ಬೆಂಗಳೂರು : ಬಿಟ್ ಕಾಯಿನ್ ದಂಧೆ ಬಗ್ಗೆ ಸಿದ್ದರಾಮಯ್ಯವರಿಗೆ ಮಾಹಿತಿ ಇದೆಯೇ? ದಾಖಲೆ ಇದ್ದರೆ, ಅವ್ಯವಹಾರ ಆಗಿದ್ದರೆ ಯಾರಿದ್ದಾರೆಂಬ ಹೆಸರು ಕೊಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಬಿ ಸಿಟಿ ಗಲಾಟೆಯಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ರವರ ಮಗ ಮಹಮ್ಮದ್ ನಲಪಾಡ್ ಹೆಸರಿತ್ತು. ಇವರ ಜೊತೆ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಹೆಸರೂ ಇತ್ತು. ಆಗಲೇ ಬಿಟ್ ಕಾಯಿನ್ ವಿಚಾರ ಚರ್ಚೆಗೆ ಬಂದಿತ್ತು. ಈಗ ಶ್ರೀಕೃಷ್ಣನು ಕಾಂಗ್ರೆಸ್ ಶಾಸಕರು, ಶಾಸಕರ ಮಕ್ಕಳ ಹೆಸರು ಹೇಳಿದ್ದಾನೆ. ಮಾಜಿ ಸಚಿವರ ಮಗ ರುದ್ರಪ್ಪ ಲಮಾಣಿ ಹೆಸರು ಹೇಳಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಸಮಾಜಘಾತುಕ ಚಟುವಟಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ಸೆಕೆಂಡ್ ಲೈನ್ ಲೀಡರ್ಶಿಪ್ ಇದೆ. ಸ್ಕಿಲ್ ಗೇಮ್, ಕ್ಯಾಸಿನೋ ದಂಧೆ, ಲೈವ್ ಬ್ಯಾಂಡ್, ಬಾರ್ ಗಲಭೆಗಳು ಮತ್ತಿತರ ದಂಧೆಕೋರರು ಕಾಂಗ್ರೆಸ್ನಲ್ಲಿದ್ದಾರೆ. ಅಂಥ ದಂಧೆಗಳಲ್ಲಿ ಬಿಜೆಪಿಯವರು ಇಲ್ಲ. ಬಿಜೆಪಿ ವಿರುದ್ಧ ದಾಖಲೆ ಇಲ್ಲದೆ ಆರೋಪಿಸುವುದು ಸಲ್ಲದು; ಇದೇ ಪ್ರವೃತ್ತಿ ಮುಂದುವರಿಸಿದರೆ ಸಿದ್ದರಾಮಯ್ಯರ ವಿರುದ್ಧ ಪೊಲೀಸ್ ಕಂಪ್ಲೈಂಟ್ ಕೊಡಲಾಗುವುದು ಎಂದು ಎಚ್ಚರಿಸಿದರು.
ಉತ್ತಮವಾಗಿ ಸರಕಾರ ನಡೆಸುತ್ತಿದ್ದೇವೆ. ಆದರೆ, ಸುಳ್ಳು ಆಪಾದನೆ ಮಾಡುವುದು ಸಿದ್ದರಾಮಯ್ಯ ಅವರ ಚಾಳಿ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಎಲ್ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇದನನ್ನು ಸಹಿಸದ ಸಿದ್ದರಾಮಯ್ಯರವರು ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಕೋಟ್ಯಂತರ ಅವ್ಯವಹಾರ ಮಾಡಿದೆ ಎಂದು ಆರೋಪಿಸಿದ್ದರು. ಆದರೆ, ಅದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಲಿಲ್ಲ. ಅದಕ್ಕೆ ದಾಖಲೆ ಸಮೇತ ಐದು ಸಚಿವರು ಉತ್ತರವನ್ನೂ ನೀಡಿದ್ದರು; ಆದರೆ, ಸಿದ್ದರಾಮಯ್ಯ ಮತ್ತೆ ಮಾತನಾಡಲಿಲ್ಲ ಎಂದು ವಿವರಿಸಿದರು.
