ಬೆಂಗಳೂರು: ಬಿಟ್ ಕಾಯಿನ್ ಮತ್ತು ಶ್ರೀಕಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಜನರ ಮುಂದೆ ಬೆತ್ತಲಾಗಿದೆ. ಇನ್ನು ಕಾಂಗ್ರೆಸ್ಸನ್ನು ಜನರು ಯಾವತ್ತೂ ನಂಬುವುದಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಶಾಸಕರಾದ ಪಿ. ರಾಜೀವ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕಿ ಬಾಯಿ ಬಿಡಬಾರದೆಂದು ಉದ್ದೇಶ ಇದರಲ್ಲಿತ್ತು. 2018ರಲ್ಲೇ ಆತನ ಸ್ವ ಇಚ್ಛಾ ಹೇಳಿಕೆ ಪಡೆದಿದ್ದರೆ ಈ ಅಪರಾಧ ಆಗುತ್ತಿರಲಿಲ್ಲ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಲಾಟೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಆಗಿ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಇದ್ದರು. ಶ್ರೀಕಿಯನ್ನು ಪುಕ್ಕಟೆಯಾಗಿ ಬಿಟ್ಟಿದ್ದರಿಂದ ಈ ಅಪರಾಧ ಪ್ರಕರಣ ನಡೆಯಲು ಕಾರಣವಾಗಿದೆ.
18-2-2018ಕ್ಕೆ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ನ ಪ್ರಕರಣದ 3ನೇ ಆರೋಪಿ ಶ್ರೀಕಿ. ಆಗ ಆಗಿನ ಸರಕಾರ ಸೂಕ್ತವಾದ ತನಿಖೆ ನಡೆಸುತ್ತಿದ್ದರೆ ಇಷ್ಟು ದೊಡ್ಡ ಅಪರಾಧವನ್ನು ಆಗಿನ ಸರಕಾರ ನಿಲ್ಲಿಸಬಹುದಾಗಿತ್ತು. ಇದು ಕಾಂಗ್ರೆಸ್ ಸರಕಾರದ ದೊಡ್ಡ ವೈಫಲ್ಯ. ಮೇ ತಿಂಗಳಲ್ಲಿ ಚಾರ್ಜ್ಶೀಟ್ ಆದಾಗ ಶ್ರೀಕಿ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿ ಆತನ ಹೆಸರನ್ನು ಕೈಬಿಡಲಾಗಿತ್ತು. ಶ್ರೀಕಿ ಅಷ್ಟು ಪ್ರಭಾವಿ ವ್ಯಕ್ತಿಯೇ? ಹಾಗಿದ್ದರೆ ಪೊಲೀಸರ ಮುಂದೆ ಹಾಜರಾಗದೆ ಚಾರ್ಟರ್ ವಿಮಾನದಲ್ಲಿ ಇವನನ್ನು ಓಡಾಡಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
5-10-2018ರಂದು ಶ್ರೀಕಿ ನ್ಯಾಯಾಲಯದಿಂದ ಶರ್ತಬದ್ಧ ಜಾಮೀನು ಪಡೆದಿದ್ದಾನೆ. ಇದರಡಿ, 15 ದಿನದ ಒಳಗೆ ತನಿಖಾ ಏಜೆನ್ಸಿ ಮುಂದೆ ಹಾಜರಾಗಬೇಕೆಂದು 2ನೇ ಶರ್ತ ತಿಳಿಸುತ್ತದೆ. ತನಿಖಾಧಿಕಾರಿ ಜೊತೆ ಸಹಕರಿಸಲು 3ನೇ ಶರ್ತ ತಿಳಿಸುತ್ತದೆ. 1 ಸಾವಿರ ಬಾರಿ ಶ್ರೀಕಿಯ ವಿಚಾರಣೆ ಮಾಡಬಹುದಿತ್ತು. ಆದರೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶ್ರೀಕಿ 20 ನಿಮಿಷ ಮಾತ್ರ ಇದ್ದ. ಆತನ ವಿಚಾರಣೆಯೇ ಆಗುವುದಿಲ್ಲ. ಅಷ್ಟು ಒತ್ತಡದಿಂದ ಪೊಲೀಸರಿಂದ ವಾಪಸ್ ಕರೆಸಲು ಯಾರು ನೆರವಾದರು? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದು ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾದ ಬಳಿಕ 4-11-2020ರಲ್ಲಿ ವಿದೇಶದಿಂದ ಅಕ್ರಮವಾಗಿ ಹೈಡ್ರೋ ಗಾಂಜಾ ಬಂದ ಮಾಹಿತಿ ಲಭಿಸುತ್ತದೆ. ಸುಜಯ್, ಹೇಮಂತ್, ಆರ್ನವ್ ಗೌಡ ಇದರ ಆರೋಪಿಗಳು. ಇದರಲ್ಲೆಲ್ಲೂ ಶ್ರೀಕಿ ಹೆಸರು ಇರಲಿಲ್ಲ. ಬೊಮ್ಮಾಯಿ ಅವರು ಈ ಹೈಡ್ರೋ ಗಾಂಜಾ ಜಾಲದ ಹಿಂದೆ ಸಮರ ಸಾರಿದ್ದರು. ಡ್ರಗ್ಸ್ ವಿರುದ್ಧ ಸಮರ ಸಾರಿದ ಮೊದಲ ರಾಜ್ಯ ಕರ್ನಾಟಕ. ಇದರಡಿ ರಾಜಕಾರಣಿಗಳ ಮಕ್ಕಳು, ಅಗರ್ಭ ಶ್ರೀಮಂತರು, ಸಿನಿಮಾ ನಟ, ನಟಿಯರು ಬಂಧಿಸಲ್ಪಟ್ಟಿದ್ದರು. ಅತಿ ಹೆಚ್ಚು ಮಾದಕವಸ್ತು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಬೊಮ್ಮಾಯಿಯವರು- ರಾಜ್ಯ ಪೊಲೀಸರಿಗೆ ಅಭಿನಂದನಾರ್ಹರು ಎಂದರು. ಆಗ ಶ್ರೀಕಿಯನ್ನು ಬಂಧಿಸಲಾಗಿತ್ತು ಎಂದು ತಿಳಿಸಿದರು.
ತನಿಖೆ ವೇಳೆ ಶ್ರೀಕಿ ವೆಬ್ಸೈಟ್ ಹ್ಯಾಕರ್, ಆನ್ಲೈನ್ ಗೇಮ್ ಹ್ಯಾಕರ್, ಕ್ರಿಪ್ಟೊ ಕರೆನ್ಸಿ ಹ್ಯಾಕರ್ ಎಂಬುದು ಆಗ ಗೊತ್ತಾಯಿತು ಎಂದು ವಿವರಿಸಿದರು. ಬಿಟ್ ಕಾಯಿನ್ ಕುರಿತಂತೆ ಪ್ರಿಯಾಂಕ್ ಖರ್ಗೆ ಅವರು ಕೇಳಿದ ಪ್ರಶ್ನೆಗಳು ಅತ್ಯಂತ ಬಾಲಿಶವಾಗಿವೆ ಎಂದು ತಿಳಿಸಿದರು. ಬಿಟ್ ಕಾಯಿನ್ ವಿಚಾರದಲ್ಲಿ ರಾಜಕೀಯ ಮುಖಂಡರು, ತನಿಖಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ಸಿದ್ದರಾಮಯ್ಯ ಅವರು ಆ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಅವರು ಆಗ್ರಹಿಸಿದರು.
ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರುತ್ತಿದ್ದಾರೆ ಎಂಬ ತಮ್ಮ ಹೇಳಿಕೆಯಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಬಿಟ್ ಕಾಯಿನ್ ಕುರಿತು ಟ್ವೀಟ್ ಮಾಡಿದ್ದಾರೆ. ಆದರೆ, ತನಿಖೆ ವಿಚಾರದಲ್ಲಿ ಬಿಜೆಪಿ ಸರಕಾರವು ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ನುಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿವೇಕ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.