ಬೆಂಗಳೂರು: ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ 12 ಜಿಲ್ಲೆಗಳಲ್ಲಿ 3026 ಗ್ರಾಮ ಒನ್ ಕೇಂದ್ರಗಳಿಗೆ ಚಾಲನೆ ನೀಡಿದ್ದರು. ಈ ಗ್ರಾಮ ಒನ್ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿಯವರು ಇಂದು ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಒನ್ ಆಪರೇಟರುಗಳೊಂದಿಗೆ ಸಂವಾದ ನಡೆಸಿದರು.
ಸುಮಾರು ಒಂದು ಗಂಟೆಯ ಕಾಲ ಗ್ರಾಮ ಒನ್ ಆಪರೇಟರುಗಳ ಅನುಭವ, ಅವರ ಕಾರ್ಯನಿರ್ವಹಣೆ, ಎದುರಿಸುತ್ತಿರುವ ತೊಡಕುಗಳ ಕುರಿತು ಮಾಹಿತಿ ಪಡೆದರು. ಗ್ರಾಮ ಒನ್ ಸೇವಾ ಕೇಂದ್ರ, ಅಧಿಕಾರದ ಕೇಂದ್ರವಲ್ಲ ಎಂದು ಕಿವಿಮಾತು ಹೇಳಿ ಅವರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು.
ನಿರುದ್ಯೋಗ ನಿವಾರಣೆ:
ಈ ಸಂದರ್ಭದಲ್ಲಿ ಮಾತನಾಡಿದ ಹಲವು ಯುವಕರು, ನಿರುದ್ಯೋಗಿಯಾಗಿದ್ದ ತಮಗೆ ಸಂತ ಊರಿನಲ್ಲೇ ಗ್ರಾಮ ಒನ್ ಆಪರೇಟರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಗ್ರಾಮ ಒನ ಆಪರೇಟರುಗಳಾದ ಹಾವೇರಿಯ ಸಂಜೀವ ಕನವಳ್ಳಿ ಮತ್ತು ಬಳ್ಳಾರಿ ಜಿಲ್ಲೆಯ ಸುರೇಶ ಅವರು ವಿಕಲಚೇತನರು. ಈ ಯೋಜನೆಯಿಂದ ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಕಚೇರಿಗಳ ಕೆಲಸಗಳಿಗೆ ಓಡಾಡುವುದು ತಪ್ಪಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೂ ತೆರೆದಿರುವುದರಿಂದ ತಮ್ಮ ಕೆಲಸಕ್ಕೆ ತೆರಳುವ ಮುನ್ನ ಅಥವಾ ಕೆಲಸ ಮುಗಿಸಿ ಹಿಂದಿರುಗಿದ ನಂತರವೂ ಅರ್ಜಿ ಸಲ್ಲಿಸಲು ಸಾಧ್ಯವಾಗುವುದರಿಂದ, ಗ್ರಾಮಸ್ಥರಿಗೆ ಅನುಕೂಲವಾಗಿದೆ ಎನ್ನುವ ಅನುಭವವನ್ನು ಬೆಳಗಾವಿಯ ಬಸವರಾಜ ಪುಜಾರಿ ಮತ್ತಿತರರು ತೆರೆದಿಟ್ಟರು.
ತುಮಕೂರು ಜಿಲ್ಲೆಯ ಯುವತಿಯೊಬ್ಬರು ಮಾತನಾಡಿ, ನಮ್ಮ ಗ್ರಾಮದಲ್ಲಿ ಮಧ್ಯವರ್ತಿಗಳ ಮೇಲೆ ಜನ ಹೆಚ್ಚಾಗಿ ಅವಲಂಬಿಸಿದ್ದರು. ಈಗ ನೇರವಾಗಿ ತಮ್ಮ ಗ್ರಾಮದಲ್ಲೇ ಅರ್ಜಿ ಸಲ್ಲಿಸಲು, ಸೌಲಭ್ಯ ಪಡೆಯಲು ಅವರಿಗೆ ಅನುಕೂಲವಾಗಿದೆ. ಎಳೆ ಮಕ್ಕಳ ತಾಯಂದಿರು ತಮ್ಮ ಅನುಕೂಲವಾದ ಸಮಯದಲ್ಲಿ ಭೇಟಿ ನೀಡಿ ಗ್ರಾಮ ಒನ್ ಸೇವೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಸರ್ಕಾರದ ಸೇವೆಗಳನ್ನು ಪಡೆಯಲು ಜನರು ನಡೆಸುತ್ತಿದ್ದ ಓಡಾಟ, ವಿಳಂಬವನ್ನು ಹತ್ತಿರದಿಂದ ನೋಡಿದ್ದೇನೆ. ಗ್ರಾಮ ಒನ್ ಯೋಜನೆ ಈ ಸಮಸ್ಯೆಗೆ ಉತ್ತಮ ಪರಿಹಾರ ಒದಗಿಸಿದೆ ಎನ್ನುವ ಉಡುಪಿ ಜಿಲ್ಲೆಯ ಶ್ರೀನಿವಾಸ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ. ಈಗ ಗ್ರಾಮ ಒನ್ ಆಪರೇಟರ್.
ಬೀದರ್ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಗ್ರಾಮ ಒನ್ ಫ್ರಾಂಚೈಸಿ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ತಮ್ಮ ಕಾರ್ಯನಿರ್ವಹಣೆಯಲ್ಲಿ ಸರ್ವರ್ ಸಮಸ್ಯೆ, ಮತ್ತು ಇತರ ಕೆಲವು ತೊಡಕುಗಳ ಕುರಿತು ಆಪರೇಟರುಗಳು ಮುಖ್ಯಮಂತ್ರಿಗಳ ಗಮನ ಸೆಳೆದರು. ಇವುಗಳನ್ನು ಕೂಡಲೇ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಮುಖ್ಯಮಂತ್ರಿಗಳು ನಿಮ್ಮ ಸೇವೆಯ ಮೇಲೆ ಈ ಯೋಜನೆಯ ಯಶಸ್ಸು, ಅಪಯಶಸ್ಸು ನಿಂತಿದೆ. ನಿಮ್ಮ ಮೇಲೆ ವಿಶ್ವಾಸವಿದೆ. ಅದನ್ನು ಉಳಿಸಿಕೊಂಡು ಹೋಗಿ ಎಂದು ಹುರಿದುಂಬಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಗ್ರಾಮ ಒನ್ ಯೋಜನೆ ನಿರ್ದೇಶಕಿ ದೀಪ್ತಿ ಆದಿತ್ಯ ಕಾನಡೆ ಮತ್ತು ಇತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.