ಬೆಂಗಳೂರು: ಸಿದ್ಧಿ ಜನಾಂಗದ ಯುವಕರಿಗೆ ಕ್ರೀಡಾ ತರಬೇತಿಯನ್ನು ನೀಡಿ ಅವರನ್ನು ಭಾರತದ ಕ್ರೀಡಾ ಭವಿಷ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕಾರವಾರ ಸಮೀಪದ ಗುಂಜಾವತಿ ಗ್ರಾಮದ ದಸ್ತಗೀರ್ ಅಬ್ದುಲ್ ಸಿದ್ದಿ ಹತ್ತನೇ ತರಗತಿ ಓದುತ್ತಿದ್ದಾಗಲೇ ಸೇನೆಗೆ ಸೇರುವ ಕನಸು ಕಂಡಿದ್ದರು. ಸೇನಾ ಪಡೆಗಳಿಗೆ ಆಯ್ಕೆಯಾಗಲು ವೇಗವಾಗಿ ಓಡಬೇಕು ಎಂದು ಅವರ ಹಳ್ಳಿಯಲ್ಲಿ ಯಾರೋ ಹೇಳಿದ್ದರು.
ಅವರ ಹಳ್ಳಿಯ ಬಳಿ ಸರಿಯಾದ ಅಥ್ಲೆಟಿಕ್ ಟ್ರ್ಯಾಕ್ ಅಥವಾ ಮೈದಾನವಿಲ್ಲದ ಕಾರಣ, ಅವರು ತಮ್ಮ ಮನೆಯ ಸಮೀಪವಿರುವ ಕೆಲವು ಪೊದೆಗಳನ್ನು ಕಡಿದು ಪ್ರದೇಶವನ್ನು ಸಮತಟ್ಟು ಮಾಡಿ ಅಭ್ಯಾಸವನ್ನು ಪ್ರಾರಂಭಿಸಿದರು. ಬಳಿಕ ಕಾರವಾರದಲ್ಲಿ ಪ್ರಥಮ ಪಿಯುಗೆ ಸೇರಿದಾಗಲೇ ಅಥ್ಲೆಟಿಕ್ ಮೈದಾನಗಳನ್ನು ಅವರು ಮೊದಲು ನೋಡಿದ್ದು, ಅಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದನ್ನು ಕಂಡಿದ್ದು.
ದಸ್ತಗೀರ್ ಅವರು ಸಿದ್ದಿ ಸಮುದಾಯದವರು, ಮೂಲತಃ ಆಗ್ನೇಯ ಆಫ್ರಿಕಾದವರು ಮತ್ತು ಶತಮಾನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ನೆಲೆಸಿದ್ದಾರೆ. ಇಲ್ಲಿನ ಅನೇಕ ಯುವಕರು ತಮ್ಮ ಕುಟುಂಬದಲ್ಲಿ ಶಾಲೆಗೆ ಹೋಗುವ ಮೊದಲಿಗರಾಗಿದ್ದಾರೆ, ಅವರ ಪೋಷಕರು ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದು ಶಿಕ್ಷಣವಿಲ್ಲ.
“ಕಾಲೇಜು ಸಮಯದ ನಂತರ, ತರಬೇತುದಾರ ಪ್ರಕಾಶ್ ರೇಣುಕಾ ಅವರು ಕೆಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕಾಲೇಜು ಮೈದಾನದಲ್ಲಿ ಓಡುವಂತೆ ಮಾಡುತ್ತಿದ್ದರು. ಸುಮಾರು ಒಂದು ತಿಂಗಳ ಕಾಲ, ನಾನು ಅಲ್ಲಿ ನಿಂತುಕೊಂಡು ಅವರ ತರಬೇತಿಯನ್ನು ನೋಡುತ್ತಿದ್ದೆ. ಒಂದು ದಿನ, ಅವರು ನನ್ನ ಬಳಿಗೆ ಬಂದು ನಾನು ಏಕೆ ಸುಮ್ಮನೆ ನಿಂತಿಕೊಂಡಿರುವೆ ಎಂದು ಕೇಳಿದರು. ನಾನು ಓಟದಲ್ಲಿ ಆಸಕ್ತಿ ಹೊಂದಿದ್ದೇನೆ ಎಂದು ಅವರ ಬಳಿ ಹೇಳಿದೆ, ನನ್ನ ಆಸಕ್ತಿ ನೋಡಿ ಅವರು ನನ್ನನ್ನು ತಂಡಕ್ಕೆ ಸೇರಿಸಿಕೊಂಡರು” ಎಂದು ಸಿದ್ಧಿ ಹೇಳುತ್ತಾರೆ.
