೂರು ದಶಕಗಳಿಂದಲೂ ಹೇಮಗಂಗೋತ್ರಿ ಎನ್ನುವ ಹೆಸರಿನ ಸ್ನಾತಕೋತ್ತರ ಕೇಂದ್ರ ಮಾತ್ರವೇ ಇತ್ತು. ಈಗ ಇಲ್ಲೂ ಒಂದು ಪ್ರತ್ಯೇಕ ವಿ.ವಿ.ಯನ್ನು ಸ್ಥಾಪಿಸಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ೩೬ ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ.
ಹಾವೇರಿ ವಿವಿ
ಧಾರವಾಡದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಜಿಲ್ಲೆಯಲ್ಲಿ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಇರಬೇಕೆನ್ನುವುದು ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ಇದಕ್ಕೆ ಸ್ಪಂದಿಸಿ, ಸ್ಥಾಪಿಸುತ್ತಿರುವ ನೂತನ ಹಾವೇರಿ ವಿ.ವಿ.ಯಲ್ಲಿ ಜಿಲ್ಲೆಯ 40 ಪ್ರಥಮ ದರ್ಜೆ ಕಾಲೇಜುಗಳು ಇರಲಿವೆ.
ಬೀದರ್ ವಿವಿ
ಬೀದರ್ ಜಿಲ್ಲೆಯು ಇದುವರೆಗೂ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ಕರ್ನಾಟಕದ ತುತ್ತತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಒಳ್ಳೆಯ ಶೈಕ್ಷಣಿಕ ಪರಿಸರವಿದೆ. ಇದನ್ನು ಪರಿಗಣಿಸಿ ಹೊಸ ವಿಶ್ವವಿದ್ಯಾಲಯವನ್ನು ಇಲ್ಲಿಗೆ ಮಂಜೂರು ಮಾಡಲಾಗಿದೆ. ಇದರಡಿಯಲ್ಲಿ ಜಿಲ್ಲೆಯ 140 ಪ್ರಥಮ ದರ್ಜೆ ಕಾಲೇಜುಗಳು ಇರಲಿವೆ.
ಕೊಡಗು ವಿವಿ
ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಸ್ವತಂತ್ರವಾದ ಪ್ರತ್ಯೇಕ ವಿ.ವಿ.ಯೇ ಮೈದಾಳಲಿದೆ. ಇದರಡಿಯಲ್ಲಿ 24 ಕಾಲೇಜುಗಳು ಬರಲಿವೆ.
ಕೊಪ್ಪಳ ವಿವಿ
ಮೊದಲು ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಕೊಪ್ಪಳ ಜಿಲ್ಲೆಯು ಇತ್ತೀಚೆಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯ ಪರಿಧಿಯಲ್ಲಿತ್ತು. ನೂತನ ವಿ.ವಿ.ಯಲ್ಲಿ 40 ಕಾಲೇಜುಗಳು ಇರಲಿವೆ.
ಬಾಗಲಕೋಟೆ ವಿವಿ
ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಇದುವರೆಗೂ ಬೆಳಗಾವಿಯ ಶ್ರೀ ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಯಲ್ಲಿದ್ದವು. ನೂತನ ವಿ.ವಿ.ಯಡಿಯಲ್ಲಿ 71 ಕಾಲೇಜುಗಳು ಇರಲಿವೆ.
ಮಂಡ್ಯ ವಿವಿ
ಮಂಡ್ಯ ಜಿಲ್ಲೆಯು ಇದುವರೆಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ಇತ್ತೀಚೆಗೆ, ಬಿಜೆಪಿ ಸರಕಾರವು ಇಲ್ಲಿನ ಸರಕಾರಿ ಕಾಲೇಜನ್ನು ಏಕೀಕೃತ ವಿ.ವಿ. ಆಗಿ ಮಾಡಿತ್ತು. ಈಗ ಜಿಲ್ಲಾ ವ್ಯಾಪ್ತಿಗೆ ನೂತನ ವಿ.ವಿ.ಯನ್ನು ಆರಂಭಿಸಲಾಗುತ್ತಿದೆ. ಇದರಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳೂ ಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.