ಬೆಂಗಳೂರು: ಹಣ ಬಲ, ತೋಳ ಬಲ, ಅಧಿಕಾರ ಬಲ, ಜಾತಿ ವಿಷಬೀಜ ಬಿತ್ತಿ ಚುನಾವಣೆಯನ್ನು ಗೆಲ್ಲುತ್ತಿದ್ದ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿದೆ. ಇನ್ನೊಂದೆಡೆ ನರೇಂದ್ರ ಮೋದಿಯವರ ನೇತೃತ್ವದ ಸರಕಾರವು ದೇಶವನ್ನು ಇನ್ನು ಮುಂದೆಯೂ ಆಳಲಿದೆ. ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಧಾರವಾಡದಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ಚುನಾವಣೆ ನೆಪಮಾತ್ರಕ್ಕೆ ಆಗಿದ್ದರೂ ನಾವು ಬಹುಮತ ಪಡೆಯಬೇಕಿದೆ. ಅದಕ್ಕಾಗಿ ಹೆಚ್ಚು ಸೀಟು ಗೆಲ್ಲುವುದು ಅನಿವಾರ್ಯ ಎಂದು ತಿಳಿಸಿದರು.
ಬಿಜೆಪಿಗೆ ಮತ ನೀಡಲು ಹಿಂದೆ ಮುಂದೆ ನೋಡುವವರನ್ನು ನಮ್ಮ ಅಭ್ಯರ್ಥಿಗೇ ಮತ ಕೊಡಿಸಲು ಮುಂದಾಗಿ ಎಂದು ಮನವಿ ಮಾಡಿದರು.
ಇಡೀ ಪ್ರಪಂಚ ನರೇಂದ್ರ ಮೋದಿಯವರತ್ತ ನೋಡಿ ಅವರ ನಿರ್ಧಾರಗಳನ್ನು ಸ್ವಾಗತಿಸಿ ಗೌರವಿಸುತ್ತಿದೆ. ಅಂಥ ಧೀಮಂತ ನಾಯಕನ ಪಕ್ಷದ ಸದಸ್ಯರು ನಾವೆಂದು ಹೆಮ್ಮೆ ಪಡಿ ಎಂದು ತಿಳಿಸಿದರು. ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಈ ಭಾಗದಲ್ಲಿ 7,500 ಮತಗಳ ಪೈಕಿ 5 ಸಾವಿರಕ್ಕೂ ಹೆಚ್ಚು ಮತದಾರರು ಬಿಜೆಪಿಯನ್ನು ಬೆಂಬಲಿಸುವಂತಾಗಬೇಕು ಎಂದ ಅವರು, ಮಹಿಳಾ ಸಬಲೀಕರಣ, ಗುಡಿ ಕೈಗಾರಿಕೆ ಮಾಡಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಶಕ್ತಿ ನಮ್ಮ ತಾಯಂದಿರಿಗೆ ಬರಬೇಕೆಂಬ ಆಶಯ ನಮ್ಮ ಪ್ರಧಾನಿಗಳದು. ಸರಕಾರದ ಸಾಲ ಯೋಜನೆಯ ಪ್ರಯೋಜನ ಪಡೆದು ಮಹಿಳೆಯರು ಸ್ವಾವಲಂಬಿ ಆಗಬೇಕೆಂದು ತಿಳಿಸಿದರು.
ಇವತ್ತು ಐತಿಹಾಸಿಕ ದಿನ. ಸುಮಾರು ಒಂದು ವರ್ಷದಿಂದ ರೈತರು ಸತ್ಯಾಗ್ರಹ ನಡೆಸುತ್ತಿದ್ದು, ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವ ಪ್ರಮುಖ ನಿರ್ಧಾರವನ್ನು ಪ್ರಧಾನಿಯವರು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಮಾತನಾಡಿ, ರೈತರು, ಬಡವರ ಸಂಕಷ್ಟಗಳನ್ನು ಆಲಿಸಲು ನಮ್ಮ ನಾಯಕರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಂದಿದ್ದೇವೆ. ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರು ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೃಷಿ ಸುಧಾರಣಾ 3 ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವುದು ಸ್ವಾಗತಾರ್ಹ ಎಂದು ತಿಳಿಸಿದರು. ಮೋದಿಜಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಮೋದಿಜಿ ಅವರ ನೇತೃತ್ವದ ಸರಕಾರವು ದೇಶದ ಅಭಿವೃದ್ಧಿ, ದೀನದಲಿತರ ಕಲ್ಯಾಣಕ್ಕಾಗಿ, ರೈತರ ಏಳಿಗೆಗಾಗಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಆಡಳಿತದಲ್ಲಿ 18 ಸಾವಿರ ಹಳ್ಳಿಗಳು ವಿದ್ಯುತ್ ಸಂಪರ್ಕವಿಲ್ಲದೆ ಇದ್ದವು. ಮೋದಿಜಿ ಈ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಿದರು. ಆದಿವಾಸಿಗಳ ಏಳಿಗೆಗೆ ಅನೇಕ ಯೋಜನೆಗಳನ್ನು ಅವರು ಜಾರಿಗೊಳಿಸಿದರು ಎಂದು ವಿವರಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯೊಂದಿಗೆ ಮೋದಿಯವರು ದೇಶವನ್ನು ಅಭಿವೃದ್ಧಿ ಪಡಿಸಿದ್ದಾರೆ. 100 ಕೋಟಿ ಕೋವಿಡ್ ಲಸಿಕೆ ನೀಡಿಕೆ, 80 ಕೋಟಿ ಜನರಿಗೆ ಕೋವಿಡ್ ಅವಧಿಯಲ್ಲಿ ಪಡಿತರ ನೀಡಿದ್ದು,, ಕುಡಿಯುವ ನೀರಿನ ಸೌಕರ್ಯವನ್ನು ಎಲ್ಲರಿಗೂ ನೀಡಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ವಿವರಿಸಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.