ಬೆಂಗಳೂರು: ಹಿರಿಯ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಮತ್ತು ಪ್ರವಚನಕಾರರಾಗಿ ಪ್ರಸಿದ್ಧರಾಗಿದ್ದ ಪ್ರೊ. ಕೆ. ಎಸ್. ನಾರಾಯಣಾಚಾರ್ಯ ಅವರು ಇಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೆ. ಎಸ್. ನಾರಾಯಣಾಚಾರ್ಯ ಅವರು ಮೂಲತಃ ಬೆಂಗಳೂರು ಜಿಲ್ಲೆಯ ಕನಕಪುರದವರು. ಇವರು 1933ರ ಅಕ್ಟೋಬರ್ 30ರಂದು ಜನಿಸಿದರು.
ವೈದಿಕ ವಿದ್ವಾಂಸರ ಕುಟುಂಬದಲ್ಲಿ ಬೆಳೆದ ನಾರಾಯಣಾಚಾರ್ಯರು ಮೈಸೂರು ಮಹಾರಾಜಾ ಕಾಲೇಜಿನಿಂದ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಪ್ರಧಾನ ವಿಷಯಗಳಾಗಿಸಿಕೊಂಡು ಬಿ.ಎಸ್ಸಿ. ಪದವಿ ಪಡೆದರು. ಜೊತೆಗೆ ಸಾಹಿತ್ಯದಲ್ಲಿ ತಮ್ಮ ಆಸಕ್ತಿ ಕಂಡುಕೊಂಡು ಬಿ.ಎ. ಆನರ್ಸ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. “ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ” ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾರಾಯಣಾಚಾರ್ಯರು ಅಲ್ಲಿ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು.
ವೇದಪುರಾಣಗಳು, ವಿಶಿಷ್ಟಾದ್ವೈತ ತತ್ವಗಳನ್ನು ಬಹುತೇಕವಾಗಿ ಆದರಿಸಿರುವ ನಾರಾಯಾಣಾಚಾರ್ಯರ ಬರಹಗಳು ರಾಷ್ಟ್ರೀಯ ಚಿಂತನೆಗಳು, ಚಾಣಕ್ಯ, ಗಾಂಧೀ ಸುಭಾಷ್ ಚಂದ್ರಬೋಸ್, ಬೇಂದ್ರೆ ಮುಂತಾದವರ ಕುರಿತು ಸಹಾ ಇಣುಕಿದೆ. ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ತಮಿಳು ಭಾಷೆಗಳ ವಿದ್ವಾಂಸರಾದ ಆಚಾರ್ಯರು ಸುಮಾರು 180 ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಕೃತಿ ಧಾರಾವಾಹಿಗಳು ಮೂಡಿವೆ. ಅವರು ಉಪನ್ಯಾಸಗಳಿಗೂ ಹೆಸರಾಗಿದ್ದಾರೆ.
ಇವರ ನಿಧನಕ್ಕೆ ಆರೆಸ್ಸೆಸ್ ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.
“ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ-ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ. ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನಕ್ಕೆ ತೀವ್ರ ಸಂತಾಪಗಳು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.