ಬೆಂಗಳೂರು: ಕೃಷಿ ಇಲಾಖೆಯಲ್ಲಿ ಗುಣಮಟ್ಟದ ಟಾರ್ಪಾಲಿನ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಗುಣಮಟ್ಟಕ್ಕಿಂತ ಕಳಪೆ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳನ್ನು ಮುಂದಿನ ಮೂರು ವರ್ಷಗಳ ಕಾಲ ಇಲಾಖೆಯಲ್ಲಿ ಭಾಗವಹಿಸುವಿಕೆಯಿಂದ ಅನರ್ಹಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕಾಗಿ ಎಚ್ಚರಿಸಿದ್ದಾರೆ.
ಪರವಾನಿಗೆಯನ್ನು ಹೊಂದಿರುವ ಟಾರ್ಪಲಿನ್ಗಳನ್ನೇ ಸ್ವೀಕರಿಸಲು ಹಾಗೂ ವಿತರಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿರುವ ಬಿ.ಸಿ.ಪಾಟೀಲ್, ಕೃಷಿ ಇಲಾಖೆಯಿಂದ ಒದಗಿಸಲಾಗಿದೆ ಎಂಬುದರ ಖಾತ್ರಿಯ ಜೊತೆಗೆ ತಯಾರಿಕ ಸಂಸ್ಥೆಯ ಹೆಸರು, ಬ್ಯಾಚ್ ಸಂಖ್ಯೆ ಮತ್ತು ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ CML ಸಂಖ್ಯೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟಾರ್ಪಾಲಿನ್ ಮೇಲೆ ಲೇಜರ್ ಪ್ರಿಂಟ್ ಅಥವಾ ಅಳಿಸಲಾರದ ಶಾಹಿಯಲ್ಲಿ ಮುದ್ರಿಸಿರುವುದನ್ನು ಖಾತರಿ ಪಡಿಸಿಕೊಂಡ ನಂತರವೇ ದಾಸ್ತಾನನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತಿದೆ. ಸರಬರಾಜು ಆದೇಶ ಪಡೆದ ಸಂಸ್ಥೆಗಳು, ಸರಬರಾಜು ಮಾಡಿದ ಟಾರ್ಪಾಲಿನ್ ಗಳಲ್ಲಿ ಜಿಲ್ಲೆಗೆ ಒಂದರಂತ ಮಾದರಿಯನ್ನು ತೆಗೆದು ಗುಣಮಟ್ಟದ ಪರೀಕ್ಷೆಗಾಗಿ CIPET ಸಂಸ್ಥೆಗೆ ಗುಣಮಟ್ಟ ಪರೀಕ್ಷೆಗಾಗಿ ಪರೀಕ್ಷಾ ಶುಲ್ಕವನ್ನು ಸರಬರಾಜುದಾರ ಸಂಸ್ಥೆಯೇ ಪಾವತಿಸುವ ಷರತ್ತಿನೊಂದಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ , ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆ ಮೀ X 6 ಮೀ ಅಳತೆಯ ಟಾರ್ಪಾಲಿನ್ ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ .50 ಮತ್ತು ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ .90 ರಷ್ಟು ಸಹಾಯ ಧನ ಒದಗಿಸಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸಲಾಗುತ್ತಿದೆ . ಐದು ಪದರುಗಳುಳ್ಳ , 250 ಜಿ.ಎಸ್ . ಎಂ ( GSM ) ತೂಕದ , ಕಪ್ಪು ಬಣ್ಣದ ಮಾನದಂಡಗಳಿಗೆ ಅನುಗುಣವಾಗಿರುವ 8 ಮೀ X 6 ಮೀ ಅಳತೆಯ HDPE ಟಾರ್ಪಾಲಿನ್ಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.2021-22 ನೇ ಸಾಲಿನಲ್ಲಿ 239606 ಟಾರ್ಪಾಲಿನ್ ಗಳನ್ನು ವಿತರಿಸಲು ಜಿಲ್ಲಾವಾರು ಕ್ರಿಯಾ ಯೋಜನೆ ರೂಪಿಸಿ ನೀಡಲಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಭಾರತೀಯ ಮಾಪನ ಸಂಸ್ಥೆಯಿಂದ ಪರವಾನಿಗೆ ಹೊಂದಿರುವ ಸಂಸ್ಥೆಗಳು ಅಥವಾ ಅವರಿಂದ ಒಡಂಬಡಿಕೆ ಪಡೆದ ಸಂಸ್ಥೆಗಳನ್ನು RFP ಮುಖಾಂತರ ಅರ್ಜಿ ಕರೆದು , ಸಂಸ್ಥೆಗಳು ಹೊಂದಿರುವ ಪರವಾನಿಗೆಯನ್ನು ತಾಂತ್ರಿಕವಾಗಿ ಮೌಲ್ಯಮಾಪನಗೊಳಿಸಿ ಅರ್ಹಗೊಂಡ ಸಂಸ್ಥೆಗಳನ್ನು ಎಂಪಾನೆಲ್ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಪರವಾನಿಗೆಯನ್ನು ಹೊಂದಿರುವ 24 ಸಂಸ್ಥೆಗಳನ್ನು ಎಂಪಾನೆಲ್ ಗೊಳಿಸಲಾಗಿರುತ್ತದೆ .ಜಿಲ್ಲೆಗಳಿಗೆ ನೀಡಿದ ಕ್ರಿಯಾ ಯೋಜನೆ ಪ್ರಕಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಎಂದಾನೆಲ್ ಮಾಡಿದ ಯಾವುದಾದರೂ ಸಂಸ್ಥೆಗಳಿಗೆ ಟಾರ್ಪಾಲಿನ್ ಸರಬರಾಜು ಆದೇಶ ನೀಡುವ ಮುನ್ನ ಮತ್ತೊಮ್ಮೆ ಪರವಾನಿಗೆಯನ್ನು ಹೊಂದಿರುವ ಬಗ್ಗೆ ಮತ್ತು ಪರವಾನಿಗೆಯ ಸಿಂದುತ್ವವನ್ನು ಪರಿಶೀಲನೆ ಮಾಡಲು ಸೂಚಿಸಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.