ನವದೆಹಲಿ : ʻಇ-ಶ್ರಮ್ʼ ಪೋರ್ಟಲ್ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ಅನುಕೂಲ ಮಾಡಿಕೊಡುವ ಅಭಿಯಾನವು ಆರಂಭದಿಂದಲೂ ದೇಶಾದ್ಯಂತ ತೀವ್ರ ಗಮನ ಸೆಳೆದಿದೆ. ಸುಮಾರು 24 ದಿನಗಳಲ್ಲಿ, 1 ಕೋಟಿಗೂ(ಅಥವಾ 10 ದಶಲಕ್ಷ) ಹೆಚ್ಚು ಕಾರ್ಮಿಕರು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಂದಿನವರೆಗೂ 1,03,12,095 ಕಾರ್ಮಿಕರು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಸುಮಾರು 43% ಫಲಾನುಭವಿಗಳು ಮಹಿಳೆಯರು ಮತ್ತು 57% ಪುರುಷರು.
ನಿರ್ಮಾಣ, ಉಡುಪು ತಯಾರಿಕೆ, ಮೀನುಗಾರಿಕೆ, ದಿನಗೂಲಿ, ಪ್ಲಾಟ್ ಫಾರ್ಮ್ ಕೆಲಸ, ಬೀದಿ ಬದಿ ವ್ಯಾಪಾರ, ಮನೆಗೆಲಸ, ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ಸಾರಿಗೆ ಮುಂತಾದ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರ ಸಮಗ್ರ ದತ್ತಾಂಶವನ್ನು ಅನ್ನು ಸಂಗ್ರಹಿಸುವ ಚೊಚ್ಚಲ ಉಪಕ್ರಮದ ಭಾಗವಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಭೂಪೇಂದರ್ ಯಾದವ್ ಮತ್ತು ರಾಜ್ಯ ಸಚಿವ ಶ್ರೀ ರಾಮೇಶ್ವರ ತೆಲಿ ಅವರು ಆಗಸ್ಟ್ 26ರಂದು ʻಇ-ಶ್ರಮ್ʼ ಪೋರ್ಟಲ್ಗೆ ಚಾಲನೆ ನೀಡಿದರು.
ಭಾರಿ ಸಂಖ್ಯೆಯ ವಲಸೆ ಕಾರ್ಮಿಕರು ಈ ವಲಯಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 2019-20ರ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಅಂದಾಜು 38 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಇವರನ್ನೇ ಈ ಪೋರ್ಟಲ್ನಲ್ಲಿ ನೋಂದಾಯಿಸುವ ಗುರಿ ಹೊಂದಲಾಗಿದೆ. ಈ ವಲಸೆ ಕಾರ್ಮಿಕರು ಈಗ ʻಇ-ಶ್ರಮ್ʼ ಪೋರ್ಟಲ್ನಲ್ಲಿ ನೋಂದಣಿಯ ಮೂಲಕ ವಿವಿಧ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಆಧಾರಿತ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸೃಷ್ಟಿಸಲು ಇತ್ತೀಚೆಗೆ ಪ್ರಾರಂಭಿಸಲಾದ ʻಇ-ಶ್ರಮ್ʼ ಪೋರ್ಟಲ್ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಶ್ರೀ ಭೂಪೇಂದರ್ ಯಾದವ್, ಶ್ರೀ ರಾಮೇಶ್ವರ್ ತೇಲಿ, ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ (ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ) ಮತ್ತು ಮುಖ್ಯ ಕಾರ್ಮಿಕ ಆಯುಕ್ತರು (ಕೇಂದ್ರ) ಮತ್ತು ʻಸಿಎಲ್ಸಿʼನ ಇತರ ಪ್ರಾದೇಶಿಕ ಅಧಿಕಾರಿಗಳು ಅಸಂಘಟಿತ ಕಾರ್ಮಿಕರು, ಕಾರ್ಮಿಕ ಸಂಘಗಳ ಮುಖ್ಯಸ್ಥರು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಅಲ್ಲದೆ, ʻಸಿಎಲ್ಸಿʼ(ಸಿ) ನೋಂದಣಿ ಅಭ್ಯಾಸವನ್ನು ಉತ್ತೇಜಿಸಲು ಇಂತಹ ಐದು ಸಭೆಗಳನ್ನು ನಡೆಸಲಾಗಿದ್ದು, ಅವು ಭಾರಿ ಯಶಸ್ಸು ಕಂಡಿವೆ.
