ಬೆಂಗಳೂರು: ದೇಶ-ವಿದೇಶದಲ್ಲಿ ಜನಮನ್ನಣೆ ಗಳಿಸಿರುವ ಮೈಸೂರು ಸಿಲ್ಕ್ ಸೀರೆ ಹೆಚ್ಚಿನ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ನಮ್ಮ ಮೈಸೂರು ಸಿಲ್ಕ್ ಸೀರೆಗಳು ದೇಶ-ವಿದೇಶಗಳಲ್ಲಿ ಪ್ರಸಿದ್ದಿಯಾಗಿವೆ. ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದ್ದು,ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹಾಗಾಗಿ, ಸಚಿವ ಡಾ.ನಾರಾಯಣಗೌಡ ಅವರ ಸೂಚನೆಯಂತೆ ಕೆಎಸ್ಐಸಿಗೆ ಮತ್ತೆ 192 ವಿದ್ಯುತ್ ಕೈಮಗ್ಗಗಳನ್ನು ನೀಡಲಾಗಿದೆ. ಇದರಿಂದ ರೇಷ್ಮೆ ಸೀರೆ ಉತ್ಪಾದನೆಯಲ್ಲಿ ಬರೋಬ್ಬರಿ 50% ಹೆಚ್ಚಳವಾಗಲಿದೆ.
ಕೆಎಸ್ಐಸಿಯಲ್ಲಿ ಪ್ರಸ್ತುತ 249 ವಿದ್ಯುತ್ ಕೈಮಗ್ಗಗಳಿವೆ. 249 ಕೈಮಗ್ಗಗಳಿಂದ ಪ್ರತಿ ತಿಂಗಳು ಸಮಾರು 70 ಸಾವಿರ ಮೀಟರ್ ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ. ಈಗ ಕರ್ನಾಟಕ ರೇಷ್ಮೆ ಅಭಿವೃದ್ಧಿ ಕೇಂದ್ರಗಳಲ್ಲಿ ಹತ್ತಾರು ವರ್ಷಗಳ ಹಿಂದೆ ಖರೀದಿಸಿ ಬಳಕೆ ಮಾಡದೇ ಹಾಗೇ ಇಟ್ಟಿದ್ದ 192 ವಿದ್ಯುತ್ ಕೈಮಗ್ಗಗಳನ್ನು ದುರಸ್ತಿಗೊಳಿಸಿ ಅವುಗಳನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ ಹಸ್ತಾರಿಸಲು ರಾಜ್ಯಸರ್ಕಾರ ಒಪ್ಪಿಗೆ ನೀಡಿ ಆದೇಶಿಸಿದೆ. 192 ಕೈಮಗ್ಗಗಳನ್ನು ಮೈಸೂರು ಹಾಗೂ ಚನ್ನಪಟ್ಟಣದ ನೇಯ್ಗೆ ಘಟಕಗಳಿಗೆ ಹಂಚಿಕೆ ಮಾಡಲಾಗುತ್ತದೆ. 192 ಮಗ್ಗಗಳನ್ನು ಹೆಚ್ಚುವರಿಯಾಗಿ ನೀಡುವುದರಿಂದ ರೇಷ್ಮೆ ಸೀರೆ ಉತ್ಪಾದನೆಯಲ್ಲಿ 50% ಹೆಚ್ಚಳವಾಗಲಿದೆ. ಪ್ರತಿ ತಿಂಗಳು 1 ಲಕ್ಷ ಮೀಟರ್ಗಿಂತಲೂ ಹೆಚ್ಚು ರೇಷ್ಮೆ ಸೀರೆ ಉತ್ಪಾದನೆಯಾಗಲಿದೆ.
ಮೈಸೂರು ಸಿಲ್ಕ್ಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಉತ್ಪಾದನೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಲು ಕೆಎಸ್ಐಸಿಗೆ ಈಗಿರುವ 249 ಮಗ್ಗಗಳ ಜೊತೆಗೆ 192 ಮಗ್ಗಗಳನ್ನು ನೀಡಲಾಗುತ್ತಿದೆ. ಇದರಿಂದ ಸೀರೆಗಳ ಉತ್ಪಾದನೆಯೂ ಹೆಚ್ಚಾಗಲಿದ್ದು, ರೈತರ ರೇಷ್ಮೆಗೂಡಿಗೂ ಬೇಡಿಕೆ ಹೆಚ್ಚಾಗಲಿದೆ. ರೈತರ ಹಿತ ಕಾಯುವುದರ ಜೊತೆಗೆ ಸಂಸ್ಥೆಗೆ ಶಕ್ತಿ ತುಂಬಲು ಇದು ಅನುಕೂಲವಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.
ಸದ್ಯ, ಕೆಎಸ್ಐಸಿಯಲ್ಲಿರುವ ವಿದ್ಯುತ್ ಕೈಮಗ್ಗಗಳು, ಮೈಸೂರು ಹಳೇ ಮಿಲ್ – 159 ಮಗ್ಗ, ಮೈಸೂರು ಹೊಸ ಮಿಲ್ – 60 ಮಗ್ಗ, ಚನ್ನಪಟ್ಟಣ – 30 ಮಗ್ಗ ಇದೆ.
ಸಚಿವ ಡಾ. ನಾರಾಯಣಗೌಡ ಅವರು ಕಳೆದ ತಿಂಗಳು ಮೈಸೂರು ರೇಷ್ಮೆ ಸೀರೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ ಹೆಚ್ಚುವರಿ ವಿದ್ಯುತ್ ಮಗ್ಗಗಳ ಅವಶ್ಯಕತೆ ಬಗ್ಗೆ ಗಮನಕ್ಕೆ ಬಂದಿತ್ತು. ಹಾಗಾಗಿ ತಕ್ಷಣವೇ ವಿದ್ಯುತ್ ಚಾಲಿತ ಕೈಮಗ್ಗಗಳನ್ನು ದುರಸ್ಥಿಗೊಳಿಸಿ ಕೆಎಸ್ಐಸಿಗೆ ಹಸ್ತಾಂತರಿಸುವಂತೆ ಸಚಿವರು ಸೂಚಿಸಿದ್ದರು. ಸಚಿವರು ಸೂಚನೆ ನೀಡಿದ ಒಂದು ತಿಂಗಳೊಳಗೆ 192 ವಿದ್ಯುತ್ ಕೈಮಗ್ಗಗಳನ್ನು ಹಸ್ತಾಂತರಕ್ಕೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಹೆಚ್ಚುವರಿ ಕೈಮಗ್ಗಗಳನ್ನು ಅಳವಡಿಸಿದ ಬಳಿಕ ಮೈಸೂರ್ ನೇಯ್ಗೆ ಕಾರ್ಖಾನೆಯಲ್ಲಿ ಎರಡನೇ ಪಾಳಿ ಆರಂಭಕ್ಕೂ ಚಿಂತನೆ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.