ಬೆಂಗಳೂರಿನಲ್ಲಿ ಕ್ರೀಡೆಯಲ್ಲಿ ತರಬೇತಿ ಪಡೆಯಲಿರುವ ಸಿದ್ದಿ ಸಮುದಾಯದ 52 ಯುವಕರಲ್ಲಿ ದಸ್ತಗೀರ್ ಒಬ್ಬರು. ಮಂಗಳವಾರದಿಂದ ಆರಂಭವಾಗಲಿರುವ ತರಬೇತಿಯ ಹೊರತಾಗಿ ಅವರ ನಿತ್ಯದ ಶಿಕ್ಷಣವನ್ನು ಕೂಡ ಕ್ರೀಡಾ ಇಲಾಖೆ ನೋಡಿಕೊಳ್ಳಲಿದೆ.
ಪ್ರತಿಭಾವಂತ ಸಿದ್ದಿ ಹುಡುಗ ಹುಡುಗಿಯರನ್ನು ಗುರುತಿಸಲು ಇಲಾಖೆ ಆಯೋಜಿಸಿದ್ದ ಶಿಬಿರಕ್ಕೆ ಬಂದಿಳಿದಾಗ ದಸ್ತಗೀರ್ ಅವರು ಕ್ರೀಡಾ ವೇದಿಕೆಯನ್ನು ಹುಡುಕುತ್ತಿದ್ದರು, ಅವರು ಉತ್ತಮ ದೈಹಿಕ ಶಕ್ತಿಯನ್ನು ಹೊಂದಿದ್ದಾರೆ ಎಂಬುದು ಅವರನ್ನು ನೋಡಿದಾಗಲೇ ಗೊತ್ತಾಗುತ್ತದೆ. ಇಲಾಖೆಯು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 18 ವರ್ಷದೊಳಗಿನ 500 ಸಿದ್ದಿ ಸಮುದಾಯದ ಮಕ್ಕಳಿಗೆ 18 ವಿವಿಧ ಪರೀಕ್ಷೆಗಳನ್ನು ನಡೆಸಿದೆ.
