ಬೆಂಗಳೂರು: ರಾಜ್ಯ ಸರ್ಕಾರದ ಯಶೋಗಾಥೆಯ ಪರಿಚಯವನ್ನು ಸನ್ಮಾನ್ಯ ರಾಜ್ಯಪಾಲರು ಇಂದು ವಿಧಾನ ಮಂಡಲದಲ್ಲಿ ತಮ್ಮ ಭಾಷಣದಲ್ಲಿ ಸಮರ್ಥವಾಗಿ ತೆರೆದಿಟ್ಟಿದ್ದಲ್ಲದೇ, ರಾಜ್ಯದ ಮುಂದಿನ ಅಭಿವೃದ್ಧಿಯ ದಿಕ್ಸೂಚಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಗ್ರ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ಆರೋಗ್ಯ, ಕೃಷಿ, ಶಿಕ್ಷಣ, ಮೂಲಭೂತ ಸೌಲಭ್ಯ ಈ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಈ ಭಾಷಣದಿಂದ ಸಾಬೀತಾಗಿದೆ. ಇದರ ಫಲಶ್ರುತಿ ಮತ್ತು ಪ್ರಯೋಜನವು ದೀರ್ಘಕಾಲದವರೆಗೆ ರಾಜ್ಯದ ಜನತೆಗೆ ಲಭ್ಯವಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ರೂ. 3500 ಕೋಟಿ ವೆಚ್ಚದಲ್ಲಿ 2300 ಕಿ.ಮೀ ರಾಜ್ಯ ಹೆದ್ದಾರಿಯ ಪುನರ್ ನಿರ್ಮಾಣ, ಶಿವಮೊಗ್ಗ, ವಿಜಯಪುರ, ಬಳ್ಳಾರಿ, ಹಾಸನ, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ, ಕೋವಿಡ್ ನಿಯಂತ್ರಣಕ್ಕೆ ದಾಖಲೆಯ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಂಡಿರುವುದು, ಉಚಿತವಾಗಿ ವ್ಯಾಪಕ ಲಸಿಕೆಗಳನ್ನು ವಿತರಿಸಿರುವುದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಲವು ಅಮೃತ ಯೋಜನೆಗಳನ್ನು ಜಾರಿಗೊಳಿಸಿರುವುದು, ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸಿರುವುದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವುದು.. ಮುಂತಾದ ಹಲವು ಜನಪರ ಕ್ರಮಗಳ ಮೇಲೆ ರಾಜ್ಯಪಾಲರ ಇಂದಿನ ಭಾಷಣವು ಪಕ್ಷಿನೋಟವನ್ನು ಬೀರಿದೆ ಎಂದು ಸಿ.ಸಿ.ಪಾಟೀಲರು ಸಮರ್ಥಿಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಬಲಪಡಿಸುವ ಮತ್ತು ರೈತರಿಗೆ ವಿವಿಧ ಯೋಜನೆಗಳ ಮೂಲಕ ದೀರ್ಘಕಾಲಿಕ ಲಾಭ ದೊರೆಯುವಂತಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಹಮ್ಮಿಕೊಂಡಿರುವುದನ್ನು ರಾಜ್ಯದ ಜನತೆ ಗಮನಿಸುತ್ತಾರೆ ಎಂದು ವಿಶ್ವಾ್ಸ ವ್ಯಕ್ತಪಡಿಸಿದ ಸಿ.ಸಿ.ಪಾಟೀಲರು, ಸರ್ಕಾರದ ಈ ಉದ್ದೇಶಗಳು ಸಂಪೂರ್ಣ ಸಫಲವಾಗಬೇಕಾದರೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಯೋಜನೆಯ ಫಲಶ್ರುತಿಯನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವಂತಹ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕು ಎಂದು ಪ್ರತಿಕ್ರಿಯಿಸಿದರು.
ನಾಡಿನಲ್ಲಿ ಹೊಸ ಅಭಿವೃದ್ಧಿ ಪರ್ವವನ್ನು ಪ್ರಾರಂಭಿಸಿ ಈಗಾಗಲೇ ಸುಮಾರು 7 ತಿಂಗಳುಗಳ ಕಾಲ ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಸಿ.ಸಿ.ಪಾಟೀಲರು ಈ ಸಂದರ್ಭದಲ್ಲಿ ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.