ಸಿದ್ದರಾಮಯ್ಯರವರು ಪ್ರಧಾನಿಯವರಾದ ನರೇಂದ್ರ ಮೋದಿ, ಮುಖ್ಯಮಂತ್ರಿಗಳ ವಿರುದ್ಧ ಸ್ಟೈಲ್ ಆಗಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳಾದ ಸಂದರ್ಭದಲ್ಲಿ ಏಕವಚನದಲ್ಲಿ ಟೀಕೆ ಮಾಡಿದ್ದರು ಎಂದು ಆಕ್ಷೇಪಿಸಿದರು. ಬಿಟ್ ಕಾಯಿನ್ ಅಂದರೆ ಮೊಬೈಲ್, ಲ್ಯಾಪ್ಟಾಪ್ಗಳಲ್ಲಿ ನಡೆಯುವ ಡಿಜಿಟಲ್ ಫೇಕ್ ಟರ್ನ್ ಓವರ್; ಇದರ ಸಂಪೂರ್ಣ ಮಾಹಿತಿ ನಮಗಾಗಲೀ ಸರ್ಕಾರಕ್ಕಾಗಲೀ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಪಕ್ಷದ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿದ್ದರಾಮಯ್ಯ ಸುಳ್ಳುಗಳ ಸರದಾರ. ಬರಿಯ ಗಾಳಿಯಲ್ಲಿ ಗುಂಡು ಹೊಡೆಯುವ ವ್ಯಕ್ತಿ ಅವರು ಎಂದರು. ದಲಿತರ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಾರೆ ಎಂಬ ಹೇಳಿಕೆಯ ವಿಡಿಯೋವನ್ನು ತಿರುಚಿಲ್ಲ; ಈ ವಿಚಾರದಲ್ಲಿ ಸಿದ್ದರಾಮಯ್ಯರ ನಾಲಿಗೆ ತಿರುಚಿದೆ ಎಂದು ತಿಳಿಸಿದರು. ಸಿದ್ದರಾಮಯ್ಯರು ನಿಜವಾದ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
2016-18ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಟ್ ಕಾಯಿನ್ ವಿಚಾರದ ಚರ್ಚೆ ನಡೆಯುತ್ತಿತ್ತು. ಆದರೆ, ನಗದು ಎಲ್ಲಿದೆ, ಖಾತೆ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯರ ಕಾಲದಲ್ಲೇ ಈ ದಂಧೆ ನಡೆಯುತ್ತಿತ್ತು. ಆಗ ಐಟಿ, ಬಿಟಿ ಸಚಿವರಾಗಿದ್ದವರನ್ನು ಈಗ ವಿಚಾರಣೆಗೆ ಒಳಪಡಿಸಿದರೆ ನಿಮ್ಮ ಗುಟ್ಟೂ ಹೊರಬರುತ್ತದೆ ಎಂದು ತಿಳಿಸಿದರು.
ಸಿಎಂ ಬದಲಾಗುತ್ತಾರೆ; ಮೂರನೇ ಸಿಎಂ ಬರುತ್ತಾರೆ ಎಂಬುದು ಕೇವಲ ಗುಲ್ಲು. ಇವೆಲ್ಲವೂ ಆಧಾರರಹಿತ ಮಾತುಗಳು ಎಂದ ಅವರು, ದಲಿತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯರ ನಿಜ ಮುಖ ಬಯಲಾಗಿದೆ. ನಾನೂ ದಲಿತನೇ, ನಾನೂ ಮುಸ್ಲಿಮನೇ ಎನ್ನುವ ಮೂಲಕ ನಿಮ್ಮ ನಿಜಬಣ್ಣ ಹೊರಬಿದ್ದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯರು ತಮ್ಮ ಗೋಮುಖ ವ್ಯಾಘ್ರನ ಕೆಲಸ ನಿಲ್ಲಿಸಲಿ ಎಂದು ಒತ್ತಾಯಿಸಿದರು. ಪ್ರಿಯಾಂಕ ಖರ್ಗೆ ಚೇಂಬರ್ನಲ್ಲೇ ಬಿಟ್ ಕಾಯಿನ್ ಕುರಿತು 2016-17ರಲ್ಲಿ ಚರ್ಚೆ ನಡೆದಿತ್ತು ಎಂದು ಆರೋಪಿಸಿದರು.
ಸಮರ್ಪಕ ತನಿಖೆ ಮಾಡದೆ ಬಂಧಿಸಿದರೆ ಈ ಪ್ರಕರಣದ ಹಿಂದಿರುವ ಕಾಣದ ಕೈಗಳು ಸಿಗಲಾರವು. ಈ ವಿಚಾರದಲ್ಲಿ ತಾಳ್ಮೆ ಇರಬೇಕು. ಮುಖ್ಯಮಂತ್ರಿಗಳು, ಗೃಹ ಸಚಿವರು ತನಿಖೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.