ಬೆಂಗಳೂರು: ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಅದರಲ್ಲಿರಲು ಯಾರೂ ಇಷ್ಟಪಡುತ್ತಿಲ್ಲ. ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಇನ್ನೂ 12 ಜನ ಆರಿಸಿಬಂದರೆ ಪಕ್ಷಕ್ಕೆ ಬಹುಮತ ಸಿಗಲಿದೆ. ಇದಕ್ಕಾಗಿ ಒಗ್ಗೂಡಿ ಶ್ರಮಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಾರ್ಯಕರ್ತರು ಒಂದಲ್ಲ ಒಂದು ವ್ಯಕ್ತಿಗೆ ಸಹಾಯ ಮಾಡಬೇಕು. ಯುವಕರು, ಮಹಿಳೆಯರಿಗೆ ನೆರವಾಗಬೇಕು. ಈ ಚುನಾವಣೆ ಮುಗಿದ ಮೇಲೆ ರಾಜ್ಯದೆಲ್ಲೆಡೆ ಪ್ರವಾಸ ಮಾಡಲಿದ್ದೇನೆ. ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಆಸೆ ನನ್ನದು.ಅದಕ್ಕಾಗಿ ಶ್ರಮಿಸಲಿದ್ದೇನೆ ಎಂದರು.
ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದ ನಾವು ಸೌಭಾಗ್ಯವಂತರು. ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ. ಅಂಥ ಪಕ್ಷದಲ್ಲಿ ನಾವಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಲೋಕಸಭೆಯಲ್ಲಿ ಬೆರಳೆಣಿಕೆಯ ಸದಸ್ಯರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಇನ್ನು 25 ವರ್ಷ ಕಳೆದರೂ ದೇಶದ ಆಡಳಿತ ನಡೆಸಲು ಸಾಧ್ಯವಾಗದು ಎಂದು ನುಡಿದರು. ರಾಹುಲ್ ಗಾಂಧಿಯವರಿಗೆ ದೇಶದ ಎಲ್ಲೂ ಜನಮನ್ನಣೆ ಇಲ್ಲ. ಅವರು ಹೊರದೇಶಕ್ಕೆ ಯಾಕೆ ಹೋಗ್ತಾರೋ ಬರ್ತಾರೋ ಗೊತ್ತಿಲ್ಲ ಎಂದರು. ಆ ಪಕ್ಷ ಅತ್ಯಂತ ದುರ್ಬಲವಾಗಿದೆ ಎಂದು ತಿಳಿಸಿದರು.
ಪ್ರಧಾನಿಯವರು ರೈತರಿಗಾಗಿ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ರೈತರ ನೆರವಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಗೆ 4 ಸಾವಿರ ರೂಪಾಯಿ ಸೇರಿಸಿ ಕೊಡಲು ಆರಂಭಿಸಿದ್ದೇನೆ ಎಂದು ವಿವರಿಸಿದರು.
4 ತಂಡಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಮಾಸಾಶನದ ಹಣವನ್ನು ಹೆಚ್ಚಿಸಿದ್ದಾರೆ. ಭಾಗ್ಯಲಕ್ಷ್ಮಿ 20 ಲಕ್ಷ ಜನರನ್ನು ತಲುಪಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಕೇಂದ್ರ- ರಾಜ್ಯ ಸರಕಾರಗಳು ಶ್ರಮಿಸಿವೆ ಎಂದು ತಿಳಿಸಿದರು. ಭಾರತದ ಅಭಿವೃದ್ಧಿ ಬಗ್ಗೆ ಪ್ರಪಂಚವೇ ಅಚ್ಚರಿಯಿಂದ ನೋಡುತ್ತಿದೆ. ಕೋವಿಡ್ ನಡುವೆಯೂ ಅಭಿವೃದ್ಧಿಗೆ ಸಮಸ್ಯೆ ಆಗಿಲ್ಲ ಎಂದರು.
ಕಾರ್ಯಕರ್ತರು ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ನಾನೇ ಅಭ್ಯರ್ಥಿ ಎಂದು ತಿಳಿದು ಪ್ರತಿಯೊಬ್ಬ ಕಾರ್ಯಕರ್ತರು ಕೆಲಸ ಮಾಡಬೇಕು. ಈ ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂಬುದಕ್ಕೆ ಇಲ್ಲಿ ಸೇರಿದ ಕಾರ್ಯಕರ್ತರೇ ಸಾಕ್ಷಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.