ಬೆಂಗಳೂರು: ಅಸ್ಪೃಶ್ಯತೆ ಎಂಬುದು ಈಗಲೂ ಜೀವಂತವಾಗಿರುವ ಸಾಮಾಜಿಕ ಪಿಡುಗು. ಈ ಪಿಡುಗನ್ನು ಬುಡಸಮೇತ ನಿರ್ಮೂಲನೆ ಮಾಡಲು ಜನಾಂದೋಲನ ರೂಪಿಸುವ ಸಲುವಾಗಿ ರಾಜ್ಯ ಸರ್ಕಾರವು ವಿನಯ್ ಸಾಮರಸ್ಯ ಎಂಬ ಅಸ್ಪೃಶ್ಯತೆ ವಿರೋಧಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದ್ದು, ಅಸ್ಪೃಶ್ಯತೆ ವಿರುದ್ಧ ಜನಾಂದೋಲನ ರೂಪಿಸಲು ವಿನಯ್ ಸಾಮರಸ್ಯ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.
ಯೋಜನೆಯ ಅಡಿಯಲ್ಲಿ 6020 ಗ್ರಾಮ ಪಂಚಾಯತ್ ಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು, ದೇಗುಲ ಪ್ರವೇಶ ನಿರಾಕರಣೆ ಸೇರಿದಂತೆ ವಿವಿಧ ಸಾಮಾಜಿಕ ಅನಿಷ್ಟಗಳ ಕುರಿತು ಜನ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಯೋಜನೆಗೆ ವಿನಯ್ ಸಾಮರಸ್ಯ ಎಂಬ ಹೆಸರು ಇಡುವುದಕ್ಕೂ ಒಂದು ಕಾರಣವಿದೆ. 2021ರ ಸೆಪ್ಟೆಂಬರ್ನಲ್ಲಿ ಹುಟ್ಟುಹಬ್ಬದ ಸಲುವಾಗಿ ಕೊಪ್ಪಳದ ವಿಜಯಪುರ ಎಂಬಲ್ಲಿ ನಾಲ್ಕು ವರ್ಷದ ಮಗು ವಿನಯ್ ಪೋಷಕರೊಂದಿಗೆ ದೇವಸ್ಥಾನಕ್ಕೆ ಆಗಮಿಸಿತ್ತು. ದೇಗುಲದ ಹೊರಗೆ ನಿಂತಿದ್ದ ವೇಳೆ ಪೋಷಕರ ಕೈಯಿಂದ ತಪ್ಪಿಸಿ ಮಗು ದೇಗುಲದ ಒಳಗೆ ಪ್ರವೇಶಿಸಿತ್ತು. ಇದರಿಂದ ಕುಪಿತಗೊಂಡ ದೇಗುಲದ ಅರ್ಚಕರು ಮತ್ತು ಗ್ರಾಮಸ್ಥರು ಮಗುವಿನ ಕುಟುಂಬಕ್ಕೆ 25 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದರು. ಈ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ಅರ್ಚಕರು ಮತ್ತು ಗ್ರಾಮಸ್ಥರಿಗೆ ಜನ ಛಿಮಾರಿ ಹಾಕಿದ್ದರು. ಹೀಗಾಗಿ ಸರಕಾರವು ಅಸ್ಪೃಶ್ಯತೆಯ ವಿರುದ್ಧದ ತನ್ನ ಯೋಜನೆಗೆ ಮಗುವಿನ ಹೆಸರನ್ನೇ ಇಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.