ಕೊರೋನಾ 3ನೇ ಅಲೆ ಸಂಕಷ್ಟ ಎದುರಿಸಲು 10 ಲಕ್ಷ ಕಾರ್ಯಕರ್ತರ ಪಡೆ ನಿರ್ಮಾಣ : ಸುನೀಲ ಅಂಬೇಕರ್
🔷 ಬಾಂಗ್ಲಾದೇಶದಲ್ಲಿ ಜರುಗುತ್ತಿರುವ ಹಿಂದುಗಳ ಮೇಲಿನ ಅತ್ಯಾಚಾರ ಮತ್ತು
🔷 ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮ ಚರ್ಚೆ
ಧಾರಾವಾಡ : ದೇಶದಲ್ಲಿ ಕೊರೋನಾ ಮೂರನೇ ಅಲೆಯ ಕುರಿತಾಗಿ ಅನೇಕ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅಲೆಯ ಭೀಕರತೆ ಪ್ರಮಾಣ ಕಂಡು, ಜುಲೈ ತಿಂಗಳಲ್ಲಿ ಜರುಗಿದ ಆರ್ಎಸ್ಎಸ್ನ ಪ್ರಚಾರಕರ ಬೈಠಕ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಸ್ಥಾನಗಳಲ್ಲಿ ಮೂರನೇ ಅಲೆ ಭೀಕರತೆ ತಡೆಯಲು ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ವತಿಯಿಂದ 10 ಲಕ್ಷ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅ. 28 ರಿಂದ 30 ರವರೆಗೆ ಮೂರು ದಿನ ಜರುಗುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆ ಹಿನ್ನೆಲೆಯಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೂರನೇ ಅಲೆ ಭಾರತ ಎದುರಿಸುವುದು ಬೇಡ ಎಂಬ ಆಶಯ ಎಲ್ಲರದ್ದಾಗಿದೆ. ಆದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಆರ್ಎಸ್ಎಸ್ ತನ್ನ 10 ಲಕ್ಷ ಸ್ವಯಂಸೇವಕರಿಗೆ ಸೂಕ್ತ ವೃತ್ತಿ ಪರ ತರಬೇತಿ ನೀಡಿದೆ ಆ ಕುರಿತಾಗಿ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಳೆದ ಕೆಲ ಸಮಯದಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಮತ್ತು ಹಿಂದು ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ಮತ್ತು ಹಿಂಸಾಚಾರ ನಡೆಯುತ್ತಿದೆ. ಈ ಹೀನ ಕೃತ್ಯಗಳಿಗೆ ವಿಶ್ವಾದ್ಯಂತ ಖಂಡಿಸಲಾಗುತ್ತಿದೆ. ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿರುವ ಈ ಘಟನೆಗಳ ಕುರಿತಾಗಿ ಚರ್ಚಿಸಲಾಗುವುದು, ಮತ್ತು ತೆಗೆದುಕೊಳ್ಳವ ನಿರ್ಧಾರದ ಬಗ್ಗೆ ಕೊನೆಗೆ ಅನುಮೋದನೆಗೊಳಿಸಲಾಗುವುದು ಎಂದು ವಿವರಿಸಿದರು.
ರಾಷ್ಟ್ರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿವೆ. ಆ ಕುರಿತಾಗಿ ಕೂಡಾ ಸಭೆಯಲ್ಲಿ ಚರ್ಚಿಸಲಾಗುವುದು. ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಅನನ್ಯ ಕೊಡುಗೆ ನೀಡಿ, ಮರೆಯಾದ ಸಾವಿರಾರು ಸ್ವಾತಂತ್ರ್ಯ ಸೇನಾನಿಗಳ ತಾಗ್ಯ ಬಲಿದಾನಗಳನ್ನು ಎಲ್ಲರ ಸಮ್ಮುಖ ತರುವ ಮತ್ತು ನೆನೆಯುವ ಕುರಿತಾಗಿ ಚರ್ಚೆ ಜರುಗಲಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ವರ್ಷದಲ್ಲಿ ಎರಡು ಬಾರಿ ಸಭೆಗಳನ್ನು ಆಯೋಜಿಸುತ್ತದೆ. ಮಾರ್ಚ್ ತಿಂಗಳಲ್ಲಿ ಜರಗುವ ಅಖಿಲ ಭಾರತೀಯ ಪ್ರತಿನಿಧಿ ಸಭೆ ಏರ್ಪಡಿಸಲಾಗುತ್ತದೆ. ದಸರಾ ಮತ್ತು ದೀಪಾವಳಿ ಮಧ್ಯದಲ್ಲಿ ಕಾರ್ಯಕಾರಿ ಮಂಡಳಿ ಸಭೆ ಜರಗುತ್ತದೆ. ಈ ಸಭೆಯಲ್ಲಿ 350 ಸದಸ್ಯರು ಅಪೇಕ್ಷಿತರಿದ್ದಾರೆ. ಸಂಘದ ಎಲ್ಲ ಪ್ರಾಂತ ಮತ್ತು ಕ್ಷೇತ್ರಗಳ ಸಂಘಚಾಲಕ, ಕಾರ್ಯವಾಹ, ಪ್ರಚಾರಕರು ಮತ್ತು ಅಖಿಲ ಭಾರತೀಯ ಕಾರ್ಯಕಾರಿಣಿ ಸಹಿತ ಕೆಲ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ ಜುಲೈದಿಂದ ಈವರೆಗೆ ಎಲ್ಲ ಸಭೆಗಳು ಆನ್ಲೈನ್ ಮೂಲಕ ಕಡಿಮೆ ಸಂಖ್ಯೆಯಲ್ಲಿ ಉಪಸ್ಥಿತಿಯೊಂದಿಗೆ ಜರುಗಿದ್ದಾವೆ. ಕರೋನಾ ಸಂಕಷ್ಟ ಕರಗಿದ ನಂತರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭೌತಿಕವಾಗಿ ಸಭೆ ಸೇರಲಾಗುತ್ತಿದೆ. ಮಾರ್ಚನಲ್ಲಿ ಜರುಗುವ ಪ್ರತಿನಿಧಿ ಸಭೆಯಲ್ಲಿ ಕಾರ್ಯ ವಿಸ್ತಾರ ದೃಷ್ಟಿಯಿಂದ ಯೋಜನೆ ರೂಪಿಸಲಾಗುತ್ತದೆ. ಅಕ್ಟೋಬರ್ನಲ್ಲಿ ಜರುಗುವ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಯೋಜನೆಗಳ ಸಮೀಕ್ಷೆ ಮತ್ತು ಅವಲೋಕ ಜೊತೆಗೆ ಕಾರ್ಯ ವಿಸ್ತಾರ ನೂತನ ಯೋಜನೆ ಕೂಡಾ ರೂಪಿಸಲಾಗುತ್ತದೆ. ಇದರ ಜೊತೆಗೆ ಕಾರ್ಯಕರ್ತರ ವಿಕಾಸದ ದೃಷ್ಟಿಯಿಂದ ಅವರ ತರಬೇತಿ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. 28 ಅಕ್ಟೋಬರ್ ಗುರುವಾರದಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕಾರಿ ಮಂಡಳಿ ಸಭೆಯ ಉದ್ಘಾಟನಾ ಕಾರ್ಯಕ್ರಮ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಜರುಗಲಿದೆ ಮತ್ತು ಕೋವಿಡ್-19 ಮಾರ್ಗಸೂಚಿ ಪರಿಪಾಲನೆಯೊಂದಿಗೆ ಈ 3 ದಿನದ ಸಭೆ ಜರುಗಲಿದೆ ಎಂದರು.
ಸಂಘ ಸ್ಥಾಪನೆಯಾಗಿದ್ದು 1925 ರಲ್ಲಿ. ಮುಂಬರುವ ದಿನಗಳಲ್ಲಿ ಅಂದರೆ 2025 ರಲ್ಲಿ ಸಂಘ ಸ್ಥಾಪನೆಯ ಶತಮಾನೋತ್ಸವ ಕೂಡಾ ಜರುಗಲಿದೆ. ಸಂಘದ ಕಾರ್ಯ ವಿಸ್ತಾರ ದೃಷ್ಟಿಯಿಂದ ರೂಪಿಸಿದ ೩ ವರ್ಷದ ಯೋಜನೆ ಕುರಿತಾಗಿ ಸುಧೀರ್ಘ ಚರ್ಚೆ ಈ ಸಭೆಯಲ್ಲಿ ಜರುಗಲಿದೆ. ಗುರು ತೇಗಬಹಾದ್ದೂರ್ ಅವರ 400ನೇ ಜಯಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಜರಗುವ ಕಾರ್ಯಕ್ರಮಗಳ ಕುರಿತಾಗಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ಅಖಿಲ ಭಾರತೀಯ ಪ್ರಚಾರ ವಿಭಾಗ ಸಹ ಪ್ರಮುಖರಾದ ನರೇಂದ್ರ ಕುಮಾರ್, ಅಲೋಕ ಕುಮಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.