ಬೆಂಗಳೂರು : ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಪಡೆಯುವುದು ನಿಶ್ಚಿತ. ಸಮಗ್ರ ಅಭಿವೃದ್ಧಿಯನ್ನು ಗಮನಿಸಿ ಬೆಂಗಳೂರಿನ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮುಖ್ಯಮಂತ್ರಿಗಳಾಗಿ ಆರು ತಿಂಗಳ ಕಾಲ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಅದ ನಳಿನ್ಕುಮಾರ್ ಕಟೀಲ್ ಅವರು ಇಂದು ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅಭಿನಂದಿಸಿದರು. ಈ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಿದ್ದರು.
ಪ್ರವಾಹ ಬಂದಾಗ ಎರಡು ಪಟ್ಟು ಬೆಳೆ ಪರಿಹಾರವನ್ನು 14 ಲಕ್ಷ ರೈತರಿಗೆ ನೀಡಿದ್ದೇವೆ. ಮಾಸಾಶನವನ್ನು ಹೆಚ್ಚಿಸಿದ್ದು 58 ಲಕ್ಷ ಕುಟುಂಬಗಳಿಗೆ ಇದು ತಲುಪುತ್ತಿದೆ. ಕೋವಿಡ್ನಿಂದ ಮೃತರ ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. ಪಡಿತರ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. 5 ಲಕ್ಷ ಮನೆಗಳನ್ನು ರಾಜ್ಯ ಸರಕಾರ ನೀಡಿದೆ. 6.5 ಮನೆಗಳನ್ನು ಕೇಂದ್ರ ಸರಕಾರ ನೀಡುತ್ತಿದೆ ಎಂದು ತಿಳಿಸಿದರು.
ನಗರ- ಗ್ರಾಮೀಣ ಎಂಬ ಭೇದ ಇಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪಂದಿಸಲಾಗಿದೆ. 750 ಅಂಗನವಾಡಿಗೆ ತಲಾ 1 ಲಕ್ಷ ರೂಪಾಯಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ನಿಮ್ಮ ಸರಕಾರ ಕೆಲಸ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7,500 ಕೋಟಿ ರೂಪಾಯಿ ನೀಡಲಾಗಿದೆ. 75 ಕೆರೆ, 75 ಕೊಳಗೇರಿಗಳ ಅಭಿವೃದ್ಧಿ ನಡೆಯುತ್ತಿದೆ. ಎಂಥ ಸವಾಲಾದರೂ ಎದುರಿಸುವ ಶಕ್ತಿ ನಮ್ಮ ಸರಕಾರಕ್ಕಿದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವಾಗಿ ಮಾರ್ಪಡಿಸಲಾಗುವುದು ಎಂದರು.
ರಾಜಕೀಯ ಪಕ್ಷವೊಂದು ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿದರೆ ಅದು ದೊಡ್ಡ ಪರಿವಾರ ಎನಿಸುತ್ತದೆ. ಅಂಥ ದೊಡ್ಡ ಪರಿವಾರದ ಸದಸ್ಯನಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರೀತಿ- ವಿಶ್ವಾಸದಿಂದ ಕಾರ್ಯ ನಿರ್ವಹಣೆ ಅನಿವಾರ್ಯ. ಇಂಥ ಸಂಬಂಧ ಇಲ್ಲದೆ ಸಾಧನೆ ಮಾಡಲು ಅಸಾಧ್ಯ, ರಾಜಕೀಯ ಪಕ್ಷಗಳು ದೇಶಕ್ಕಾಗಿ ದುಡಿಯಬೇಕು. ಅದು ಪ್ರಜಾಪ್ರಭುತ್ವವನ್ನು ಉಳಿಸಬಲ್ಲದು ಎಂದು ಅವರು ಹೇಳಿದರು.
ಜನಸಂಘದ ದಿನಗಳಿಂದ ರಾಜಕೀಯ ಪ್ರಜ್ಞೆ ಬೆಳೆಸಲು ಪಕ್ಷ ಶ್ರಮಿಸಿದೆ ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಉಳಿವಿಗೆ ನಮ್ಮ ಪಕ್ಷ ಶ್ರಮಿಸುತ್ತ ಬಂದಿದೆ. ಸೇವಾ ಮನೋಭಾವದಿಂದ ನಮ್ಮ ಪಕ್ಷ ಕೆಲಸ ನಿರ್ವಹಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಎಲ್ಲವೂ ವ್ಯಾವಹಾರಿಕವಾಗಿರುತ್ತದೆ ಎಂದು ನುಡಿದರು.
