ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಸ್ಥಿತಿಗತಿಗಳ ಸುಧಾರಣೆ ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಒಟ್ಟು 250 ಕೋಟಿ ರೂ. ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ರವರ 107ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಎಲ್ಲ ವಿದ್ಯಾರ್ಥಿನಿಲಯಗಳ ಸಾಮಥ್ರ್ಯವನ್ನು ಶೇ. 25 ರಷ್ಟು ಹೆಚ್ಚಿಸಲು ಅನುದಾನವನ್ನು ನೀಡಲಾಗಿದೆ. ರಾಜ್ಯದ ಒಟ್ಟು 2439 ಹಾಸ್ಟೆಲ್ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ವಿದ್ಯಾರ್ಥಿ ವೇತನದಲ್ಲಿ ತಲಾ 150 ರೂ.ಗಳನ್ನು ಹೆಚ್ಚಿಸಲಾಗಿದೆ. 195 ವಿದ್ಯಾರ್ಥಿನಿಲಯ ಕಟ್ಟಡಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಕನಕದಾಸರ ಹೆಸರಿನಲ್ಲಿ 50 ಹೊಸ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ 5 ಶೈಕ್ಷಣಿಕ ಕೇಂದ್ರಗಳಲ್ಲಿ 1000 ಮಕ್ಕಳಿಗೆ ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯನ್ನು 5000 ಮಕ್ಕಳ ಸಾಮಥ್ರ್ಯಕ್ಕೇರಿಸುವ ಗುರಿ ಇದ್ದು, ಹಣವನ್ನು ಒದಗಿಸಲಾಗಿದೆ. ದೇವರಾಜ ಅರಸು ಅವರ ಹೆಸರಿನಲ್ಲಿ ಪಿಹೆಚ್ಡಿ ಮಾಡುವ ವಿದ್ಯಾರ್ಥಿಗಳಿಗೆ ಒಟ್ಟು 4 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶ ನೀಡಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ 10 ಕೋಟಿ ಅನುದಾನ ಹೆಚ್ಚಿಗೆ ನೀಡಲಾಗಿದೆ ಎಂದರು.
ನಾರಾಯಣ ಗುರು ಅವರ ಹೆಸರಿನಲ್ಲಿ ತಲಾ 30 ಕೋಟಿ ರೂ. ವೆಚ್ಚದಲ್ಲಿ 4 ಶಾಲೆಗಳನ್ನು ಪ್ರಾರಂಭಿಸಲಾಗುವುದು. ಹಿಂದುಳಿದ ವರ್ಗದ ವಿವಿಧ ನಿಗಮ ಮಂಡಳಿಗೆ ಸುಮಾರು 800 ಕೋಟಿ ರೂ.ಗಳ ಅನುದಾನವನ್ನು ಅಧಿಕವಾಗಿ ನೀಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಯೊಂದು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಯುವಕರ ಸಂಘ ಯೋಜನೆಯಡಿ 10 ಲಕ್ಷ ರೂ. ಅನುದಾನ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ತೀಶಕ್ತಿ ಸಂಘಗಳಿಗೆ ಆರ್ಥಿಕ ಸೌಲಭ್ಯ, ಬ್ಯಾಂಕ್ ಜೋಡಣೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ 5 ಲಕ್ಷ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಠಮಾನ್ಯಗಳಿಗೆ 129 ಕೋಟಿ ರೂ.ಗಳನ್ನು ನೀಡಲಾಗಿದೆ. ದೇವರಾಜ ಅರಸು ಅವರ ವಿಚಾರಗಳನ್ನು, ಕನಸುಗಳನ್ನು ನನಸು ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅವರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಎಂದು ತಿಳಿಸಿದರು.
