ಬೆಂಗಳೂರು: ಬಡತನ ಹೋಗಲಾಡಿಸಲು ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ ಹಾಗೂ ಅಮೆಜಾನ್ ನೊಂದಿಗೆ ಇಂದು ನಡೆದ ಒಡಂಬಡಿಕೆಗೆ ಸಹಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಸ್ಥಿತಿಯಲ್ಲಿ ಬಡತನ ನಮ್ಮ ಬಹು ದೊಡ್ಡ ಶತ್ರು. ಗ್ರಾಮೀಣ ಜನರನ್ನು ಮೇಲೆತ್ತುವುದು ಮಾತ್ರವಲ್ಲ, ಬಡತನವನ್ನು ನಾವು ಸೋಲಿಸಬೇಕಿದೆ. ಬಡಜನರಿಗೆ ಎಲ್ಲಾ ರೀತಿಯ ನೆರವಿನ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಸಬಲರನ್ನಾಗಿಸಬೇಕಿದೆ ಎಂದರು. ಸಾಮರ್ಥ್ಯ ಮತ್ತು ವ್ಯಾಪಕತೆಯನ್ನು ಹೊಂದಿರುವ ಅಮೆಜಾನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವೇ ಬಹು ದೊಡ್ಡ ಮಧ್ಯಸ್ಥಿಕೆಯಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಂಸ್ಕೃತಿಯ ವಿನಿಮಯ:
ಈ ಒಪ್ಪಂದದಿಂದ ಬ್ರಾಂಡಿಂಗ್ ಹಾಗೂ ಉತ್ಪನ್ನಗಳ ಸಂಸ್ಕೃತಿಯ ವಿನಿಮಯ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಪರಿವರ್ತನೆಯನ್ನು ನಾವು ಉಸಿರಾಗಿಸಿಕೊಳ್ಳಬೇಕು. ಉತ್ತಮ ಹಾಗೂ ಸುಸ್ಥಿರ ಮಾರುಕಟ್ಟೆಯೊಂದಿಗೆ ಕೌಶಲ್ಯ, ಅರ್ಹತೆ ಹಾಗೂ ಛಲವನ್ನು ಹೊಂದಿರುವ ಗ್ರಾಮೀಣ ಮಹಿಳೆಯರಿಗೆ ಉತ್ತಮವಾದ ಕಾರ್ಯವಿಧಾನದ ಅಗತ್ಯವಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಂಜೀವಿನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಇದರ ಯಶೋಗಾಥೆಯ ಮುಖಾಂತರ ಇತರೆ ಸಣ್ಣ ಉದ್ಯಮ ಹಾಗೂ ಚಟುವಟಿಕೆಗಳಿಗೆ ಇದೇ ಮಾದರಿಯನ್ನು ಅನುಸರಿಸಲು ಸಾಧ್ಯವಾಗಲಿದೆ ಎಂದರು.
ಕರ್ನಾಟಕ ರಾಜ್ಯವು ಪ್ರತಿಭೆ, ಉತ್ಪನ್ನ ಹಾಗೂ ಉದ್ಯಮಗಳಲ್ಲಿ ಪರಿಣಿತಿಯನ್ನು ಹೊಂದಿರುವ ರಾಜ್ಯ ವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಅಮೆಜಾನ್ ಸಂಸ್ಥೆ ಒಟ್ಟಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಬೇಕಿದೆ ಎಂದರು.
ಒಂದು ಜಿಲ್ಲೆ- ಒಂದು ಉತ್ಪನ್ನ
ಒಂದು ಜಿಲ್ಲೆ- ಒಂದು ಉತ್ಪನ್ನ ಕಾರ್ಯಕ್ರಮದಡಿ ಸ್ಥಳೀಯ ಪ್ರತಿಭೆ ಮತ್ತು ಉತ್ಪನ್ನಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದರು. ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಹಾಗೂ, ಮೊಳಕಾಳ್ಮೂರು ಸೀರೆಗಳು ಆಹಾರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ಆಧುನಿಕತೆಯ ಸ್ಪರ್ಶವನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೌಶಲ್ಯಾಭಿವೃದ್ಧಿ ಸಚಿವ ಡಾ: ಅಶ್ವತ್ಥ್ ನಾರಾಯಣ್ ಮಾತನಾಡಿ ಸಂಜೀವಿನಿ ಕಾರ್ಯಕ್ರಮದಡಿ ಮಾಡಿಕೊಂಡಿರುವ ಒಪ್ಪಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು.
ಅಮೆಜಾನ್ ಸಂಸ್ಥೆಯ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಮಾತನಾಡಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಬೆಂಬಲಿಸಲು ಅಮೆಜಾನ್ ಬದ್ಧವಾಗಿದೆ. ರಾಜ್ಯದಲ್ಲಿ ಮಹಿಳೆಯರು ತಯಾರಿಸುವ ವಿಶಿಷ್ಟ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಲು ಅಮೆಜಾನ್ ನೆರವು ನೀಡಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.