ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ನಡೆಯುತ್ತಿರುವ ರಾಜಕೀಯ ಮೇಲಾಟದ ಫಲ ಈ ಪಾದಯಾತ್ರೆ. ಅವರಿಗೆ ರಾಜ್ಯದ ಜನರ ಕುರಿತು ಕಾಳಜಿಯೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
“ಕಾಂಗ್ರೆಸ್ ನಾಯಕರ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಎನ್ನುವುದೇ ಅರ್ಥವಾಗುವದಿಲ್ಲ. ಇದು ಕೇವಲ ರಾಜಕೀಯಕ್ಕಾಗಿ, ಜೊತೆಗೆ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಬ್ಬರ ನಡುವೆ ನಡೆಯುತ್ತಿರುವ ನಾಯಕತ್ವದ ಮೇಲಾಟದ ಪ್ರತಿಫಲ. ಕಾಂಗ್ರೆಸ್ ಒಳಜಗಳದಿಂದಾಗಿ ಮೇಕೆದಾಟು ಯೋಜನೆಗೆ ಅಡ್ಡಿಯಾಗುವ ಸಾಧ್ಯತೆ ಸಾಕಷ್ಟಿದೆ.
ಮೇಕೆದಾಟು ಯೋಜನೆ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿ ಇರುವಾಗ ಇಂತಹ ಪ್ರಹಸನ ಮಾಡುವ ಅಗತ್ಯ ಇತ್ತೇ? ಕಾಂಗ್ರೆಸ್ ಗೆ ರಾಜ್ಯದ ಹಿತಾಸಕ್ತಿ ಪ್ರಾಮುಖ್ಯವಲ್ಲ ಎನ್ನುವುದು ರಾಜ್ಯದ ಜನತೆಗೆ ಅರ್ಥವಾಗುತ್ತದೆ.
ನಿಮ್ಮದೇ ಮಿತ್ರಪಕ್ಷ ತಮಿಳುನಾಡಿನಲ್ಲಿ ಇದೆ. ಅವರು ಹಾಕಿರುವ ಆಕ್ಷೇಪಣೆಯನ್ನು ಹಿಂಪಡೆಯುವಂತೆ ಮನವೊಲಿಸಿ ಅದನ್ನು ಬಿಟ್ಟು, ನಿಮ್ಮ ಪಾದಯಾತ್ರೆಯ ಉದ್ದಕ್ಕೂ ನ್ಯಾಯಾಲಯಕ್ಕೆ ತಪ್ಪು ಸಂದೇಶ ನೀಡುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದೀರಿ. ಈ ಯೋಜನೆಯಿಂದ ರೈತರಿಗೂ ನೀರು ನೀಡುತ್ತೇವೆ ಎನ್ನುತ್ತ ಯೋಜನೆ ಅನುಷ್ಠಾನ ಮಾಡುವ ನಮ್ಮ ಪ್ರಯತ್ನಕ್ಕೆ ಮುಳುವಾಗಿದ್ದೀರಿ.
ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ನೀವು ಮಾಡಿದ ಪಾದಯಾತ್ರೆಯಿಂದ ಏನು ಸಾಧಿಸಿದ್ದೀರಿ? ಕೋವಿಡ್ ಪ್ರಕರಣ ಹೆಚ್ಚಳವಾಗಿದ್ದೇ ಸಾಧನೆ. ನಿಮ್ಮ ನಾಯಕರಾದ ಪ್ರಿಯಾಂಕ ಖರ್ಗೆ, ರೇವಣ್ಣ, ಸಿ ಎಂ ಇಬ್ರಾಹಿಂ ಸೇರಿದಂತೆ ಅನೇಕರು ಸೋಂಕಿಗೆ ತುತ್ತಾಗಿದ್ದಾರೆ. ಟೆಸ್ಟ್ ಮಾಡಿಸಿದರೆ ಪಾದಯಾತ್ರೆಯಲ್ಲಿ ಭಾಗವಹಿಸಿದವರು ಮತ್ತು ಅವರ ಕುಟುಂಬದ ಸುಮಾರು 6 ಸಾವಿರ ಜನರಿಗೆ ಕೊರೋನಾ ಸೋಂಕು ಬಂದಿರಬಹುದು. ಯಾರೂ ಸಹ ಟೆಸ್ಟ್ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಇನ್ನಷ್ಟು ಜನರಿಗೆ ಸೋಂಕು ಹರಡುತ್ತದೆ. ಜನರ ಬಗ್ಗೆ ಕಾಳಜಿಯೇ ಇಲ್ಲ. ನಿಮ್ಮ ಏರ್ ಕಂಡಿಷನ್ ಯಾತ್ರೆ ಮತ್ತೆ ಮುಂದುವರಿಸಬೇಡಿ” ಎಂದರು.
“ಯಾವುದೇ ಒಂದು ಅಂತರ್ ರಾಜ್ಯ ನದಿ ನೀರಿನ ವಿವಾದ ರಾಜಕೀಯ ಮೇಲಾಟದಿಂದ ಬಗೆಹರಿದ ಉದಾಹರಣೆ ಇಲ್ಲ. ಅದಕ್ಕೊಂದು ವ್ಯವಸ್ಥೆ, ನೀತಿ ನಿಯಮ ಇದೆ. ನೀತಿಯೇ ಇಲ್ಲದ ಕಾಂಗ್ರೆಸ್ ನ ನಾಯಕತ್ವದ ಮೇಲಾಟಕ್ಕಾಗಿ ನಡೆದ ಯಾತ್ರೆಯಿಂದ ಏನೇನೂ ಪ್ರಯೊಜನ ಇಲ್ಲ. ನಿಮ್ಮದು ಪಾದಯಾತ್ರೆ ಅಲ್ಲ, ಕೊರೋನಾ ಹರಡುವ ಜಾತ್ರೆ ಅಷ್ಟೇ” ಎಂದು ಅಶೋಕ್ ಲೇವಡಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.