ಜೈಪುರ್: ಒಂದೇ ಒಂದು ದಿನವೂ ಶಾಲೆಯ ಮೆಟ್ಟಿಲು ಹತ್ತದ ರಾಜಸ್ಥಾನದ ಕಿರಣ್ ಜರಿವಾಲ್ ಎಂಎ ಅಧ್ಯಯನ ಮಾಡಿ ಸ್ನಾತಕೋತರ ಪದವಿಯನ್ನು ಪಡೆದುಕೊಂಡಿದ್ದಾಳೆ. ಆಕೆಯ ಈ ಸಾಧನೆಯ ಹಿಂದಿರುವುದು ಆಕೆಯ ತಂದೆ ಸನ್ವಾರ್ ಸಂಗ್ಮಾನಂದ.
ಕಿರಣ್ ಆರನೇ ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡಳು. ಬಳಿಕ ಮಗಳನ್ನು ಸಾಕಿ ಸಲಹುವ ಸಂಪೂರ್ಣ ಜವಾಬ್ದಾರಿ ಸನ್ವಾರ್ ಅವರ ಹೆಗಲೇರಿತು. ತನ್ನ ಮಗಳಿಗೆ ತಾಯಿಯ ಅಗಲುವಿಕೆಯ ನೋವು ಎಂದೂ ಕಾಡದಂತೆ ಅವರು ಆಕೆಯನ್ನು ನೋಡಿಕೊಳ್ಳ ಬಯಸಿದ್ದರು. ಹೀಗಾಗಿ ಆಕೆಯನ್ನು ಶಾಲೆಗೂ ಕಳುಹಿಸಲಿಲ್ಲ.
ಖಾಸಗಿ ಬೋಧಕ(ಟ್ಯೂಟರ್) ಆಗಿರುವ ಸನ್ವಾರ್ ಅವರಿಗೆ ಮಗಳನ್ನು ಶಾಲೆಗೆ ಕಳುಹಿಸಿದರೆ ಅಲ್ಲಿ ಆಕೆಗೆ ತಾಯಿಯ ನೆನಪು ಕಾಡಬಹುದು ಎಂಬ ಆತಂಕವಿತ್ತು, ಹೀಗಾಗಿ ತಾನೇ ಮನೆಯಲ್ಲೇ ಆಕೆಗೆ ಪಾಠ ಹೇಳಿಕೊಡಲು ಮುಂದಾದರು. ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತರ ಪದವಿಯವರೆಗೂ ಕಿರಣ್ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ಉತ್ತಮ ಅಂಕಗಳನ್ನು ಪಡೆದು ಸಚಿವರಿಂದ ಸನ್ಮಾನಿತರಾಗಿದ್ದಾರೆ.
ಮಗಳನ್ನು ಶಾಲೆಗೆ ಕಳುಹಿಸದ ಸನ್ವಾರ್ ಕ್ರಮ ಹಲವರ ವಿರೋಧಕ್ಕೆ ಕಾರಣವಾಗಿತ್ತು, ಆದರೆ ಇಂದು ಎಲ್ಲರೂ ಅವರನ್ನು ಶ್ಲಾಘಿಸುತ್ತಾರೆ. 10ನೇ ತರಗತಿ, 12ನೇ ತರಗತಿ, ಪದವಿ ಹೀಗೆ ಎಲ್ಲಾ ಹಂತವನ್ನೂ ಕಿರಣ್ ಅತ್ಯುತ್ತಮ ದರ್ಜೆಯಲ್ಲಿ ಪಾಸು ಮಾಡಿದ್ದಾಳೆ.
ಶಾಲೆಗೆ ಹೋದ ಎಲ್ಲರೂ ಉತ್ತಮವಾಗಿ ಕಲಿಯುತ್ತಾರೆ ಎಂಬ ಗ್ಯಾರಂಟಿಯಿಲ್ಲ, ಕೆಲವರು ಬಂಕ್ ಹೊಡೆದು ಸಿನಿಮಾಗೆ ಹೋಗುತ್ತಾರೆ. ಹೀಗಾಗಿ ನನಗೆ ಶಾಲೆಗೆ, ಕಾಲೇಜಿಗೆ ಹೋಗಬೇಕೆಂದು ಅನಿಸಲಿಲ್ಲ, ಮನೆಯಲ್ಲೇ ತಂದೆಯ ಸಹಾಯದಿಂದ ಉತ್ತಮ ವಿದ್ಯಾಭ್ಯಾಸವನ್ನು ಪಡೆದೆ ಎನ್ನುವ ಕಿರಣ್, ಸಮಯವಿದ್ದಾಗ ತಮ್ಮ ತಂದೆಯ ಬೋಧನ ವೃತ್ತಿಗೆ ಸಹಾಯ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.