ಕರ್ನಾಟಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಪರವಾಗಿರುವುದಲ್ಲಿ ದೇವರಾಜ ಅರಸು ಅವರ ಪಾತ್ರ ಮಹತ್ವದ್ದಾಗಿದೆ. ಬಡವರಿಗಾಗಿ ಮಿಡಿಯುವ ದೂರದೃಷ್ಟಿಯ ನಾಯಕ. ಅವರು ಪ್ರೇರಣಾದಾಯಕ ವ್ಯಕ್ತಿತ್ವದವರಾಗಿದ್ದರು. ರಾಜ್ಯದ ರಾಜಕೀಯ ಸಾಮಾಜಿಕ ವಲಯಗಳಲ್ಲಿ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಅರಸು ಸಮುದಾಯದ ಜನಸಂಖ್ಯೆ ಬಹಳ ಕಡಿಮೆ, ಕ್ಷತ್ರೀಯ ಹಿನ್ನೆಲೆಯಿರುವುದರಿಂದ ಹೋರಾಟದ ಮನೋಭಾವ ಅವರಲ್ಲಿ ಸಹಜವಾಗಿತ್ತು. ಧ್ವನಿ ಇಲ್ಲದ ಸಮಾಜಕ್ಕೆ ರಾಜಕೀಯ ಶಕ್ತಿಯನ್ನು ತುಂಬಿ ಹೊಸ ರಾಜಕೀಯ ಮನ್ವಂತರವನ್ನು ಪ್ರಾರಂಭಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು ಎಂದರು.
ಉಳುವವನೇ ಭೂಮಿಯ ಒಡೆಯ ಎಂಬ ತತ್ವಕ್ಕೆ ಕಾನೂನಿನ ಸ್ವರೂಪವನ್ನು ನೀಡಿ, ಉಳುವವನಿಗೆ ಆ ಭೂಮಿಯ ಮೇಲೆ ಅಧಿಕಾರವನ್ನು ಕೊಟ್ಟಂತಹ ಕ್ರಾಂತಿಕಾರಿ ಹೆಜ್ಜೆಯಾಯಿತು. . ಸಣ್ಣ ಉಳುಮೆದಾರರಿಗೆ ಭೂ ಒಡೆತನ ನೀಡಿದ ನಂತರ ರಾಜ್ಯದಲ್ಲಿ ಆಹಾರ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಯಿತು ಎಂದರು.
ಹಿಂದುಳಿದ ಸಣ್ಣ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ಹಾಗೂ ಸ್ವಾಭಿಮಾನದ ಬದುಕು ನೀಡಿದ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಹೊಸ ದಿಕ್ಸೂಚಿಯನ್ನು ನೀಡಿದ ಮಹಾನ್ ನಾಯಕರಾಗಿದ್ದರು. ರಾಜ್ಯದ ಜನ ಶ್ರೀಮಂತವಾಗಿದ್ದರೆ ಮಾತ್ರ ರಾಜ್ಯ ಶ್ರೀಮಂತವಾಗುತ್ತದೆ ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅರಸು ಅವರ ಜನತಾ ಮನೆ, ಪಡಿತರ ವ್ಯವಸ್ಥೆ, ವಿದ್ಯುಚ್ಛಕ್ತಿ ರಿಯಾಯ್ತಿ, ಕೃಷಿಯಲ್ಲಿ ಆಧುನೀಕರಣ, ವಿದ್ಯುಚ್ಛಕ್ತಿ ಉತ್ಪಾದನೆ ಹೆಚ್ಚಳ , ತಮ್ಮ ಮಹತ್ವದ ತೀರ್ಮಾನಗಳಿಂದ ರಾಜ್ಯವನ್ನು ಪ್ರಗತಿಪಥದಲ್ಲಿ ನಡೆಸಿದರು. ಹಿಂದುಳಿದ ವರ್ಗದವರ ನಾಯಕರನ್ನು ರಾಜಕೀಯವಾಗಿ ಬೆಳೆಸಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಲಾಭಗಳು ತಲುಪಿಸಲು ಸಂಕಲ್ಪ ಮಾಡಬೇಕು ಎಂದರು.
ಹಿಂದುಳಿದ ವರ್ಗಗಳ ಜೀವನಮಟ್ಟ ಸುಧಾರಣೆ, ಮಕ್ಕಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ದೇವರಾಜ ಅರಸು ಅವರು ಸಾಧಕರಾಗಿ ಎಲ್ಲರಿಗೂ ಪ್ರೇರಣೆ ಹಾಗೂ ಸ್ಪೂರ್ತಿಯಾಗಿದ್ದಾರೆ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕಂಕಣಬದ್ಧವಾಗಿರುವ ಸರ್ಕಾರ ನಮ್ಮದಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.