ದೇಶ ಕಟ್ಟುವ ಕಾರ್ಯದ ದೊಡ್ಡ ಜವಾಬ್ದಾರಿ ನನ್ನ ಮುಂದಿದೆ. ಆರು ತಿಂಗಳ ನಮ್ಮ ಸರಕಾರದ ರಿಪೋರ್ಟ್ ಕಾರ್ಡ್ ಕೊಡಲು ಎರಡು ಪುಸ್ತಕ ಬಿಡುಗಡೆ ಮಾಡಿದ್ದೇವೆ. ನಮ್ಮ ಸಾಧನೆಗಳು, ನಿರ್ಣಯಗಳು, ಆರ್ಥಿಕ ಅಭಿವೃದ್ಧಿ, ಶಿಕ್ಷಣ -ಆರೋಗ್ಯ ಕ್ಷೇತ್ರದ ಸಾಧನೆಗಳನ್ನು ಇದರಲ್ಲಿ ತಿಳಿಸಲಾಗಿದೆ. ಈ ಮಾಹಿತಿಗಳನ್ನು ಜನರಿಗೆ ತಲುಪಿಸಿ ಎಂದು ಮನವಿ ಮಾಡಿದರು.
ಕೋವಿಡ್- ಪ್ರವಾಹದ ನಡುವೆ ಆರ್ಥಿಕ ಹಿಂಜರಿತ ಇತ್ತು. ಆದರೂ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಕ್ಕೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
ಮತ್ತೊಮ್ಮೆ ಅಧಿಕಾರ- ಕಟೀಲ್ ವಿಶ್ವಾಸ
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಅತ್ಯುತ್ತಮ ಸಾಧನೆ, ಬೊಮ್ಮಾಯಿ ಅವರ ಉತ್ತಮ ಯೋಜನೆಗಳ ಮೂಲಕ ಪಕ್ಷವು ಮತ್ತೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಶಾಸಕರ ಸ್ಥಾನಗಳ ಜೊತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಅದ ನಳಿನ್ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಬೊಮ್ಮಾಯಿ ಅವರು ನವಕರ್ನಾಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರು ಸಮರ್ಥ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.
ದೀನದಯಾಳ್ ಉಪಾಧ್ಯಾಯರ ಕನಸನ್ನು ನನಸಾಗಿಸುವತ್ತ ಬೊಮ್ಮಾಯಿ ಅವರು ಮುನ್ನಡೆದಿದ್ದಾರೆ. ಕೋವಿಡ್ ಪರಿಹಾರ, ಮನೆಗಳ ನಿರ್ಮಾಣಕ್ಕೆ ಆದ್ಯತೆ, ಬೆಂಗಳೂರು ನಗರಕ್ಕೆ ಆರು ಸಾವಿರ ಕೋಟಿ ಅನುದಾನ ನೀಡಲಾಗಿದೆ. ಗೋಹತ್ಯಾ ನಿಷೇಧ ಮಾಡಲಾಗಿದೆ. ಮತಾಂತರ ನಿಯಂತ್ರಣ ಕಾಯ್ದೆಯನ್ನೂ ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧರಾಗಿದ್ದಾರೆ. ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತ ಮಾಡಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ವಿವಿಧ ಪಾಲಿಕೆಗಳ ಚುನಾವಣೆಯಲ್ಲೂ ಪಕ್ಷ ಗೆದ್ದಿದೆ ಎಂದರು.
ಬಿಜೆಪಿ ಬೆಳವಣಿಗೆಯಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಕಾಂಗ್ರೆಸ್ನದು ಪಾದಯಾತ್ರೆ ಅಲ್ಲ. ಅದು ಅಂತ್ಯಯಾತ್ರೆ ಎಂದು ಅವರು ನುಡಿದರು. ಸರಕಾರ ಮತ್ತು ಪಕ್ಷ ಎರಡು ಚಕ್ರಗಳಿದ್ದಂತೆ. ಇವೆರಡು ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿವೆ. ಬೊಮ್ಮಾಯಿ ಅವರು ತಮ್ಮ ಕೆಲಸಗಳ ಮೂಲಕ ವಿಶ್ವಾಸ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯರು ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮರಸ್ಯದ ಸಂಕೋಲೆಯನ್ನು ಪಕ್ಷ ಮತ್ತು ಜನತೆಯ ಜೊತೆ ಬೆಸೆದಿದ್ದಾರೆ ಎಂದರು.
ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ಅವರು ಮಾತನಾಡಿ, ನಮ್ಮ ಜನಪ್ರಿಯ ಮುಖ್ಯಮಂತ್ರಿಗಳ ಹುಟ್ಟುಹಬ್ಬ ಮತ್ತು ಆರು ತಿಂಗಳಲ್ಲಿ ಉತ್ತಮ ಸರಕಾರ ನೀಡಿದ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಸಿಎಂ ಅವರು ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಬೆಂಗಳೂರು ಮತ್ತು ರಾಜ್ಯಕ್ಕೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಸಚಿವರಾದ ಸೋಮಶೇಖರ್, ಆನಂದ್ ಸಿಂಗ್, ಮುನಿರತ್ನ, ರಾಜ್ಯದ ಸಚಿವರು, ಪಕ್ಷದ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.