ಇತ್ತೀಚಿನ ದತ್ತಾಂಶದ ಪ್ರಕಾರ ಬಿಹಾರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಉಪಕ್ರಮದಲ್ಲಿ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ನೋಂದಣಿಗಳನ್ನು ಹೊಂದಿವೆ. ಕೆಳಗಿನ ನಕ್ಷೆಯು ಈ ರಾಜ್ಯಗಳ ಸಾಧನೆಯನ್ನು ಸೂಚಿಸುತ್ತದೆ. ಆದಾಗ್ಯೂ, ಈ ಸಂಖ್ಯೆಯನ್ನು ಪರಿಗಣಿಸುವಾಗ ತುಸು ಎಚ್ಚರಿಕೆ ವಹಿಸಬೇಕು. ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಡಿಮೆ ಸಂಖ್ಯೆಯ ನೋಂದಾಯಿತ ಕಾರ್ಮಿಕರನ್ನು ಹೊಂದಿವೆ.
ಕೇರಳ, ಗುಜರಾತ್, ಉತ್ತರಾಖಂಡ್, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಲಡಾಖ್, ಜಮ್ಮು ಮತ್ತು ಕಾಶ್ಮೀರ ಮತ್ತು ಚಂಡೀಗಢದಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅಭಿಯಾನವು ವೇಗ ಪಡೆಯಬೇಕಾಗಿದೆ. ಈ ನೋಂದಣಿಯು ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಉದ್ಯೋಗಸ್ಥರಿಗೆ ಪ್ರಮುಖ ಜನಕಲ್ಯಾಣ ಯೋಜನೆಗಳು ಹಾಗೂ ವಿವಿಧ ಸೌಲಭ್ಯಗಳ ತಲುಪಿಸುವಿಕೆ ಮತ್ತು ಲಭ್ಯತೆಯನ್ನು ಸುಗಮಗೊಳಿಸುತ್ತದೆ.
ಕೃಷಿ ಮತ್ತು ನಿರ್ಮಾಣ ವಲಯದಿಂದ ಅತಿ ಹೆಚ್ಚು ಕಾರ್ಮಿಕರು ನೋಂದಣಿಯಾಗಿದ್ದು, ಈ ಪ್ರಮಾಣವು ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ಎರಡೂ ವಲಯಗಳ ಪಾತ್ರವನ್ನು ಸೂಚಿಸುತ್ತದೆ. ಇದಲ್ಲದೆ, ಮನೆ ಮತ್ತು ಗೃಹ ಕಾರ್ಮಿಕರು, ಉಡುಪು ವಲಯದ ಕಾರ್ಮಿಕರು, ಆಟೋಮೊಬೈಲ್ ಮತ್ತು ಸಾರಿಗೆ ವಲಯದ ಕಾರ್ಮಿಕರು, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ಕಾರ್ಮಿಕರು, ಬಂಡವಾಳ ಸರಕು ವಲಯದ ಕಾರ್ಮಿಕರು, ಶಿಕ್ಷಣ, ಆರೋಗ್ಯ ರಕ್ಷಣೆ, ಚಿಲ್ಲರೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆತಿಥ್ಯ, ಆಹಾರ ಉದ್ಯಮ ಸೇರಿದಂತೆ ಇನ್ನೂ ಅನೇಕ ವೈವಿಧ್ಯಮಯ ಮತ್ತು ವಿಭಿನ್ನ ವಲಯದ ಕಾರ್ಮಿಕರು ಈ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ನೋಂದಾಯಿತ ಕಾರ್ಮಿಕರಲ್ಲಿ ಸುಮಾರು 48% ಮಂದಿ 25-40 ವರ್ಷ ವಯಸ್ಸಿನವರಾಗಿದ್ದಾರೆ. 40-50 ವರ್ಷ ವಯೋಮಾನದವರು ಸುಮಾರು 21%ರಷ್ಟಿದ್ದಾರೆ. 16-25 ವರ್ಷ ವಯೋಮಾನದವರು 19%ರಷ್ಟಿದ್ದಾರೆ ಮತ್ತು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು 12% ಮಂದಿ ಇದ್ದಾರೆ.
ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಲು ಮತ್ತು ಈ ಅಭಿಯಾನದ ಲಾಭವನ್ನು ಪಡೆಯಲು ಕಾರ್ಮಿಕರು ತಮ್ಮ ಹತ್ತಿರದ ʻಸಿಎಸ್ಸಿʼಗಳಿಗೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಪೋರ್ಟಲ್ನಲ್ಲಿ ನೋಂದಣಿಯಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವ ಕಾರ್ಮಿಕರಿಗೆ ತಾವಿರುವಲ್ಲೇ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವುದಲ್ಲದೆ ವಿವಿಧ ಕಲ್ಯಾಣ ಯೋಜನೆಗಳು ಕೆಳಸ್ತರದವರೆಗೂ ತಲುಪಲು ನೆರವಾಗುತ್ತದೆ. , ವಿಶೇಷವಾಗಿ ವಲಸೆ ಕಾರ್ಮಿಕರು ಇದರಿಂದ ಅಪಾರ ಪ್ರಯೋಜನ ಪಡೆಯಬಹುದು.
ಆನ್ಲೈನ್ ನೋಂದಣಿಗಳಿಗಾಗಿ, ಕಾರ್ಮಿಕರು ʻಇ-ಶ್ರಮ್ʼ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಬಳಸಬಹುದು. ಅಥವಾ ಅವರು ʻಸಾಮಾನ್ಯ ಸೇವಾ ಕೇಂದ್ರಗಳುʼ (ಸಿಎಸ್ಸಿ), ರಾಜ್ಯ ಸೇವಾ ಕೇಂದ್ರ, ಕಾರ್ಮಿಕ ಸೌಲಭ್ಯ ಕೇಂದ್ರಗಳು, ಆಯ್ದ ಅಂಚೆ ಕಚೇರಿಗಳ ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ʻಇ-ಶ್ರಮ್ʼ ಪೋರ್ಟಲ್ನಲ್ಲಿ ನೋಂದಣಿಯ ನಂತರ, ಅಸಂಘಟಿತ ಕಾರ್ಮಿಕರಿಗೆ ಡಿಜಿಟಲ್ ʻಇ-ಶ್ರಮ್ʼ ಕಾರ್ಡ್ ನೀಡಲಾಗುವುದು. ಅವರು ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ವಿವರಗಳನ್ನು ನವೀಕರಿಸಬಹುದು. ಕಾರ್ಮಿಕರು ನೋಂದಣಿ ಬಳಿಕ ತಮ್ಮ ʻಸಾರ್ವತ್ರಿಕ ಖಾತೆ ಸಂಖ್ಯೆʼಯನ್ನು(ಯುಎಎನ್) ಪಡೆಯುತ್ತಾರೆ(ಇ-ಶ್ರಮ್ ಕಾರ್ಡ್ ಮೇಲೆ ಮುದ್ರಿಸಲಾಗಿರುತ್ತದೆ). ಈ ಸಂಖ್ಯೆಯು ದೇಶಾದ್ಯಂತ ಸ್ವೀಕಾರಾರ್ಹವಾಗಿರುತ್ತದೆ ಅಲ್ಲದೆ, ಇದನ್ನು ಪಡೆದ ಬಳಿಕ ಕಾರ್ಮಿಕರು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ವಿವಿಧ ಸ್ಥಳಗಳಲ್ಲಿ ಮತ್ತೆ ನೋಂದಾಯಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಯಾವುದೇ ಕಾರ್ಮಿಕ ʻಇ-ಶ್ರಮ್ʼ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡ ಬಳಿಕ ಅಪಘಾತಕ್ಕೀಡಾಗಿ ಮೃತಪಟ್ಟರೆ ಅಥವಾ ಶಾಶ್ವರ ಅಂಗವೈಕಲ್ಯಕ್ಕೆ ಒಳಗಾದರೆ 2.0 ಲಕ್ಷ ರೂ. ಮತ್ತು ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 1.0 ಲಕ್ಷ ರೂ. ವಿಮಾ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.