ಅವರಲ್ಲಿ 100 ಮಂದಿಯನ್ನು ಆಯ್ಕೆ ಮಾಡಿ ನವೆಂಬರ್ನಲ್ಲಿ ಒಂದು ವಾರ ತರಬೇತಿ ನೀಡಲಾಗಿದೆ. ಅವರಲ್ಲಿ 52 ಮಂದಿಯನ್ನು ಬಾಕ್ಸಿಂಗ್, ಈಜು, ಅಥ್ಲೆಟಿಕ್ಸ್ ಮತ್ತು ಇತರ ಕ್ರೀಡೆಗಳಲ್ಲಿ ಹೆಚ್ಚಿನ ತರಬೇತಿಗಾಗಿ ತೆಗೆದುಕೊಳ್ಳಲಾಗಿದೆ. “ನಾನು 11.05 ಸೆಕೆಂಡ್ಗಳಲ್ಲಿ 100 ಮೀಟರ್ಗಳನ್ನು ಕ್ರಮಿಸುತ್ತೇನೆ ಮತ್ತು ಅದನ್ನು 10 ಸೆಕೆಂಡುಗಳಲ್ಲಿ ಕೆಳಗೆ ತರುವುದು ನನ್ನ ಗುರಿಯಾಗಿದೆ. ನಾನು ನನ್ನ ಕಾಲೇಜನ್ನು ಇಲ್ಲಿಗೆ ಬದಲಾಯಿಸುತ್ತೇನೆ, ನಾನು ತರಬೇತಿ ಪಡೆಯುತ್ತೇನೆ. ನಾನು ಮುಂದೊಂದು ದಿನ ಭಾರತವನ್ನು ಪ್ರತಿನಿಧಿಸುತ್ತೇನೆ,” ಸಿದ್ಧಿ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಆಯ್ಕೆಯಾದವರು ಬೆಂಗಳೂರಿನ ಚಿಕ್ಕಜಾಲ ಬಳಿಯ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ನೆಲೆಸಿದ್ದಾರೆ. ಅವರ ಶಕ್ತಿ ವೃದ್ಧಿಸಲು ಕ್ರೀಡಾ ಇಲಾಖೆ ವಿಶೇಷ ಡಯಟ್ ಆಯೋಜಿಸಿದೆ. “ಅವರಿಗೆ ಬೆಳಗಿನ ಉಪಾಹಾರದ ಜೊತೆಗೆ ಎರಡು ಮೊಟ್ಟೆ ಮತ್ತು ಎರಡು ಬಾಳೆಹಣ್ಣುಗಳನ್ನು ನೀಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ದಾಲ್, ಚಪಾತಿ, ಅನ್ನ, ಸಬ್ಜಿ ಮತ್ತು ಹಣ್ಣುಗಳು. ರಾತ್ರಿಯ ಊಟಕ್ಕೆ ಚಿಕನ್ ಮತ್ತು ಇತರ ಪೌಷ್ಟಿಕಾಂಶಯುಕ್ತ ಆಹಾರ. ನಾನು ನನ್ನ ಹಳ್ಳಿಯಲ್ಲಿದ್ದಾಗ, ನಾವು ಅಷ್ಟೇನೂ ತಿನ್ನುತ್ತಿರಲಿಲ್ಲ” ಎಂದು ಉಗ್ಗಿನಕೆರೆ ಗ್ರಾಮದ ಜೋಸೆಫ್ ಬಸ್ತ್ಯ ಸಿದ್ದಿ ಹೇಳುತ್ತಾರೆ. ಅವರ ಗಮನ ಬಾಕ್ಸಿಂಗ್ ಮೇಲೆ. ನನ್ನ ಕನಸನ್ನು ನನಸಾಗಿಸಲು ಬೆಂಗಳೂರಿನಲ್ಲಿ ಇಂತಹ ಸ್ಥಳ ಸಿಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಅವರು ಹೇಳುತ್ತಾರೆ.
15 ವರ್ಷದ ದಿನೇಶ್ ಶಂಕರ ಸಿದ್ದಿ ಕೆಲಪೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಹತ್ತರ ಹರೆಯದಲ್ಲಿ ಬೇಸಿಗೆ ರಜೆಯಲ್ಲಿ ಮನೆಯ ಸಮೀಪವೇ ಹರಿಯುವ ಬೇಡ್ತಿ ನದಿಯಲ್ಲಿ ಈಜುವುದನ್ನು ಕಲಿತರು. “ನಾನು ಈಜುವುದನ್ನು ಇಷ್ಟಪಡುತ್ತೇನೆ ಮತ್ತು 30 ಸೆಕೆಂಡುಗಳ ಕಾಲ ನನ್ನ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲೆ” ಎಂದು ಅವರು ಹೇಳುತ್ತಾರೆ.
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಹಿಂದುಳಿದ, ಗ್ರಾಮೀಣ ಪ್ರದೇಶದಲ್ಲಿನ ಸಿದ್ದಿಯರನ್ನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.