ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಕರ್ನಾಟಕ ಇದರ ಮೂರನೇ ರಾಜ್ಯ ಅಧಿವೇಶನವು ಇದೇ ಬರುವ ಜನವರಿ 8 ಮತ್ತು 9ನೇ ತಾರೀಕಿನಂದು ಉಜಿರೆಯಲ್ಲಿ ಜರುಗಲಿದ್ದು ಇದರ ಪೂರ್ವಭಾವಿ ಸಭೆಯು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಮನವಿ ಪತ್ರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಶ್ರೀ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಸುರತ್ಕಲ್ ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಅವರ ಮೂಲಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಘುನಂದನ ಭಟ್ ಅವರು ಅಧಿವೇಶನದ ಹಿನ್ನೆಲೆ, ರೂಪುರೇಷೆಗಳನ್ನು ಸಭೆಯ ಮುಂದಿಟ್ಟರು.
1966ರಲ್ಲಿ ಪ್ರಾರಂಭಗೊಂಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಸಾಹಿತ್ಯ ಕ್ಷೇತ್ರದಲ್ಲಿ ಭಾರತೀಯ ದೃಷ್ಟಿಯನ್ನು ಸ್ಥಾಪಿಸುವ ಮತ್ತು ಭಾರತೀಯ ಭಾಷೆಗಳ ನಡುವೆ ಸಹೋದರ ಭಾವವನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಾರ್ಯಾಚರಿಸುತ್ತಿದೆ. 2015ರಲ್ಲಿ ಕರ್ನಾಟಕದಲ್ಲಿ ಬೀಜಾರೋಪಗೊಂಡ ಸಾಹಿತ್ಯ ಪರಿಷತ್ತು ಈ ಹಿಂದಿನ ಎರಡು ರಾಜ್ಯ ಅಧಿವೇಶನಗಳನ್ನು ಶಿರಸಿ ಮತ್ತು ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಸಿತ್ತು.
ಇದೀಗ ಮೂರನೆಯ ರಾಜ್ಯ ಅಧಿವೇಶನವು ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಉಜಿರೆಯಲ್ಲಿ 2022ರ ಜನವರಿ 8 ಮತ್ತು 9ರಂದು ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧಿವೇಶನವನ್ನು ಉದ್ಘಾಟಿಸಲಿದ್ದು. ಹಿರಿಯ ಸಾಹಿತಿಗಳಾದ ಡಾ. ನಾ. ಮೊಗಸಾಲೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಎರಡು ದಿನಗಳ ಅಧಿವೇಶನದಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನ ಇತ್ಯಾದಿಗಳು ಸಂಪನ್ನಗೊಳ್ಳಲಿವೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಿ. ಎಸ್. ಪ್ರಕಾಶ್ ಮಾತನಾಡಿ ಸಾಹಿತ್ಯದ ಮೂಲಕ ಬೌದ್ಧಿಕ ಜಗತ್ತಿನಲ್ಲಿ ಪರಿವರ್ತನೆ ತರುವ ಕೆಲಸವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆಯ ಭಾಗವಾಗಿರುವ ಭಾರತೀಯ ಸಾಹಿತ್ಯವು ಅನೇಕ ಶತಮಾನಗಳವರೆಗೆ ಸಮೃದ್ಧಗೊಂಡಿತ್ತು. ಕ್ರಮೇಣ ಭಾರತೀಯರ ಚಿತ್ತ, ಮಾನಸಿಕತೆಯಲ್ಲಿ ಬದಲಾವಣೆಯಾದಾಗ ಸಾಹಿತ್ಯ ಕ್ಷೇತ್ರದ ಮೇಲೂ ಹೊಡೆತ ಬಿತ್ತು. ಈಗ ಮತ್ತೊಮ್ಮೆ ಜನಮಾನಸದಲ್ಲಿ ರಾಷ್ಟ್ರೀಯ ಸಾಹಿತ್ಯದ ಮೂಲಕ ವೈಚಾರಿಕ ಜಗತ್ತಿನಲ್ಲಿ ಪರಿವರ್ತನೆ ತರುವ ಕೆಲಸ ಆಗಬೇಕು ಎಂದರಲ್ಲದೆ, ಉಜಿರೆಯಲ್ಲಿ ನಡೆಯಲಿರುವ ಪರಿಷತ್ತಿನ ಮೂರನೇ ರಾಜ್ಯ ಅಧಿವೇಶನವನ್ನು ಯಶಸ್ವಿಗೊಳಿಸಲು ಸರ್ವರೂ ಸಹಕರಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕರಾದ ಸುನಿಲ್ ಆಚಾರ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ, ಕೆ.ಎಂ.ಎಫ್ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ, ಅಧಿವೇಶನದ ಕಾರ್ಯಾಧ್ಯಕ್ಷರಾದ ಸಿಎ ಶಾಂತರಾಮ ಶೆಟ್ಟಿ, ರಾಜ್ಯ ಅಧಿವೇಶನದ ಸಂಚಾಲಕರಾದ ಡಾ. ಮಾಧವ ಎಂ.ಕೆ., ಸಹ ಸಂಚಾಲಕರಾದ ಡಾ. ರವಿ ಎಂ. ಎನ್., ಕಾರ್ಯದರ್ಶಿಗಳಾದ ಶ್ರೀ ರಮೇಶ್ ಮಯ್ಯ, ಸಹ ಕಾರ್ಯದರ್ಶಿಗಳಾದ ಶಿವಪ್ರಸಾದ್ ಸುರ್ಯ, ಸಾಹಿತ್ಯ ಪರಿಷತ್ತಿನ ಮಂಗಳೂರು ವಿಭಾಗ ಕೋಶಾಧಿಕಾರಿ ಮಾಧವ ಜೋಗಿತ್ತಾಯ, ಶೈಲೇಶ್, ಕೇಶವ ಬಂಗೇರ, ಸಿ. ಪಿ. ಕಾಮತ್, ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.